Teacher Scolding : ಶಿಕ್ಷಕರು ವಿದ್ಯಾರ್ಥಿಗೆ ಬೈಯ್ಯುವುದು, ಶಿಕ್ಷೆ ವಿಧಿಸುವುದು ಅಪರಾಧವಲ್ಲ : ಬಾಂಬೆ ಹೈಕೋರ್ಟ್‌ ತೀರ್ಪು

ಮುಂಬೈ : Teacher Scolding : ಶಾಲೆಯಲ್ಲಿ ಶಿಸ್ತು ಕಾಯ್ದುಕೊಳ್ಳುವ ಸಲುವಾಗಿ ಶಿಕ್ಷಕರು ಮಗುವಿಗೆ ಗದರಿಸುವುದು, ಶಿಕ್ಷೆ ವಿಧಿಸುವುದು ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು ವಿಧಿಸಿದೆ. ಅಲ್ಲದೇ ಪ್ರಾಧಮಿಕ ಶಾಲಾ ಶಿಕ್ಷಕನಿಗೆ ವಿಧಿಸಲಾಗಿದ್ದ ಒಂದು ದಿನದ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಮಕ್ಕಳಲ್ಲಿ ಶಿಸ್ತು ರೂಢಿಸುವ ಸಲುವಾಗಿ ಶಾಲೆಗಳಲ್ಲಿ ಶಿಕ್ಷಕರು ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ತೀರಾ ಸಾಮಾನ್ಯ. ಜೊತೆಗೆ ಕೆಲವೊಮ್ಮೆ ಕೊಂಚ ಕಠೋರವಾಗಿ ವರ್ತಿಸಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಲ್ಲಿ ಏಕ ಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಭರತ್‌ ದೇಶಪಾಂಡೆ ಈ ತೀರ್ಪು ಮಹತ್ವದ ನೀಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಕೇವಲ ಕಲಿಕೆಯ ದೃಷ್ಟಿಯಿಂದಷ್ಟೇ ಅಲ್ಲದೇ ಶಿಸ್ತನ್ನು ಮೂಡಿಸುವ ಸಲುವಾಗಿ ಶಾಲೆಗಳು ಮಹತ್ವದ್ದಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ವಿಷಯಗಳನ್ನು ಕಲಿಸುವುದು ಮಾತ್ರವಲ್ಲ, ಅಂತಹ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ರೂಪಿಸುವುದು ಕೂಡ ಶಿಕ್ಷಕರ ಕರ್ತವ್ಯ. ಶಿಕ್ಷಕರು ಉತ್ತಮ ಶಿಕ್ಷಣ ನೀಡಿದ್ರೆ ಮಾತ್ರ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಡವಳಿಕೆ ಮತ್ತು ಉತ್ತಮ ಸ್ವಭಾವದ ವ್ಯಕ್ತಿಗಳಾಗುತ್ತಾರೆ ಎಂದು ಹೈಕೋರ್ಟ್‌ ಹೇಳಿದೆ.

ಏನಿದು ಪ್ರಕರಣ ?
2014ರಲ್ಲಿ ಐದು ಮತ್ತು ಎಂಟು ವರ್ಷದ ಇಬ್ಬರು ಬಾಲಕಿಯರಿಗೆ ಶಿಕ್ಷಕರೊಬ್ಬರು ಹೊಡೆದಿದ್ದರು. ಬಾಲಕಿಯೋರ್ವಳು ತನ್ನ ಬಾಟಲಿಯಲ್ಲಿದ್ದ ನೀರು ಕುಡಿದು ಮುಗಿಸಿದ ಬಳಿಕ ಬೇರೊಬ್ಬ ಬಾಲಕಿಯ ಬಾಟಲಿಯಿಂದ ನೀರು ಕುಡಿದಿದ್ದಳು. ಇದನ್ನು ವಿಚಾರಿಸಲು ಬಂದ ಬಾಲಕಿಯ ಅಕ್ಕನ ಕೈಗೆ ರೂಲರ್‌ ಹಿಡಿದು ಶಿಕ್ಷಕರು ಹೊಡೆದಿದ್ದರು ಅನ್ನೋದು ಆರೋಪ. ಪ್ರಕರಣಕ್ಕೆ ಸಂಬಂಧಿಸಿದಂತೆ 2019 ರಲ್ಲಿ ಗೋವಾ ಮಕ್ಕಳ ನ್ಯಾಯಾಲಯವು ನೀಡಿದ ಆದೇಶದ ಮೂಲಕ ಶಿಕ್ಷಕನನ್ನು ತಪ್ಪಿತಸ್ಥರೆಂದು ಘೋಷಿಸಲಾಗಿತ್ತು. ಅಲ್ಲದೇ ಆರೋಪಿ ಶಿಕ್ಷಕನಿಗೆ ಒಂದು ದಿನದ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು.

ಬಾಲಕಿಯ ಮತ್ತೊಬ್ಬ ಬಾಲಕಿಯ ಬಾಟಲಿಯಿಂದ ನೀರು ಕುಡಿಯವುದು ಖಚಿತವಾಗಿಯೂ ಶಾಲಾ ಶಿಸ್ತಿನ ಉಲ್ಲಂಘನೆ. ಈ ಕುರಿತು ಬಾಲಕಿಯ ಪೋಷಕರು ಶಿಕ್ಷಕರಿಗೆ ದೂರು ನೀಡಿದ್ದರು. ಶಾಲೆಯಲ್ಲಿ ಶಿಸ್ತನ್ನು ಪಾಲಿಸಬೇಕಾದ ಶಿಕ್ಷಕರು ಹೊಣೆಗಾರಿಕೆಯ ಹಿನ್ನೆಲೆಯಲ್ಲಿ ದಂಡಿಸಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಅಂತಹ ಸಂದರ್ಭಗಳಲ್ಲಿ, ಆರೋಪಿಯು ಶಿಕ್ಷಕನಾಗಿರುವುದರಿಂದ ಶಾಲಾ ಶಿಸ್ತು ಪಾಲನೆಗೆ ಅನುಗುಣವಾಗಿ ನಡೆದುಕೊಳ್ಳಲು ಬದ್ಧನಾಗಿರುತ್ತಾನೆ. ತನ್ನ ಸ್ವಂತ ತರಗತಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು, ಕೆಲವೊಮ್ಮೆ, ವಿದ್ಯಾರ್ಥಿಗಳು ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಮತ್ತು ಪದೇ ಪದೇ ಅಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ಸಮಂಜಸವಾದ ಶಿಕ್ಷೆಯನ್ನೂ ಕೊಡಬೇಕಾಗುತ್ತದೆ ಎಂದು ನ್ಯಾಯಾಲಯವು ತೀರ್ಪು ನೀಡಿದೆ.

ಇನ್ನು ಶಿಕ್ಷಕರು ಬಾಲಕಿಯರಿಗೆ ಹೊಡೆಯಲು ಸ್ಕೇಲ್‌ ಬಳಸಿದ್ದರಾ ? ಅಥವಾ ಬೆತ್ತ ಬಳಸಿದ್ದರಾ ಅನ್ನೋದನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸುವ ವೇಳೆಯಲ್ಲಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದರು. ಅಲ್ಲದೇ ಶಿಕ್ಷೆ ನೀಡುವುದಕ್ಕೆ ಬೆತ್ತ ಅಥವಾ ಸ್ಕೇಲ್‌ ಬಳಸಿದಕ್ಕೆ ಸಂಬಂಧಿಸಿ ಖಚಿತವಾದ ಮಾಹಿತಿ ಇಲ್ಲ. ಆದ್ದರಿಂದ ಇಲ್ಲಿ ಶಿಕ್ಷಕ ಬೆತ್ತ ಅಥವಾ ರೂಲರ್‌ ಬಳಸಿದ್ದ ವಿಚಾರದಲ್ಲಿ ಬಲವಾದ ಸಂದೇಹವೂ ಇದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಸಮಾಜದಲ್ಲಿ ಶಿಕ್ಷಕರಿಗೆ ಹೆಚ್ಚಿನ ಗೌರವವಿದೆ. ಅವರು ನಮ್ಮ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬು. ಕ್ಷುಲ್ಲಕ ವಿಷಯಗಳಿಗೆ ಮತ್ತು ಹೆಚ್ಚು ನಿರ್ದಿಷ್ಟವಾಗಿ ಮಕ್ಕಳನ್ನು ಸರಿಪಡಿಸುವಾಗ ಶಿಕ್ಷಕರು ಇಂತಹ ಆರೋಪಗಳ ಭಯದಲ್ಲಿದ್ದರೆ, ಶಾಲೆಗಳನ್ನು ನಡೆಸುವುದು ಕಷ್ಟವಾಗುತ್ತದೆ. ಇದರಿಂದಾಗಿ ಸರಿಯಾದ ಶಿಕ್ಷಣ ಮತ್ತು ಹೆಚ್ಚು ನಿರ್ದಿಷ್ಟವಾಗಿ ಶಿಸ್ತು ಕಾಪಾಡುವುದು. ಸುಸಂಸ್ಕೃತ ಸಮಾಜಕ್ಕೆ ಒಬ್ಬರನ್ನೊಬ್ಬರು ಗೌರವಿಸುವ ಮತ್ತು ರಾಷ್ಟ್ರದ ಭವಿಷ್ಯದ ಪೀಳಿಗೆ ಎಂದು ಪರಿಗಣಿಸುವ ಸುಸಂಸ್ಕೃತ ಯುವ ಪೀಳಿಗೆಯ ಅಗತ್ಯವಿದೆ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ : Revival of govt school: ಮುಚ್ಚುತ್ತಿದ್ದ ಸರಕಾರಿ ಶಾಲೆಗೆ ಮರುಜೀವ: ವಾತಾವರಣವನ್ನೇ ಬದಲಾಯಿಸಿದ ಹಳೆ ವಿದ್ಯಾರ್ಥಿಗಳು

ಇದನ್ನೂ ಓದಿ : Tips For Students : ಪರೀಕ್ಷೆಗೆ ಮಾನಸಿಕವಾಗಿ ಸಿದ್ಧರಾಗಿ; ಆತಂಕ ದೂರ ಮಾಡಿಕೊಳ್ಳಿ

Teacher Scolding, Punishing A Student is not offence says Bombay HC

Comments are closed.