ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುತ್ತಿದೆ. ಸಂಕ್ರಾಂತಿಯ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯುಗಾದಿಯವರೆಗೂ ಯಡಿಯೂರಪ್ಪ ಕುರ್ಚಿ ಭದ್ರವಾಗಿರಲಿದೆ. ಬಿಜೆಪಿ ಹೈಕಮಾಂಡ್ ಕೊಟ್ಟಿರೋ ಆ ಭರವಸೆ ಯಡಿಯೂರಪ್ಪ ಅವರಲ್ಲಿ ಇನ್ನಷ್ಟು ಚೈತನ್ಯವನ್ನು ತಂದಿದೆ.

ಹೌದು, ಸಚಿವ ಸಂಪುಟ ವಿಸ್ತರಣೆಯ ನೆಪವೊಡ್ಡಿ ಮಗ ಬಿ.ವೈ.ವಿಜಯೇಂದ್ರ ಅವರೊಂದಿಗೆ ದೆಹಲಿಗೆ ದೌಡಾಯಿಸಿದ್ದ ಸಿಎಂ ಯಡಿಯೂರಪ್ಪ ಕೊಂಚ ಬೇಸರದಿಂದಲೇ ಬೆಂಗಳೂರಿನತ್ತ ಮುಖಮಾಡಿದ್ದರು. ಸಿಎಂ ಯಡಿಯೂರಪ್ಪ ಅವರನ್ನು ಗೌರವಯುತ ವಾಗಿಯೇ ಅಧಿಕಾರದಿಂದ ಕೆಳಗಿಸಿ, ಅವರನ್ನು ಯಾವುದಾದರೊಂದು ರಾಜ್ಯದ ರಾಜ್ಯಪಾಲರನ್ನಾಗಿ ಮಾಡೋದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಯಡಿಯೂರಪ್ಪ ಅವರನ್ನು ಬಲವಂತವಾಗಿ ಕುರ್ಚಿಯಿಂದ ಕೆಳಗಿಸಿದ್ರೆ ಬಿಜೆಪಿ ಪಕ್ಷಕ್ಕೆ ಹೊಡೆತ ಬೀಳೋದು ಗ್ಯಾರಂಟಿ ಅನ್ನೋದು ವರಿಷ್ಠರಿಗೂ ಗೊತ್ತಿದೆ. ಅದೇ ಕಾರಣಕ್ಕೆ ಯಡಿಯೂರಪ್ಪನವರೇ ಕುರ್ಚಿಯಿಂದ ಗೌರವಯುತ ವಾಗಿ ಕೆಳಗಿಳಿಯಲಿ ಅಂತಾನೇ ಕಾಯುತ್ತಿದ್ದಾರೆ. ಆದರೆ ಬಿಎಸ್ ವೈ ಅವರನ್ನು ಅಷ್ಟು ಸುಲಭದಲ್ಲಿ ಸಿಎಂ ಸ್ಥಾನದಿಂದ ಕೆಳಗಿಸಲು ಸಾಧ್ಯವಿಲ್ಲ ಅನ್ನೋದು ಖಚಿತವಾಗಿಯೇ ಗೊತ್ತಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿಯಿಂದ ಮುಖ್ಯಮಂತ್ರಿ ಯಾಗ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಅಲ್ಲದೇ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನದ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿತ್ತು. ಆದರೆ ನಂತರದಲ್ಲಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಸೇರೋದಿಲ್ಲಾ ಅನ್ನೋ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದರು. ಈ ನಡುವಲ್ಲೇ ಬಿಎಸ್ ವೈ ನಂತರ ಬಿಜೆಪಿಯಲ್ಲಿ ಮುಖ್ಯಮಂತ್ರಿಯನ್ನು ಯಾರು ಅಲಂಕರಿಸಬೇಕು ಅನ್ನೋ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ನಡುವಲ್ಲೇ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಭರವಸೆಯೊಂದನ್ನು ನೀಡಿದೆ.

ಇನ್ನು ಮೂರು ತಿಂಗಳ ಕಾಲ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಖಚಿತ. ಯುಗಾದಿಯವರೆಗೂ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾವಣೆಯನ್ನು ಮಾಡೋದಿಲ್ಲ. ಆದರೆ ಮುಂದಿನ ಚುನಾವಣೆಯ ದೃಷ್ಠಿಯಿಂದ ನೀವು ಸ್ಥಾನವನ್ನು ಗೌರವಯುತವಾಗಿ ಬಿಟ್ಟುಕೊಡಿ ಅಂತಾನೂ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸುವಂತೆಯೂ ಸೂಚಿಸಿದ್ದಾರೆ. ಸಿಎಂ ಸ್ಥಾನ ದಿಂದ ಕೆಳಗಿಳಿಯುತ್ತಿದ್ದಂತೆಯೇ ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಗೌರವಯುತವಾದ ಸ್ಥಾನವನ್ನು ನೀಡುವುದು. ಅಥವಾ ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಆಫರ್ ನೀಡಿದೆ.

ಸಂಸದ ದಿ.ಸುರೇಶ್ ಅಂಗಡಿ ಅವರಿಂದ ತೆರವಾದ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರನ್ನೇ ಆಯ್ಕೆ ಮಾಡುವುದು ಬಹುತೇಕ ಖಚಿತ. ಇನ್ನೊಂದೆಡೆ ರಾಜ್ಯ ಸರಕಾರದಲ್ಲಿ ಯಡಿಯೂರಪ್ಪ ಅವರು ಪ್ರಾಬಲ್ಯ ಸಾಧಿಸೋ ಸಲುವಾಗಿಯೇ ಬಿ.ವೈ.ವಿಜಯೇಂದ್ರ ಅವರನ್ನು ಸಚಿವರನ್ನಾಗಿಸುವ ಭರವಸೆಯನ್ನು ವರಿಷ್ಠರು ಕೊಟ್ಟಿದ್ದಾರೆ. ಸಾಲದಕ್ಕೆ ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದಲೇ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನೀಡೋದಾಗಿಯೂ ಆಶ್ವಾಸನೆಯನ್ನು ಕೊಟ್ಟಿದ್ದಾರೆ.

ಆದರೆ ವರಿಷ್ಠರು ನೀಡಿರುವ ಆಶ್ವಾಸನೆಯನ್ನು ಬಿ.ಎಸ್.ಯಡಿಯೂರಪ್ಪನವರು ಒಪ್ಪಿಲ್ಲ. ಕನಿಷ್ಠ ಮೂರು ತಿಂಗಳ ಕಾಲಾವಕಾಶ ವನ್ನು ಕೋರಿದ್ದಾರೆ. ಆದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಯಡಿಯೂರಪ್ಪ ಬಿಜೆಪಿ ಆಫರ್ ಒಪ್ಪುವ ಸಾಧ್ಯತೆಯಿದೆ. ವರಿಷ್ಠರ ಭೇಟಿಯ ನಂತರವೂ ಯಡಿಯೂರಪ್ಪ ತನ್ನದು ಕೊನೆಯ ಭೇಟಿ ಅಂತಾನೂ ಹೇಳಿದ್ದರು. ಮಾತ್ರವಲ್ಲ ಅಷ್ಟೊಂದು ಲವಲವಿಕೆಯಿಂದ ಕಾಣಿಸಿಕೊಂಡಿಲ್ಲ. ಅಲ್ಲದೇ ಹೈಕಮಾಂಡ್ ಯಡಿಯೂರಪ್ಪ ಅವರು ಕೊಟ್ಟ ಸಚಿವರ ಪಟ್ಟಿಗೂ ಮಣೆ ಹಾಕಿಲ್ಲ. ಸಚಿವ ಸಂಪುಟ ವಿಸ್ತರಣೆಯ ದಿನವೇ ಸಚಿವರ ಪಟ್ಟಿ ಅಂತಿಮಗೊಳಿಸುವುದಾಗಿಯೂ ತಿಳಿಸಿದ್ದಾರೆನ್ನಲಾಗುತ್ತಿದೆ.ಇನ್ನೊಂದೆಡೆ ಯಡಿಯೂರಪ್ಪ ನಂತರದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಗಾದಿಗೆ ಯಾರು ಏರ ಬೇಕು ಅನ್ನೋ ಕುರಿತು ವರಿಷ್ಠರು ಸ್ಪಷ್ಟವಾಗಿ ತೀರ್ಮಾನಿಸಿದಂತಿಲ್ಲ. ಹೀಗಾಗಿ ವರಿಷ್ಠರು ಕೂಡ ಮೂರು ತಿಂಗಳ ಒಳಗಾಗಿ ಅಳೆದು ತೂಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆರಿಸುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಎದುರಾಗುವ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇ ಬೇಕು ಅಂತಾ ಪಣತೊಟ್ಟಿರುವ ಬಿಜೆಪಿ, ಯಡಿಯೂರಪ್ಪ ವಿರುದ್ದ ನಿಷ್ಠುರ ಕಟ್ಟಿಕೊಂಡ್ರೆ ಅಸಾಧ್ಯ ಅನ್ನೋದು ಅರಿವಿದೆ. ಸಾಲದಕ್ಕೆ ಜಾತಿ ಲೆಕ್ಕಾಚಾರದ ಹೊಡೆತ ಪಕ್ಷಕ್ಕೆ ಬೀಳ ಬಾರದು ಅನ್ನೋ ಕಾರಣದಿಂದಲೇ ಬಿಜೆಪಿ ವರಿಷ್ಠರು ಅಳೆದು ತೂಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ಯಡಿಯೂರಪ್ಪ ಕುರ್ಚಿ ಯುಗಾದಿ ವರೆಗೂ ಸೇಫ್.