Parashurama Theme Park Karkala ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ಪರಶುರಾಮ ಥೀಮ್ ಪಾರ್ಕ್ ಸುನಿಲ್ ಕುಮಾರ್ ಆಸ್ತಿಯಲ್ಲ, ಬದಲಾಗಿ ಇದು ಕಾರ್ಕಳದ ಆಸ್ತಿ, ಸಮಾಜದ ಆಸ್ತಿ. ಇದನ್ನು ಉಳಿಸಿ ಬೆಳಸುವ ಜವಾಬ್ದಾರಿ ಜನರದ್ದಾಗಿದೆ. ಪರಶುರಾಮ ಥೀಂ ಪಾರ್ಕಿನ ಚಟುವಟಿಕೆಯನ್ನು ನಿಲ್ಲಿಸಬೇಕು ಎಂಬ ಅಪ್ರಚಾರದ ಹುನ್ನಾರ ಚುನಾವಣೆ ನಂತರ ನಡೆಯುತ್ತಾ ಬಂದಿದೆ. ನಾಳೆಯೂ ಇದು ಮುಂದುವರಿಯುತ್ತದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ (karkala MLA Sunil Kumar) ಹೇಳಿದ್ದಾರೆ.

ಬೈಲೂರು ಯರ್ಲಪಾಡಿ ಪರಶುರಾಮ ಥೀಂ ಪಾರ್ಕ್ ಜನಾಗ್ರಹ ಸಮಿತಿ ವತಿಯಿಂದ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಮುಂದುವರೆಸುವಂತೆ ಆಗ್ರಹಿಸಿ ಬೈಲೂರುನಲ್ಲಿ ನಡೆದ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ರು. ಪರಶುರಾಮ ಥೀಮ್ ಪಾರ್ಕ್ ಸುನಿಲ್ ಕುಮಾರ್ ಆಸ್ತಿಯಲ್ಲ ಇಡೀ ಕಾರ್ಕಳದ ಆಸ್ತಿ ಸಮಾಜದ ಆಸ್ತಿ ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಜನರದ್ದಾಗಿದೆ. ಅಪ್ರಚಾರ ಎಲ್ಲೆ ಮೀರಿದಾಗ ತಾಳ್ಮೆ ಕಳೆದುಕೊಳ್ಳಲಿಲ್ಲ. ಸತ್ಯ ಯಾವುದು ಎನ್ನುವುದು ಸ್ವಲ್ಪ ತಡವಾಗಿ ಗೊತ್ತಾಗುತ್ತದೆ. ಸತ್ಯವನ್ನು ಯಾವುತ್ತೂ ಬಚ್ಚಿಡಲು ಸಾಧ್ಯವಿಲ್ಲ ಎಂದಿದ್ದಾರೆ.

ಯಾರು ಕಾರ್ಕಳವನ್ನು ಪ್ರೀತಿಸುತ್ತಾರೋ ಅವರಿಗೆ ಅಭಿವೃದ್ಧಿ ಮಾಡಬೇಕು ಎನಿಸುತ್ತದೆ. ನಾನು ಕಾರ್ಕಳವನ್ನು ಪ್ರೀತಿಸಿದ ಪರಿಣಾಮ ಪರಶುರಾಮ ಥೀಂ ಪಾರ್ಕ್ ನಿರ್ಮಾಣವಾಯಿತು. ಈ ಹಿಂದೆಯೂ ಸ್ಪಷ್ಟವಾಗಿ ಹೇಳಿದ್ದೇನೆ ಗುಣಮಟ್ಟದಲ್ಲಿ ವ್ಯತ್ಯಾಸವಾಗಿದ್ದಾರೆ ತನಿಖೆ ಮಾಡಿ, ತನಿಖೆಯ ನೆಪದಲ್ಲಿ ಕಾಮಗಾರಿಯನ್ನು ನಿಲ್ಲಿಸಬೇಡಿ, ಒಂದು ಪ್ರವಾಸೋದ್ಯಮ ರಾತ್ರಿ ಬೆಳಗ್ಗೆ ಆಗುವುದರಲ್ಲಿ ನಿರ್ಮಾಣಗೊಳ್ಳುವುದಿಲ್ಲ. ಒಂದು ವರ್ಷದಿಂದ ಥೀಂ ಪಾರ್ಕ್ ಬಂದ್ ಆಗಿರುವುದನ್ನು ಕಂಡಾಗ ಬೇಸರವಾಗುತ್ತದೆ. ಒಂದು ವರ್ಷದಿಂದ ಪ್ರವಾಸೋದ್ಯಮದಿಂದ ಎಷ್ಣು ನಷ್ಟವಾಯಿತು ಎನ್ನುವುದನ್ನು ಮಣ್ಣು ಹಾಕಿದವರು ಯೋಚನೆಯನ್ನು ಮಾಡಬೇಕು ಎಂದಿದ್ದಾರೆ.

ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ನಿಲ್ಲಿಸಬೇಕು ಎನ್ನುವುದೇ ಅವರ ಮನಸ್ಸಿನಲ್ಲಿದೆ. ವಿನಃ ಕಾರಣ ಅಪ್ರಚಾರ ಮಾಡಿ ಕಾರ್ಕಳದ ಕೀರ್ತಿಯನ್ನು ಕೆಳಗೆ ಹಾಕಿದರು. ಸಾರ್ವಜನಿಕ ಪ್ರವೇಶ ನಿಷೇಧವಿದ್ದರೂ ಅಲ್ಲಿ ಹೋಗಿ ಪರದೆಯನ್ನು ತೆಗೆದವರ ವಿರುದ್ದ ಯಾಕೆ ಜಿಲ್ಲಾಡಳಿತ ಕ್ರಮ ಇಲ್ಲಿವರೆಗೂ ಕೈಗೊಳ್ಳಲಿಲ್ಲ. 14 ವರೆ ಕೋಟಿ ರೂಪಾಯಿಯಲ್ಲಿ ಇವತ್ತಿನವರೆಗೆ ಎಂಟೂವರೆ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ನಾವು ಆವತ್ತಿನಿಂದ ಇವತ್ತಿನ ವರೆಗೂ ಬದಲಾಗಿಲ್ಲ. ಬದಲಾಗಿ ಬಣ್ಣ ಬದಲಾಯಿಸುತ್ತಿರುವವರು ನೀವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರಂಭದಲ್ಲಿ ಗೋಮಾಳ ಎಂದರು, ಬಳಿಕ ಮೂರ್ತಿ ಸರಿಯಿಲ್ಲ ಫೈಬರ್ ಎಂದರು. ಸುತ್ತಿಗೆಯಲ್ಲಿ ಹೊಡೆದಾಗ ಕೆಳಗಡೆ ಸರಿಯಿದೆ ಮೇಲೆ ಸರಿಯಿಲ್ಲವೆಂದರು. ಪತ್ರಿಕಾಗೋಷ್ಠಿ ಮಾಡಿ ಹೇಳುತ್ತಾರೆ ಶಿಲ್ಪಿ ಸರಿಯಿಲ್ಲ ಅವನು ಜಿಎಸ್ ಟಿ ಕಟ್ಟಿಲ್ಲ ಎಂದು. ಜಿಎಸ್ ಟಿ ಕಟ್ಟಿಲ್ಲದ್ದು ಅವನ ಪ್ರಾಬ್ಲಂ. ಟ್ಯಾಕ್ಸಿ ಕಟ್ಟಿಲ್ಲವೆಂದು ಮೇಲೆ ದಾಳಿಯಾಗಿರುವುದು ನಿಮ್ಮದೇ ಮನೆಗೆ. ಜನವರಿಯಿಂದ ಇಲ್ಲಿವರೆಗೆ ಯಾಕೆ ಸಿಐಡಿ ತನಿಖೆಯಾಗಿಲ್ಲ. 198 ದಿನ ಕಳೆದರೂ ಯಾಕೆ ತನಿಖೆ ನಡೆಸಿಲ್ಲ. ಯಾವ ಮೆಟಿರಿಯಲ್ ಎಂದು ಹೇಳಲು ಒಂದು ವರ್ಷ ಬೇಕಾ. ಸರ್ಕಾರ ಕಾಲಹರಣ ಮಾಡಿ ಮಾಡಿ ಪ್ರವಾಸೋದ್ಯಮ ವನ್ನು ಸರ್ವ ನಾಶ ಮಾಡಿದೆ ಎಂದಿದ್ದಾರೆ.

ನಾನು ಸೋತಿದ್ದೇನೆ ಎರಡು ಚುನಾವಣೆಯಲ್ಲಿ ಒಂದು ರಸ್ತೆಗೆ ಅಥವಾ ಒಬ್ಬ ವ್ಯಾಪಾರಿಗೆ ಅಡ್ಡ ಮಣ್ಣು ಹಾಕಲಿಲ್ಲ. ಚುನಾವಣೆಯಲ್ಲಿ ಸೋತು ಆರು ತಿಂಗಳು ಆಗಿಲ್ಲ ಅಭಿವೃದ್ಧಿ ಕೆಲಸಕ್ಕೆ ಮಣ್ಣು ಹಾಕುತ್ತೀರಿ, ಅಪಪ್ರಚಾರ ದೊಡ್ಡ ಪ್ರಮಾಣದಲ್ಲಿ ಮಾಡುತ್ತೀರಿ. ಯಾವುದು ಸತ್ಯ ಎನ್ನುವ ಬಗ್ಗೆ ಚರ್ಚೆಯಾಗಬೇಕು. ಈ ಯೋಜನೆ ಬೇಕಾದರೇ ಕಾರ್ಕಳದ ಜನತೆ ಎದ್ದೇಳಬೇಕು ಎಂದಿದ್ದಾರೆ.
ಇದನ್ನೂ ಓದಿ : ಬಿಜೆಪಿ ಅಸಮಾಧಾನಕ್ಕೆ ಸೈಲೆಂಟ್ ಆಗಿಯೇ ಮದ್ದೆರೆದ ರಾಜ್ಯಾಧ್ಯಕ್ಷ : ಬಿಎಸ್ ಯಡಿಯೂರಪ್ಪ ಹಾದಿಯಲ್ಲೇ ಪುತ್ರ ಬಿವೈ ವಿಜಯೇಂದ್ರ
ಈ ಯೋಜನೆಯನ್ನು ಹಳ್ಳ ಹಿಡಿಸಬೇಕು. ಥೀಂ ಪಾರ್ಕ್ ಆಗಬಾರದು ಎನ್ನುವ ಹುನ್ನಾರ ನಡೆಯುತ್ತಿದೆ. ಅಯೋಧ್ಯೆಯ ಅಕ್ಷತೆ ಯಾವುದು ಸಿದ್ದರಾಮಯ್ಯನ ಅಕ್ಕಿ ಯಾವುದು ಎನ್ನುವ ವ್ಯತ್ಯಾಸ ಗೊತ್ತಾಗದವರಿಗೆ ಧಾರ್ಮಿಕ ಕ್ಷೇತ್ರ ಯಾವುದು ಥೀಂ ಪಾರ್ಕ್ ಯಾವುದು ಹೇಗೆ ಗೊತ್ತಾಗುತ್ತದೆ. ಒಂದು ಯೋಜನೆಯನ್ನು ತಡೆಗಟ್ಟುವುದು ಮಹಾ ಅಪರಾಧ. ಇನ್ನು ಯಾವ ಸಭೆಗೂ ನಾನು ಬರುವುದಿಲ್ಲ ಥೀಂ ಪಾರ್ಕ್ ಬೇಕಾದರೇ ಕಾರ್ಕಳದ ಜನತೆ ತೀರ್ಮಾನ ಮಾಡಲಿ. ಸುನೀಲ್ ಮನಸ್ಸು ಮಾಡಿದರೇ 66 ಶಾಸಕರು ಕಾರ್ಕಳದಲ್ಲಿ ಬಂದು ಪ್ರತಿಭಟಿಸುತ್ತಾರೆ ಅಷ್ಟು ತಾಕತ್ತು ಇದೆ. ಹೇಗಾದರೂ ಮಾಡಿ ಕಾಮಗಾರಿಯನ್ನು ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ತನಿಖೆ ನಡೆಸಿ ಆದಷ್ಟು ಬೇಗ ಪ್ರವಾಸೋದ್ಯಮ ತೆರೆದುಕೊಳ್ಳಬೇಕು ಎಂದಿದ್ದಾರೆ.
ರಾಮ ಮಂದಿರ ಟ್ರಸ್ಟ್ ನ ಅಧ್ಯಕ್ಷ ಓಂಕಾರ್ ನಾಯಕ್ ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಪರಶುರಾಮನ ಥೀಂ ಪಾರ್ಕ್ ನಿರ್ಮಾಣದ ಬಳಿಯ ಸಣ್ಣ ಪುಟ್ಟ ವ್ಯಾಪಾರಸ್ಥರಿಗೂ ಅನುಕೂಲಕರವಾಗಿದೆ. ಆದರೆ ಇತ್ತಿಚೀನ ದಿನಗಳಲ್ಲಿ ಇಲ್ಲಿನ ಕಾಮಗಾರಿಯನ್ನು ನಡೆಸಲು ತಡೆಯೊಡ್ಡುತ್ತಿರುವುದು ಸರಿಯಲ್ಲ. ನಿಮಗೆ ಪರಶುರಾಮ ಥೀಂ ಪಾರ್ಕ್ ಉಳಿಸಲು ಸಾಧ್ಯವಿಲ್ಲದಿದ್ದರೆ ಊರಿನ ಜನರಿಗೆ ಬಿಟ್ಟು ಕೊಡಿ ನಾವು ಅದನ್ನು ಉಳಿಸುತ್ತೇವೆ ಎಂದರು.
ಇದನ್ನೂ ಓದಿ : ಕರಾವಳಿಯ ಹಿಂದುತ್ವದ ಫೈರ್ ಬ್ರ್ಯಾಂಡ್ ಸುನಿಲ್ ಕುಮಾರ್ ತೇಜೋವಧೆಗೆ ಸಂಚು
ಮಹೇಶ್ ಶೆಟ್ಟಿ ಕುಡ್ಪುಲಾಜೆ ಮಾತನಾಡಿ, ಅಭಿವೃದ್ಧಿ ಕೆಲಸಕ್ಕೆ ತಡೆಯೊಡ್ಡಿದಾಗ ಒಗ್ಗಟ್ಟಾಗಿ ನಾವು ಪ್ರತಿಭಟಿಸಬೇಕು. ಅಭಿವೃದ್ಧಿಗಾಗಿ ಯಾಕೆ ರಾಜಕೀಯ. ಶಾಸಕರು ಅಭಿವೃದ್ಧಿ ಮಾಡಿದ್ದಾರೆ ಅದು ತಪ್ಪಾ?. ಅಡ್ಡ ಬರುವವರು ಯಾರು ಒಳ್ಳೆ ವ್ಯಕ್ತಿಗಳಲ್ಲ. ಅಪ್ರಚಾರ ಮಾಡುವುದು ಸರಿಯಲ್ಲ. ಅದಷ್ಟು ಬೇಗ ಕಾಮಗಾರಿ ಮುಗಿಸದಿದ್ದರೇ ಮುಂದೆ ದೊಡ್ಡ ಮಟ್ಟದ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜನಾಗ್ರಹ ಸಮಿತಿ ಸಂಚಾಲಕ ಕೌಡೂರು ಸಚ್ಚಿದಾನಂದ ಶೆಟ್ಟಿ, ಯರ್ಲಪಾಡಿ ಗ್ರಾ.ಪಂ ಅಧ್ಯಕ್ಷ ಸುನೀಲ್ ಹೆಗ್ಡೆ, ಬೈಲೂರು ಗ್ರಾ.ಪಂ ಅಧ್ಯಕ್ಷೆ ಸುಜಾತ, ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಉಷಾ, ಹೀರ್ಗಾನ ಗ್ರಾ.ಪಂ ಅಧ್ಯಕ್ಷೆ ಸುನಿತಾ, ನೀರೆ ಬೈಲೂರು ಅಧ್ಯಕ್ಷ ಸಚ್ಚಿದಾನಂದ ಪ್ರಭು,ಬೈಲೂರು ಬೀದಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸದಾನಂದ ಸಾಲ್ಯಾನ್, ಬೈಲೂರು ಮಹೇಶ್ ಶೆಣೈ, ರಾಮ ಮಂದಿರ ಟ್ರಸ್ಟ್ ನ ಅಧ್ಯಕ್ಷ ಓಂಕಾರ್ ನಾಯಕ್, ಬೈಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಜಾರ್ಕಳ ರಮೇಶ್ ಶೆಟ್ಟಿ, ಬೈಲೂರು ರಮೇಶ್ ಕಿಣಿ, ಬೋಳ ಪ್ರಶಾಂತ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.ಉದಯ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
Parashurama Theme Park Karkala is not Sunil Kumar property says MLA Sunil Kumar