Jarakiholi Master Plan : ಲಖನ್ ಬಿಜೆಪಿ ಸೇರ್ಪಡೆಗೆ ಸಿದ್ಧವಾಯ್ತು ಮಾಸ್ಟರ್ ಪ್ಲ್ಯಾನ್ : ಹೈಕಮಾಂಡ್ ಮುಂದೇ ಷರತ್ತು ಇಟ್ಟ ರಮೇಶ್

ಬೆಂಗಳೂರು : ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ವಿಧಾನಪರಿಷತ್ ನಲ್ಲಿ ಅಂಗೀಕಾರವಾಗಲು ಬಹುಮತದ ಕೊರತೆ ಇದೆ. ಬಿಜೆಪಿ ಪರಿಷತ್ ನಲ್ಲಿ ಬಹುಮತ ಪಡೆಯಲು ಕೊರತೆ ಇರುವ ಒಂದು ಸೀಟ್ ಗಾಗಿ ಪರದಾಟ ನಡೆಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ (Jarakiholi Master Plan) ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಪ್ಲ್ಯಾನ್ ಮಾಡಿದ್ದಾರೆ.

ಸದ್ಯ ಪರಿಷತ್ ನಲ್ಲಿ 28 ಸ್ಥಾನಗಳನ್ನು ಹೊಂದಿರುವ ಬಿಜೆಪಿಗೆ ಜನವರಿ ವೇಳೆಗೆ ಹಳೆ ಸದಸ್ಯರ ನಿವೃತ್ತಿ ಹಾಗೂ ಹೊಸ ಸದಸ್ಯರ ಆಗಮನದಿಂದ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತದೆ. ಆದರೂ ಕೂಡ ಬಹುತಮ ಪಡೆಯಲು ಹಾಗೂ ಮಸೂದೆಗಳನ್ನು ಅಂಗೀಕರಿಸಲು ಒಂದು ಮತದ ಕೊರತೆಯಾಗುತ್ತದೆ. ಇದನ್ನೇ ಬಂಡವಾಳ‌ಮಾಡಿಕೊಂಡಿರುವ ರಮೇಶ್ ಜಾರಕಿಹೊಳಿ ಪಕ್ಷೇತರವಾಗಿ ಗೆದ್ದಿರುವ ಸಹೋದರನನ್ನು ಬಿಜೆಪಿಗೆ ಸೇರಿಸಿ ಪಕ್ಷಕ್ಕೆ ಬಲ ತುಂಬಲು ನಿರ್ಧರಿಸಿದ್ದಾರೆ. ಇದರಲ್ಲಿ ಸ್ವಾಮಿ ಕಾರ್ಯ ಹಾಗೂ ಸ್ವಕಾರ್ಯ ಎರಡೂ ಅಡಗಿದೆ ಎಂಬುದು ಗಮನಿಸಬೇಕಾದ ಅಂಶ.

ಲಖನ್ ಜಾರಕಿಹೊಳಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದು ಆ ಮೂಲಕ ಪರಿಷತ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂಬ ಆರೋಪ ಹಾಗೂ ಶಿಸ್ತು ಕ್ರಮದಿಂದ ಪಾರಾಗುವುದು ರಮೇಶ್ ಜಾರಕಿಹೊಳಿ ಲೆಕ್ಕಾಚಾರ. ಇದಕ್ಕಾಗಿ ರಮೇಶ್ ಜಾರಕಿಹೊಳಿ ಚಳಿಗಾಲದ ಬೆಳಗಾವಿ ಅಧಿವೇಶನವನ್ನು ಬಿಟ್ಟು ದೆಹಲಿಯಲ್ಲಿ ಬೀಡುಬಿಟ್ಟಿದ್ದು ಹೈಕಮಾಂಡ್ ಭೇಟಿ ಹಾಗೂ ಸಹೋದರನ ಬಿಜೆಪಿ ಸೇರ್ಪಡೆ ಮಾತುಕತೆ ನಡೆಸುತ್ತಿದ್ದಾರೆ.

ಅಲ್ಲದೇ ಸಹೋದರನನ್ನು ಪಕ್ಷಕ್ಕೆ ಸೇರಿಸಲು ರಮೇಶ್ ಜಾರಕಿಹೊಳಿ ಹೈಕಮಾಂಡ್ ಗೆ ಹಲವು ಷರತ್ತು ಇಟ್ಟಿದ್ದಾರೆ ಎನ್ನಲಾಗಿದೆ. ಮೊದಲನೆಯದಾಗಿ ತಮ್ಮನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳಬೇಕು. ಅಲ್ಲದೇ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಬಿಜೆಪಿ ಅಭ್ಯರ್ಥಿಪರ ಕೆಲಸ ಮಾಡಲು ಬರದೇ ಕೈಕೊಟ್ಟ ಪಕ್ಷದ ವರಿಷ್ಠರ ವಿರುದ್ಧ ಕ್ರಮವಾಗಬೇಕು. ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಠಗಿಮಠ್ ಸೋಲಿನ ಪರಾಮರ್ಶೆಯಾಗಬೇಕು. ಅಲ್ಲದೇ ತಮಗೆ ಸಚಿವ ಸ್ಥಾನದ ಜೊತೆಗೆ ಬೆಳಗಾವಿ ಉಸ್ತುವಾರಿಯನ್ನು ನೀಡಬೇಕೆಂದು ರಮೇಶ್ ಜಾರಕಿಹೊಳಿ ಹೈಕಮಾಂಡ್ ಗೆ ಬೇಡಿಕೆ ಇಟ್ಟಿದ್ದಾರೆ.

ಹೀಗಾಗಿ ಸದ್ಯದಲ್ಲೇ ರಮೇಶ್ ಜಾರಕಿಹೊಳಿ ದೆಹಲಿಯಿಂದ ಸಿಹಿಸುದ್ದಿಯೊಂದಿಗೆ ರಾಜ್ಯಕ್ಕೆ ಮರಳಲಿದ್ದು, ಪಕ್ಷೇತರರಾಗಿ ಗೆದ್ದ ಲಖನ್ ಜಾರಕಿಹೊಳಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಪರಿಷತ್ ನಲ್ಲಿ ಕಮಲ ಪಾಳಯದ ಸಂಖ್ಯೆ ಹೆಚ್ಚಿಸಲು ನೆರವಾಗಲಿದ್ದಾರೆ.

ಇದನ್ನೂ ಓದಿ : ತೀವ್ರ ಪರ ವಿರೋಧದ ನಡುವೆಯೇ ಮತಾಂತರ ನಿಷೇಧ ವಿಧೇಯಕ ಅಂಗೀಕಾರ; ಸದನದಲ್ಲಿ ಇಂದು ಆದದ್ದೇನು?

ಇದನ್ನೂ ಓದಿ : ಸಂಕ್ರಾಂತಿಗೂ ಮುನ್ನ ಸಿಎಂ ಬದಲಾವಣೆ : ಮುಖ್ಯಮಂತ್ರಿ ಆಯ್ಕೆಗೆ ಬರ್ತವ್ರೇ ಅಮಿತ್ ಶಾ

( Lakhan Jarkiholi join bjp, Ramesh Jarakiholi Master Plan)

Comments are closed.