ಮಗನ ಸಾವು ಸಹಿಸದೇ ವೃದ್ಧ ದಂಪತಿ ಆತ್ಮಹತ್ಯೆ; ಮರಣಪತ್ರದಲ್ಲಿ ಅಡಗಿದೆ ಕಣ್ಣೀರಿನ ಕಥೆ
Viral News | India News: ರಾಯ್ಪುರ (ಛತ್ತೀಸ್ಗಢ): “ಅವನೇ ನಮ್ಮ ಪ್ರಪಂಚವಾಗಿದ್ದ, ಈಗ ಅವನಿಲ್ಲದ ಮೇಲೆ ಈ ಬದುಕು ನಮಗೆ ಬೇಡ…” ಇಂತದೊಂದು ಮನಕಲಕುವ ಡೆತ್ನೋಟ್ ಬರೆದಿಟ್ಟು ಛತ್ತೀಸ್ಗಢದ ಜಂಜಗೀರ್-ಚಂಪಾ ಜಿಲ್ಲೆಯ ದಂಪತಿ ನೇಣಿಗೆ ಶರಣಾಗಿದ್ದಾರೆ. ಕೇವಲ ಒಂದು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಮ್ಮ ಏಕೈಕ ಮಗನ ಸಾವಿನ ದುಃಖವನ್ನು ಭರಿಸಲಾಗದೆ ಈ ದಂಪತಿ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ.
ಜಿಲ್ಲೆಯ ಧರ್ದೇಯಿ ಗ್ರಾಮದ ನಿವಾಸಿಗಳಾದ ಕೃಷ್ಣ ಪಟೇಲ್ (48) ಮತ್ತು ರಮಾ ಬಾಯಿ (47) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಬೆಳಿಗ್ಗೆ ಇವರ ಮನೆಯ ಅಂಗಳದ ಬೇವಿನ ಮರಕ್ಕೆ ದಂಪತಿಗಳು ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ಕೃಷ್ಣ ಪಟೇಲ್ ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದರು.
ಮಗನ ಸಾವಿನಿಂದ ಆವರಿಸಿದ್ದ ಮೌನ:
ದಂಪತಿಯ ಏಕೈಕ ಪುತ್ರ ಆದಿತ್ಯ ಪಟೇಲ್ (21), 2024ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದನು. ಮಗನ ಸಾವಿನ ನಂತರ ದಂಪತಿಗಳು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಯಾರೊಂದಿಗೂ ಹೆಚ್ಚಾಗಿ ಮಾತನಾಡದೆ ಮನೆಯಲ್ಲೇ ಮೌನವಾಗಿರುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
PM KISAN 22nd Instalment: 9 ಕೋಟಿ ರೈತರಿಗೆ ಬಿಗ್ ಅಪ್ಡೇಟ್; ಹಣ ಜಮಾ ಯಾವಾಗ?
4 ಪುಟಗಳ ಮರಣಪತ್ರ ಮತ್ತು ವಿಡಿಯೋ ಸಂದೇಶ:
ಆತ್ಮಹತ್ಯೆಗೂ ಮುನ್ನ ದಂಪತಿಗಳು 4 ಪುಟಗಳ ಡೆತ್ನೋಟ್ ಮತ್ತು ಒಂದು ವಿಡಿಯೋ ಸಂದೇಶವನ್ನು ರೆಕಾರ್ಡ್ ಮಾಡಿದ್ದಾರೆ.
- “ದೊಡ್ಡ ತಪ್ಪು ಮಾಡಿದೆ”: “ಆವತ್ತು ದೇವಸ್ಥಾನದ ಕೆಲಸಕ್ಕೆ ಮಗನನ್ನು ಕಳುಹಿಸಬೇಡ ಎಂದು ಮನಸ್ಸು ಹೇಳುತ್ತಿತ್ತು. ಆದರೆ ದೇವರ ಕೆಲಸ ಎಂದು ನಾನೇ ಒತ್ತಾಯ ಮಾಡಿ ಕಳುಹಿಸಿದೆ. ಅದೇ ನನ್ನ ಜೀವನದ ದೊಡ್ಡ ತಪ್ಪು” ಎಂದು ಕೃಷ್ಣ ಪಟೇಲ್ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.
- ಪರಿಹಾರದ ಹಣದ ಬಗ್ಗೆ ಉಲ್ಲೇಖ: ಅಪಘಾತದ ನಂತರ ಸರ್ಕಾರದಿಂದ ಬರುವ ವಿಮಾ ಪರಿಹಾರದ ಹಣವನ್ನು ತಮ್ಮ ಅಣ್ಣಂದಿರಿಗೆ ನೀಡಬೇಕು ಎಂದು ವಕೀಲರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
- ದೂಷಿಸಬೇಡಿ: “ನಮ್ಮ ಸಾವಿಗೆ ಯಾರೂ ಕಾರಣರಲ್ಲ, ನಾವು ಇಷ್ಟಪಟ್ಟು ಶಿವನ ಪಾದ ಸೇರುತ್ತಿದ್ದೇವೆ. ನಮಗಾಗಿ ಯಾರೂ ಅಳಬಾರದು, ಸಂತೋಷದಿಂದ ಬೀಳ್ಕೊಡಿ” ಎಂದು ಬರೆದಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇಡೀ ಗ್ರಾಮವೇ ಈ ದಂಪತಿಗಳ ಮಗನ ಪ್ರೀತಿ ಮತ್ತು ಸಾವಿನ ಕಥೆಯನ್ನು ಕೇಳಿ ಕಣ್ಣೀರು ಹಾಕುತ್ತಿದೆ.
ಗಮನಿಸಿ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ.



