ಬೆಂಗಳೂರು : ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರಿಗೆ ಸೇರಿದ ಐಶಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯ ಬೆನ್ನಲ್ಲೇ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆಯನ್ನು ನಡೆಸಿದ್ದಾರೆ. ಅಲ್ಲದೇ ಮೂರು ಠಾಣೆಗಳ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಈ ನಡುವಲ್ಲೇ ಘಟನೆಯ ಕುರಿತು ಶಾಸಕ ಸತೀಶ್ ರೆಡ್ಡಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ರಾತ್ರಿ 1 ಗಂಟೆ 23 ನಿಮಿಷದ ವೇಳೆಯಲ್ಲಿ ಇಬ್ಬರು ದುಷ್ಕರ್ಮಿಗಳು ಮನೆಯ ಹಿಂಬದಿಯ ಗೇಟ್ನಿಂದ ಮನೆಯ ಆವರಣ ಪ್ರವೇಶ ಮಾಡಿದ್ದಾರೆ. ತಾವು ತಂದಿದ್ದ ಪೆಟ್ರೋಲ್ ಸುರಿದು ಫಾರ್ಚೂನರ್ ಹಾಗೂ ಜೀಪ್ ಕಾರುಗಳಿಗೆ ಬೆಂಕಿ ಇಟ್ಟಿದ್ದಾರೆ. ಸುಮಾರು ನಾಲ್ಕು ನಿಮಿಷಗಳ ಕಾಲ ಮನೆಯ ಆವರಣದಲ್ಲಿಯೇ ಓಡಾಡಿಕೊಂಡಿದ್ದು, 1 ಗಂಟೆ 32 ನಿಮಿಷದ ಸುಮಾರಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರಿನ ಬ್ಯಾಟರಿ ಬ್ಲಾಸ್ಟ್ ಆದ ಸದ್ದು ಕೇಳಿ ನಾವು ಎಚ್ಚರಗೊಂಡು ಹೊರಗೆ ಬಂದಿದ್ದೇವೆ. ಈ ವೇಳೆಯಲ್ಲಿ ಕಾರುಗಳು ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು ಎಂದಿದ್ದಾರೆ.
ಇದನ್ನೂ ಓದಿ : BJP MLA : ಶಾಸಕ ಸತೀಶ್ ರೆಡ್ಡಿಗೆ ಸೇರಿದ ಎರಡು ಕಾರುಗಳಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು
ಕೂಡಲೇ ಮರಳು ಹಾಗೂ ನೀರನ್ನು ಬಳಸಿ ಬೆಂಕಿಯನ್ನ ನಂದಿಸುವ ಕಾರ್ಯವನ್ನು ಮಾಡಿದ್ದೇವೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಾತ್ರಿ ಎರಡೂ ಗಂಟೆಯ ಒಳಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ದುಷ್ಕರ್ಮಿಗಳ ಕೃತ್ಯ ಸಂಪೂರ್ಣವಾಗಿ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ ಪೊಲೀಸರು ಕೂಡ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ತಾನು ಎಲ್ಲಾ ಮಾಹಿತಿಯನ್ನೂ ಅವರಿಗೆ ನೀಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : 10 ದಿನದಲ್ಲಿ 500 ಮಕ್ಕಳಿಗೆ ಕೊರೊನಾ : ಬೆಂಗಳೂರಲ್ಲಿ ಶುರುವಾಯ್ತಾ 3ನೇ ಅಲೆ
ಯಾರೂ ಈ ದುಷ್ಕೃತ್ಯವನ್ನು ಯಾರು ಮಾಡಿದ್ದಾರೆ ಅನ್ನೋದು ತಿಳಿದುಬಂದಿಲ್ಲ. ನಾನು ಸುಮಾರು ಕಳೆದ ಹದಿನೈದು ಇಪತ್ತು ವರ್ಷಗಳಿಂದಲೂ ರಾಜಕೀಯದಲ್ಲಿದ್ದೇನೆ. ಎಲ್ಲಾ ಪಕ್ಷದಲ್ಲಿಯೂ ನನ್ನ ಸ್ನೇಹಿತರಿದ್ದಾರೆ. ಆದರೆ ರಾಜಕೀಯವಾಗಿ ಈ ಕೃತ್ಯ ನಡೆದಿರುವ ಸಾಧ್ಯತೆ ಕಡಿಮೆ. ಬೇರೆಯ ಕಾರಣಕ್ಕೆ ಈ ಕೃತ್ಯ ನಡೆದಿರಬಹುದು. ಯಾರನ್ನೂ ಬೇಕಾದ್ರೂ ಟಾರ್ಗೇಟ್ ಮಾಡಬಹುದು ಅನ್ನೋ ಕಾರಣಕ್ಕೆ ಈ ಕೃತ್ಯ ನಡೆದಿರುವ ಸಾಧ್ಯತೆಯಿದೆ. ಅಲ್ಲದೇ ಕಾರುಗಳಿಗೆ ಬೆಂಕಿ ಹಚ್ಚಿ ಹೆದರಿಸಬಹುದು ಅನ್ನೋ ಕಾರಣಕ್ಕೆ ಈ ಕೃತ್ಯವನ್ನು ದುಷ್ಕರ್ಮಿಗಳು ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಪೊಲೀಸರು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತಾರೆ ಎಂದಿದ್ದಾರೆ.