LR Shivarame Gowda : ಮಾತೇ ಮುಳುವಾಯ್ತು ಮಾಜಿ ಸಂಸದರಿಗೆ : ಜೆಡಿಎಸ್ ನಿಂದ ಶಿವರಾಮೇ ಗೌಡ ಉಚ್ಛಾಟನೆ

ಬೆಂಗಳೂರು : ಚುನಾವಣೆ ವೆಚ್ಚದ ಲೆಕ್ಕಾಚಾರದ ಮಾತುಕತೆಯೊಂದಿಗೆ ಆರಂಭಗೊಂಡ ಶಿವರಾಮೇ ಗೌಡ ಪ್ರಕರಣ, ಈಗ ಶಿವರಾಮೇ ಗೌಡರನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡುವುದರೊಂದಿಗೆ ಅಂತ್ಯ ಕಂಡಿದೆ. ಜೆಡಿಎಸ್ ನಾಯಕ ಹಾಗೂ ಮಾಜಿ ಸಂಸದ ಎಲ್.ಆರ್. ಶಿವರಾಮೇ ಗೌಡರಿಗೆ (LR Shivarame Gowda) ಮಾತೇ ಮುಳುವಾಗಿದೆ. ಮಂಡ್ಯ ಕ್ಷೇತ್ರದ ಕಾರ್ಯಕರ್ತೆಯೊಂದಿಗೆ ಪೋನ್ ನಲ್ಲಿ ಸುದೀರ್ಘವಾಗಿ ಮಾತನಾಡಿದ್ದ ಶಿವರಾಮೇ ಗೌಡರು ತಮ್ಮ ರಾಜಕೀಯ ಜೀವನದ ಏಳುಬೀಳುಗಳನ್ನು ಹಂಚಿಕೊಂಡಿದ್ದರು.

ಈ ವೇಳೆ ಚುನಾವಣೆಗೆ 30 ಕೋಟಿ ವೆಚ್ಚ ಮಾಡಿದ್ದೇನೆ ಎಂದಿದ್ದರು. ಮಾತ್ರವಲ್ಲ ಮುಂಬರುವ ಚುನಾವಣೆಗೂ ಇಷ್ಟೇ ಹಣವನ್ನು ಖರ್ಚು ಮಾಡಲು ಸಿದ್ಧವಾಗಿರೋದಾಗಿ ಹೇಳಿದ್ದರು. ಅಷ್ಟೇ ಅಲ್ಲ ಚುನಾವಣೆಯಲ್ಲಿ ತಮಗಾದ ಅನ್ಯಾಯ, ಸುರೇಶ್ ಗೌಡನ ವಿರುದ್ಧ ಅಕ್ರೋಶವನ್ನು ತೋಡಿಕೊಂಡಿದ್ದರು. ಅಲ್ಲದೇ ಮಾಜಿ ಸಂಸದ ಹಾಗೂ ಕಾವೇರಿ ಹೋರಾಟಗಾರ ರಾದ ಮಾದೇ ಗೌಡರಿಗೆ ಚಪ್ಪಲಿಯಲ್ಲಿ ಹೊಡೆದ ವಿಚಾರವನ್ನು ಹೇಳಿಕೊಂಡಿದ್ದರು. 37 ನಿಮಿಷ 54 ಸೆಕೆಂಡ್ ನ ವಿಡಿಯೋದಲ್ಲಿ ಶಿವರಾಮೇ ಗೌಡ್ರು ಮಾತನಾಡಿದ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಮಾತ್ರವಲ್ಲ ಮಾದೇಗೌಡರ ಕುರಿತು ಆಡಿದ ಮಾತಿಗಾಗಿ ಮಾದೇಗೌಡರ ಪುತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಶಿವರಾಮೇ ಗೌಡ 420 ಎಂದಿದ್ದರು.

ಇದರ ಬೆನ್ನಲ್ಲೇ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶಿವರಾಮೇ ಗೌಡರು ಮಾದೇಗೌಡರ ಬಗ್ಗೆ ಆಡಿದ ಮಾತಿನಿಂದ ನನಗೂ ಬೇಸರವಾಗಿದೆ. ಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೇನೆ ಎಂದಿದ್ದಾರೆ.‌ ಅದೆಲ್ಲಿ ಅದ್ಯಾರಿಗೆ ದುಡ್ಡು ಕೊಟ್ಟಿದ್ದಾರೋ ನನಗಂತೂ ಗೊತ್ತಿಲ್ಲ ಎಂದರು. ಮಾತ್ರವಲ್ಲ ಅವರ ಮಾತಿನಿಂದ ಬೇಸರವಾಗಿದ್ದು, ಈ ರೀತಿಯ ವ್ಯಕ್ತಿಯನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಮನಸ್ಸಿಲ್ಲ. ನೊಟೀಸ್ ನೀಡಿ ಶಿಸ್ತು ಕ್ರಮಕ್ಕೆ ರಾಜ್ಯಾಧ್ಯಕ್ಷರಿಗೆ ಸೂಚನೆ ನೀಡುತ್ತೇನೆ ಎಂದಿದ್ದರು.

ಎಚ್ಡಿಕೆ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಜೆಡಿಎಸ್ ಪಕ್ಷದಿಂದ ಶಿವರಾಮೇಗೌಡರ ಉಚ್ಛಾಟನೆ ಆದೇಶ ಹೊರಬಿದ್ದಿದೆ. ಪಕ್ಷ ವಿರೋಧಿ ಚಟುವಟಿಕೆ ಹಾಗೂ ಅಶಿಸ್ತಿನ ಹಿನ್ನೆಲೆಯಲ್ಲಿ ಉಚ್ಛಾಟನೆಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಮೇ ಗೌಡರು ನಾನು ಏನು ತಪ್ಪು ಮಾತನಾಡಿಲ್ಲ. ಇರೋ ಸತ್ಯವನ್ನೇ ಹೇಳಿದ್ದೇನೆ. ಆದರೆ ಪ್ರವೋಕ್ ಮಾಡಿಸಿ ನನ್ನಿಂದ ಕೆಲವು ಮಾತುಗಳನ್ನು ಹೇಳಿಸಿದರು. ಅಲ್ಲದೇ ಮಾದೇ ಗೌಡರ ಬಗ್ಗೆ ಹೇಳಿದ ಮಾತಿಗೆ ಕ್ಷಮೆಯಾಚಿಸುವುದಾಗಿ ಹೇಳಿದ್ದರು. ಮೂಲಗಳ ಮಾಹಿತಿ ಪ್ರಕಾರ ಶಿವರಾಮೇ ಗೌಡರು ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಲು ಸಿದ್ಧತೆ ನಡೆಸಿದ್ದು ಅದಕ್ಕಾಗಿ ಜೆಡಿಎಸ್ ಕ್ರಮ ಹಾಗೂ ಸೃಷ್ಟಿಯಾದ ವಿವಾದಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ : ಒಂದು ಎಲೆಕ್ಷನ್ ಗೆ 30 ಕೋಟಿ ಖರ್ಚು ಮಾಡಿದ್ದೇನೆ : ವೈರಲ್ ಆಯ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆಡಿಯೋ

ಇದನ್ನೂ ಓದಿ : ಡಿಕೆಶಿ ಮನೆಯಂಗಳದಲ್ಲಿ ಆನಂದ ಸಿಂಗ್ : ರಾಜ್ಯದಲ್ಲಿ ಶುರುವಾಯ್ತಾ ಪಕ್ಷಾಂತರ ಪರ್ವ

(Ex MP LR Shivarame Gowda Expelled From JDS Says Ex Cm HD Kumaraswamy)

Comments are closed.