Chandragutti Renukamba Temple : ವಿಷ್ಣುವಿನ ದಶಾವತಾರದಲ್ಲಿ ಪರಶುರಾಮ ಕೂಡಾ ಒಬ್ರು. ರೇಣುಕಾದೇವಿ ಗರ್ಭಸಂಜಾತ ಈ ರಾಮ .ಪರಶುವನ್ನು ಆಯುಧವಾಗಿ ಬಳಸಿದ್ದ ಕಾರಣಕ್ಕಾಗಿ ಇವರಿಗೆ ಪರಶುರಾಮ ಅಂತ ಹೆಸರು ಬಂತು . ರಾಮನಂತೆ ಪರಶುರಾಮರೂ ಪಿತೃವಾಕ್ಯ ಪರಿಪಾಲಕ , ಅದಕ್ಕೆ ಸಾಕ್ಷಿಯಾಗಿ ನಿಂತಿರೋದೆ ಚಂದ್ರಗುತ್ತಿಯ ರೇಣುಕಾಂಬಾ ದೇವಿಯ ಈ ದೇವಾಲಯ. ಸ್ವತಃ ಪರಶುರಾಮರ ತಾಯಿಯೇ ಇಲ್ಲಿ ಭಕ್ತರ ಕಾಯುವ ತಾಯಿ ಆಗಿ ನೆಲೆಸಿದ್ದಾರೆ. ಇದು ಪರಶುರಾಮರು ಇದ್ದರು ಅನ್ನೋದಕ್ಕೆ ಸಾಕ್ಷಿ ನೀಡುವ ದೇವಾಲಯ.

ಇದು ಸಾಮಾನ್ಯವಾಗಿ ನಾವು ನೋಡುವ ದೇವಾಲಯದಂತಹ ದೇವಾಲಯವಲ್ಲ. ಇಲ್ಲಿ ನಡೆಯುವ ಆಚರಣೆ , ಉತ್ಸವ ಎಲ್ಲ ವಿಶೇಷ . ಇಲ್ಲಿ ಬೇರೆಲ್ಲೂ ನೋಡಲು ಸಿಗದ ರೀತಿಯಲ್ಲಿ ದೇವಿಯನ್ನು ಆರಾಧಿಸುವ ರೂಡಿ ಇದೆ. ಇಲ್ಲಿ ತಾಯಿ ರೇಣುಕಾಂಬ ದೇವಿ ಗುಹೆಯಲ್ಲಿ ನೆಲೆನಿಂತು ಭಕ್ತರಿಗೆ ದರ್ಶನ ನೀಡುತ್ತಾಳೆ . ಇಲ್ಲಿ ಏನಾದ್ರು ಕೇಳಿಕೊಂಡ್ರೆ ತಪ್ಪದೇ ಈಡೇರಿಸುತ್ತಾಳೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಇನ್ನು ಇಲ್ಲಿ ಬೆತ್ತಲೆ ಸೇವೆ, ಬೇವಿನ ಸೇವೆ ಅನ್ನೋ ಸೇವೆಯನ್ನು ಮಾಡುವ ರೂಡಿ ಕೂಡಾ ಇತ್ತು. ಇದಕ್ಕೆ ಕಾರಣ ಇಲ್ಲಿಯ ಸ್ಥಳ ಪುರಾಣ.

ಇಲ್ಲಿಯ ಪೌರಾಣಿಕ ಕಥೆಯ ಪ್ರಕಾರ, ಇದು ಪರಶುರಾಮರು ಬೆಳೆದ ಸ್ಥಳ. ಇಲ್ಲಿ ಪರಶುರಾಮರ ತಂದೆ ಜಮದಗ್ನಿ ಋಷಿಗಳು ವಾಸವಿದ್ರು. ಪರಮ ಪತಿವೃತೆ ಯಾಗಿದ್ದ ಅವರ ಪತ್ನಿ ರೇಣುಕಾದೇವಿ ಜಮದಗ್ನಿಗಳ ಯಜ್ಞಕ್ಕಾಗಿ ಪ್ರತಿ ದಿನ ನೀರು ತರೋ ಕೆಲಸ ಮಾಡುತ್ತಿದ್ಳು. ಪರಮ ಪತಿವೃತೆಯಾಗಿದ್ದರಿಂದ ಮರಳಿನಿಂದ ಮಡಿಕೆ ಮಾಡಿ ನೀರನ್ನು ರೇಣುಕೆ ತರುತಿದ್ದಳು.

ಒಂದು ದಿನ ನೀರಿಗಾಗಿ ರೇಣುಕಾದೇವಿ ತೆರಳಿದಾಗ ಅಲ್ಲಿ ಗಂಧರ್ವರ ರಾಜ ಚೈತ್ರ ರಥ ನದಿಯಲ್ಲಿ ತನ್ನ ಸಖಿಯ ಜೊತೆ ಆಟವಾಡೋದನ್ನು ನೋಡಿ ಮೈಮರೆತು ಅಲ್ಲೇ ಕೂತು ಬಿಡುತ್ತಾಳೆ . ಕೆಲಕಾಲ ನಂತರ ಎಚ್ಚರವಾಗಿ ಮಡಿಕೆ ತಯಾರು ಮಾಡೋಕೆ ಹೊರಟಾಗ ಮನಸ್ಸು ಚಂಚಲವಾದ್ದರಿಂದ ಮಡಿಕೆ ತಯಾರಿಸೋಕೆ ಆಗಲ್ಲ. ಆಗ ಆಕೆ ಹಾಗೇ ಆಶ್ರಮಕ್ಕೆ ಹಿಂದಿರುತ್ತಾಳೆ. ಇದನ್ನು ಅರಿತ ಜಮದಗ್ನಿ ಮಾಹಾಮುನಿಗಳು ಆಕೆಯನ್ನು ಬೆತ್ತಲೆ ಮಾಡಿ ಆಶ್ರಮದಿಂದ ಹೊರದಬ್ಬುತ್ತಾರೆ.
ಇದನ್ನೂ ಓದಿ : ಶ್ರೀ ಕೃಷ್ಣನೇ ನೀಡಿದ್ದ ತನ್ನ ವಿಗ್ರಹ – ಇವನನ್ನು ಭಕ್ತಿಯಿಂದ ಪೂಜಿಸಿದ್ರೆ ಕಷ್ಟಗಳು ಪರಿಹಾರ
ಇಷ್ಟಕ್ಕೂ ಸುಮ್ಮನಾಗದ ಜಮದಗ್ನಿಗಳು ತಮ್ಮ ಮಕ್ಕಳನ್ನು ಕರೆದು ತಾಯಿಯ ತಲೆ ಕಡಿಯುವಂತೆ ಹೇಳುತ್ತಾರೆ. ಇದಕ್ಕೆ ಒಪ್ಪದ ಮಕ್ಕಳನ್ನು ಕಲ್ಲುಗಳಾಗಿ ಮಾಡುತ್ತಾರೆ. ಕೊನೆಗೆ ಕಿರಿಯ ಮಗನಾದ ರಾಮನನ್ನು ಕರೆದು ಹೇಳಿದಾಗ, ಹಿಂದೆ ಮುಂದೆ ಯೋಚಿಸದೇ ತಾಯಿಯ ಶಿರಛೇಧವನ್ನು ಮಾಡುತ್ತಾನೆ . ಇದರಿಂದ ಪ್ರಸನ್ನರಾದ ಜಮದಗ್ನಿ ಮುನಿಗಳು, ಏನಾದರು ವರನ್ನು ಕೇಳು ಎಂದಾಗ, ತನ್ನ ತಾಯಿ ಹಾಗೂ ಸಹೋದರರನ್ನು ಬದುಕಿಸು ಎಂದು ಕೇಳುತ್ತಾನೆ. ಅದಕ್ಕೆ ಮೆಚ್ಚಿ ರೇಣುಕೆಯನ್ನು ಬದುಕಿಸಲಾಯಿತು ಎಂದು ಕಥೆ ಹೇಳುತ್ತೆ.

ಹೇಗೆ ಪರಶು ರಾಮರು ತಾಯಿಯ ತಲೆಯನ್ನು ಕಡಿದ ಕ್ಷೇತ್ರ ಇದೇ ಅನ್ನೋದು ನಂಬಿಕೆ. ಇನ್ನು ಜಮದಗ್ನಿ ಮುನಿಗಳು ರೇಣುಕಾಂಬೆಯನ್ನು ವಿವಸ್ತ್ರ ಗೊಳಿಸಿದಾಗ, ಆಕೆ ಬೇವಿನ ಎಲೆಯನ್ನು ಕಟ್ಟಿಕೊಂಡು ಇದೇ ಗುಹೆಯಲ್ಲಿ ಇದ್ದಳು ಅನ್ನೋ ನಂಬಿಕೆ ಇದೆ. ಹೀಗಾಗಿ ಇಂದಿಗೂ ತಾಯಿ ಪತಿವೃತಾ ಶಕ್ತಿಯಿಂದ ಭಕ್ತರ ಸಂಕಟ ಪರಿ ಹರಿಸುತ್ತಾಳೆ ಅನ್ನೋದು ಮಾತು. ಇನ್ನು ತಾಯಿ ವಿಗ್ರಹವು ಶಿವಲಿಂಗದ ಆಕಾರದಲ್ಲಿದ್ದು, ಪರಶುರಾಮರು ತಲೆ ಕಡಿದಾಗ ರೇಣುಕಾಂಬೆ ಶಿವನಿಗೆ ಶರಣು ಹೋಗಿದ್ದಳು. ಹೀಗಾಗಿ ಗುಹೆಯಲ್ಲಿ ಶಿವಲಿಂಗದ ರೂಪದಲ್ಲಿ ತಾಯಿ ದರ್ಶನ ನೀಡುತ್ತಾಳೆ ಅನ್ನೋದು ಭಕ್ತರ ಅಭಿಪ್ರಾಯ .
ಇದನ್ನೂ ಓದಿ : ಇದು ಜಗತ್ತಿನ ಮೊದಲ ಜೋರ್ತಿಲಿಂಗ- ದೇವಾಲಯಕ್ಕೆ ಚಂದ್ರನೇ ನಿರ್ಮಾತೃ
ಇನ್ನು ತಾಯಿ ಬಟ್ಟೆ ಇಲ್ಲದೆ ಬೆತ್ತಲೆ ಹಾಗೂ ಬೇವಿನ ಎಲೆಯನ್ನು ಧರಿಸಿ ನೆಲೆ ನಿಂತಿದ್ದಳು ಅನ್ನೋ ಕಾರಣಕ್ಕೆ ಇಲ್ಲಿ ಬೆತ್ತಲೆ ಸೇವೆ ಹಾಗೂ ಅರೆ ಬೆತ್ತಲೆ ಸೇವೆ ರೂಡಿಯಲ್ಲಿತ್ತು. ಇಲ್ಲಿ ಬೆತ್ತಲೆ ಸೇವೆ ಮಾಡಿದ್ರೆ ಮಾತ್ರ ತೇರು ಮುಂದೆ ಹೋಗುತ್ತೆ ಅನ್ನೋ ಮಾತಿತ್ತು. ಆದರೆ ಸರ್ಕಾರ ಕೆಲವು ವರ್ಷಗಳ ಹಿಂದೆಯಿಂದ ಈ ಸೇವೆಯನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಅಂದಿನಿಂದ ಈ ಆಚರಣೆ ನಡೆಯುತ್ತಿಲ್ಲ ಅಂತ ಹೇಳಬಹುದು. ಇದನ್ನು ಹೊರತು ಪಡಿಸಿ ಹಲವು ರೀತಿಯ ಆಚರಣೆ ಇಂದಿಗೂ ನಡೆದುಕೊಂಡು ಬಂದಿದೆ.

ಇದು ಜೋಗತಿಯರ ಪಾಲಿನ ಶ್ರದ್ಧಾ ಕೇಂದ್ರ ಕೂಡಾ ಹೌದು. ಇಲ್ಲಿ ನಮಗೆ ಹಲವು ಮಂದಿ ಜೋಗತಿಯರು ಕಾಣಸಿಗುತ್ತಾರೆ. ಅವರಿಂದ ಆಶೀರ್ವಾದ ಪಡೆದ್ರೆ ತಾಯಿಯ ಅನುಗ್ರಹ ಸಿಗುತ್ತೆ ಅನ್ನೋ ನಂಬಿಕೆ ಭಕ್ತರದು . ಇನ್ನು ಇಲ್ಲಿ ಪರಶುರಾಮ ದೇವಾಲಯವನ್ನು ನಾವು ಕಾಣಬಹುದು. ಈ ದೇವಾಲಯದ ಸ್ಥಳದ ಕುರಿತು ಬರೋದಾದ್ರೆ , ಈ ದೇವಾಲಯವಿರೋದು ಶಿವಮೊಗ್ಗ ಜಿಲ್ಲೆ ,ಸೊರಬ ತಾಲೂಕಿನ, ಚಂದ್ರಗುತ್ತಿ ಎಂಬಲ್ಲಿ.

ಇತಿಹಾಸದಲ್ಲೂ ಚಂದ್ರಗುತ್ತಿಗೆ ವಿಶೇಷ ಸ್ಥಾನವಿದೆ. ಇದು ಕದಂಬರ ಆಡಳಿತಕ್ಕೆ ಒಳಪಟ್ಟ ಕ್ಷೇತ್ರ. ಈ ರೇಣುಕಾಂಬ ದೇವಾಲಯ ಇರೋ ಬೆಟ್ಟದಲ್ಲೇ, ಕದಂಬರ ಕಾಲದ ಕೋಟೆಯನ್ನು ಕಾಣಬಹುದು. ಈ ಕೋಟೆಯನ್ನು 3ನೇ ಶತಮಾನದಲ್ಲಿ ಕದಂಬರು ಕಟ್ಟಿದ್ರು ಅಂತ ಹೇಳಲಾಗುತ್ತೆ. ಈ ದೇವಾಲಯ ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಪೂರ್ತಿ ದಿನ ತೆರೆದಿರುತ್ತೆ. ಉಳಿದಂತೆ ಕೇವಲ ಬೆಳಗ್ಗೆ ಮಾತ್ರ ತೆರೆದಿರುತ್ತೆ. ಇನ್ನು ಇದು ಸೊರಬದಿಂದ 19 ಕಿಲೋ ಮೀಟರ್ ದೂರವಿದ್ದು, ಸೊರಬದಿಂದ ಪ್ರೈವೆಟ್ ವಾಹನವನ್ನು ಮಾಡಿ ಇಲ್ಲಿಗೆ ತೆರಳಬಹುದು.
Chandragutti Renukamba Temple Soraba Shivamogga Karnataka Temples Special Story