Cabinet Expansion : ಬಿಜೆಪಿ ಹೈಕಮಾಂಡ್‌ ಮಾಸ್ಟರ್‌ ಫ್ಲ್ಯಾನ್‌ : ಮತ್ತೆ ಮುಂದೂಡಿಕೆಯಾಯ್ತು ಸಂಪುಟ ವಿಸ್ತರಣೆ

ಬೆಂಗಳೂರು : ಸಂಪುಟ ಸರ್ಕಸ್ ನ (Cabinet Expansion ) ಭಾರ ಹೊತ್ತು ದೆಹಲಿಗೆ ತೆರಳಿದ್ದ ಸಿಎಂ ಬೊಮ್ಮಾಯಿ ಮತ್ತೊಮ್ಮೆ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ಮಾತ್ರವಲ್ಲ ಸಂಪುಟ ವಿಸ್ತರಣೆಗೆ ಮತ್ತೊಂದು ಮುಹೂರ್ತದೊಂದಿಗೆ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಮಾಧಾನ ಮಾಡಿದ್ದಾರೆ. ಆದರೆ ಇದು ಆಕ್ರಮಣಕಾರಿ ಆಟಕ್ಕಿಂತ ರಕ್ಷಣಾತ್ಮಕ ಆಟ ಉತ್ತಮ ಎಂಬ ಹೈಕಮಾಂಡ್ ನೀತಿ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಹೌದು ಬಿಜೆಪಿ ರಾಜಕೀಯದ ಮಟ್ಟಿಗೆ ಸಚಿವ ಸಂಪುಟ ವಿಸ್ತರಣೆ ಅನ್ನೋದು ಜೇನುಗೂಡಿಗೆ ಕಲ್ಲು ಎಸೆದಂತೆ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಚಿವ ಸಂಪುಟ ವಿಸ್ತರಣೆಯನ್ನು ಸಾಧ್ಯವಾದಷ್ಟು ಮುಂದೂಡುತ್ತಲೇ ಬಂದಿದೆ. ಇನ್ನೇನು ಚುನಾವಣೆಗೆ ದಿನಗಣನೆ ನಡೆದಂತ ಸ್ಥಿತಿಯಲ್ಲಿದೆ‌ ಕರ್ನಾಟಕ. ಹೀಗಾಗಿ ಈ ಹೊತ್ತಿನಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಕೈಹಾಕೋದು ಅನಗತ್ಯ ಸಮಸ್ಯೆಗೆ ಆಸ್ಪದ ಕೊಟ್ಟಂತಾಗಲಿದೆ ಅನ್ನೋದು ಬಿಜೆಪಿ ಲೆಕ್ಕಾಚಾರ.

ಸಂಪುಟ ವಿಸ್ತರಣೆಯಾದರೇ ಸಹಜವಾಗಿಯೇ ಹಲವರು ಸ್ಥಾನಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಸ್ಥಾನ ಪಡೆದುಕೊಳ್ಳುತ್ತಾರೆ. ಸ್ಥಾನ ಕಳೆದುಕೊಂಡು ಸಹಜವಾಗಿಯೇ ಅಸಮಧಾನದಿಂದ ಪಕ್ಷ ವಿರೋಧಿ ಚಟುವಟಿಕೆಗೆ‌ ಮುಂದಾಗುತ್ತಾರೆ. ಹೀಗಾಗಿ ಚುನಾವಣೆ ಹೊತ್ತಿನಲ್ಲಿ ಈ ಸಮಸ್ಯೆ ತಂದುಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಇನ್ನೊಂದೆಡೆ ರಾಜ್ಯ ಬಿಜೆಪಿಗೆ ದೊಡ್ಡ ತಲೆನೋವಾಗಿರೋದು ರಮೇಶ್ ಜಾರಕಿಹೊಳಿ. ಸದ್ಯ ಸಂಪುಟದಿಂದ ಹೊರಗಿರೋ ರಮೇಶ್ ಶತಾಯ ಗತಾಯ ಸಂಪುಟ ಸೇರೋ ಸರ್ಕಸ್ ನಲ್ಲಿದ್ದಾರೆ.

ರಮೇಶ್ ಸಂಪುಟಕ್ಕೆ ಎಂಟ್ರಿ ಪಡೆಯೋ ಸಿದ್ಧತೆಯಲ್ಲಿದ್ದಾರೆ. ಇದಕ್ಕಾಗಿ‌ ದೆಹಲಿಗೆ ಹತ್ತಾರು ಭಾರಿ ದೌಡಾಯಿಸಿದ್ದಾರೆ. ಒಂದೊಮ್ಮೆ ರಮೇಶ್ ಜಾರಕಿಹೊಳಿ ಸಂಪುಟ ಸೇರುವ ಕನಸು ವಿಫಲಗೊಂಡಲ್ಲಿ ರಮೇಶ್ ಸರ್ಕಾರವನ್ನೇ ಉರುಳಿಸುವ ಪ್ರಯತ್ನ ಮಾಡಿದರೂ ಅಚ್ಚರಿಯೇನಿಲ್ಲ. ಹೀಗಾಗಿ ಚುನಾವಣೆ ಹೊತ್ತಿನಲ್ಲಿ ಈ ರಿಸ್ಕ್ ತೆಗೆದುಕೊಳ್ಳೋದೇ ಬೇಡ ಎಂದು ತೀರ್ಮಾನ ಮಾಡಿರೋ ಬಿಜೆಪಿ ಮುಂದಿನ ಚುನಾವಣೆವರೆಗೂ ಸಂಪುಟ ವಿಸ್ತರಣೆ ಎಂಬ ಸಂಗತಿಯನ್ನು ಮೂಗಿಗೆ ತುಪ್ಪ ಸವರಿದಂತೆ ಆಸೆ ತೋರಿಸುತ್ತಲೇ ಸಮಯ ಕಳೆಯಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ಮೊದಲು ಪಂಚ ರಾಜ್ಯ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡೋದಾಗಿ ಹೇಳಿದ್ದ ಹೈಕಮಾಂಡ್ ಬಳಿಕ ಯುಗಾದಿಗೆ ಸಿಹಿಸುದ್ದಿ ಎಂದಿತ್ತು. ಆದರೆ ಈಗ ಯುಗಾದಿ ಕಳೆದರೂ ಸಂಪುಟ ವಿಸ್ತರಣೆಯ ಪ್ರಸ್ತಾಪವೇ ಇಲ್ಲ. ಇದೇ ಆಕಾಂಕ್ಷೆ ಹೊತ್ತು ದೆಹಲಿಗೆ ದೌಡಾಯಿಸಿದ್ದ ಬೊಮ್ಮಾಯಿಗೆ ವರಿಷ್ಠರು ಇದನ್ನೇ ಮನವರಿಕೆ ಮಾಡಿಸಿದ್ದು, ಸದ್ಯವೇ ನಡೆಯಲಿರುವ ಕಾರ್ಯಕಾರಿಣಿ ಬಳಿಕ ಸಂಪುಟ ವಿಸ್ತರಣೆ ಮಾಡೋದಾಗಿ ಘೋಷಿಸಿ ಆಕಾಂಕ್ಷಿಗಳನ್ನು ಸಮಾಧಾನಿಸಲು ಸೂಚಿಸಿದ್ದಾರಂತೆ. ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಸದ್ಯ ಬೀಸೋ ದೊಣ್ಣೆ ತಪ್ಪಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ : Zameer Ahmed Khan : ರಾಹುಲ್ ಕಾರ್ಯಕ್ರಮಕ್ಕೂ ಗೈರಾದ್ರು ಜಮೀರ್ : ಸದ್ಯದಲ್ಲೇ ಕಾಂಗ್ರೆಸ್‌ಗೆ ಗುಡ್‌ಬೈ

ಇದನ್ನೂ ಓದಿ : ಸಂಪುಟ ವಿಸ್ತರಣೆ ಮಾಡಿದರೂ, ಮಾಡದೇ ಇದ್ದರೂ ಸಂಕಷ್ಟ ಸಿ.ಎಂಗೇ?

BJP High Command Master plan, Postponed Cabinet Expansion

Comments are closed.