Guru Narasimha Temple Saligrama : ಕರಾವಳಿ , ನಮ್ಮ ಕರ್ನಾಟಕ ಪಾಲಿಗೆ ಪ್ರವಾಸೋದ್ಯಮದ ಗೂಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು ಇಂತಹ ಅನೇಕ ಪೌರಾಣಿಕ ಸ್ಥಳಗಳೂ ಅಲ್ಲೇ ಇರೋದು. ಅದರಲ್ಲೂ ಇದು ಪರಶುರಾಮನ ಸೃಷ್ಟಿ ಕೂಡ. ಇಲ್ಲೂ ಜನರಿಗೆ ತಿಳಿಯದ ಪೌರಾಣಿಕ ಕಾಲಕ್ಕೆ ಸಂಭಂಧಿಸಿದ ಸಾಕಷ್ಟು ದೇವಾಲಯಗಳಿವೆ. ಗೊತ್ತಾ? ಅಂತಹದೇ ಒಂದು ಶ್ರೀಗುರುನರಸಿಂಹ ದೇವಾಲಯ (Saligrama Guru Narasimha Temple) ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಾಲಿಗ್ರಾಮ ಎಂಬಲ್ಲಿದೆ.

ಇದು ಸಾವಿರಾರು ವರ್ಷ ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವವಿರುವ ದೇವಾಲಯ. ಇಲ್ಲಿ ವಿಷ್ಣುವಿನ ಉಗ್ರರೂಪವಾದ ನರಸಿಂಹನನ್ನು ಅನಾದಿ ಕಾಲದಿಂದಲೂ ಪೂಜಿಸಿಕೊಂಡು, ಆರಾಧಿಸಿಕೊಂಡು ಬರುತ್ತಾರೆ. ಸಾಮಾನ್ಯವಾಗಿ ನರಸಿಂಹದೇವರು ಇರುವಲ್ಲಿ ಲಕ್ಷ್ಮೀ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸೋದು ರೂಢಿ.
ಯಾಕಂದ್ರೆ ನರಸಿಂಹನ ಉಗ್ರ ಸ್ವರೂಪದ ತಾಪವನ್ನು ಲಕ್ಷ್ಮೀ ಮಾತ್ರ ತಾಳುವಂತೆ ಮಾಡಬಲ್ಲಳು ಅನ್ನೋದು ನಂಬಿಕೆ. ಆದ್ರೆ ಇಲ್ಲಿ ನರಸಿಂಹನನ್ನು ಗುರುವಾಗಿ ಪೂಜಿಸಲಾಗುತ್ತೆ. ಹೀಗಾಗಿ ಇಲ್ಲಿ ನರಸಿಂಹ ಮಾತ್ರ ಇಲ್ಲಿ ನೆಲೆನಿಂತು ಭಕ್ತರನ್ನು ಕಾಯುತ್ತಾನೆ ಅನ್ನೋ ನಂಬಿಕೆ ಇದೆ. ಇಲ್ಲಿ ನರಸಿಂಹ ಉದ್ಬವ ಮೂರ್ತಿಯಾಗಿದ್ದು, ಸಾಲಿಗ್ರಾಮ ಶಿಲೆಯಲ್ಲಿ ನೆಲೆನಿಂತಿದ್ದಾನೆ . ಇದಕ್ಕಾಗಿಯೇ ನರಸಿಂಹ ನೆಲೆನಿಂತಿರುವ ಈ ಊರಿಗೆ ಸಾಲಿಗ್ರಾಮ ಅನ್ನೋ ಹೆಸರಿನಿಂದಲೂ ಕರೆಯುತ್ತಾರೆ.

ಇನ್ನು ಇಲ್ಲಿನ ಮತ್ತೊಂದು ವಿಶೇಷವೆಂದರೆ ಇದನ್ನು ಖುದ್ದು ನಾರದ ಮುನಿಗಳೇ ಸ್ಥಾಪಿಸಿದ್ರು ಅಂತ ನಂಬಲಾಗುತ್ತೆ. ಇದಕ್ಕೆ ಸಾಕ್ಷಿ ಯಾಗಿ ಪದ್ಮ ಪುರಾಣ ಹಾಗೂ ಸ್ಕಂದಪುರಾಣದಲ್ಲೂ ಈ ದೇವಾಲಯದ ಬಗ್ಗೆ ಮಾಹಿತಿ ಸಿಗುತ್ತೆ. ಪದ್ಮ ಪುರಾಣದ ಪ್ರಕಾರ ನಾರದರು ಒಮ್ಮೆ ಆಕಾಶ ಮಾರ್ಗದ ಮೂಲಕ ಸಂಚರಿಸುತ್ತಿರುವಾಗ, ಭೂಮಿ ಮೇಲೆ ಸಾಕಷ್ಟು ಮುನಿಗಳು ತಪಸ್ಸು ಮಾಡುತ್ತಿರೋದು ಕಾಣುತ್ತೆ. ಇದರಿಂದ ಸಂತಸಗೊಂಡು ತೆರಳುತ್ತಿರೋವಾಗ ಸ್ವಲ್ಪ ದೂರದಲ್ಲಿ ಅಶರೀರವಾಣಿಯೊಂದು ಕೇಳುತ್ತೆ.
ಇದನ್ನೂ ಓದಿ : ಆಲದ ನೆರಳಲ್ಲಿ ನೆಲೆ ನಿಂತಿದ್ದಾನೆ ಬಸ್ರೂರು ತುಳುವೇಶ್ವರ – ಪ್ರಕೃತಿಯೇ ಇಲ್ಲಿ ಶಿವನಿಗೆ ದೇವಾಲಯ
ಭೂಮಿಯಲ್ಲಿ ಶಂಖ ಹಾಗೂ ಚಕ್ರ ಅನ್ನೋ ಕಲ್ಯಾಣಿಯಲ್ಲಿ ನರಸಿಂಹನ ಸಾಲಿಗ್ರಾಮ ಮೂರ್ತಿ ಇದ್ದು ಅದನ್ನು ಪ್ರತಿಷ್ಟಾಪಿಸುವಂತೆ ಕೇಳುತ್ತೆ . ಆಗ ದಿವ್ಯ ದೃಷ್ಟಿ ಯ ಮೂಲಕ ಅದರ ಸ್ಥಳವನ್ನು ಕಂಡುಕೊಂಡ ನಾರದರು ಕಲ್ಯಾಣಿಯ ಮಧ್ಯಭಾಗದ ಜಾಗದಲ್ಲಿ ಸ್ಥಾಪಿಸುತ್ತಾರೆ. ಅದಾದ ಸಾವಿರಾರು ವರ್ಷದ ನಂತರ ಕದಂಬ ದೊರೆ ಮಯೂರವರ್ಮನ ಮೊಮ್ಮಗ ಲೋಕಾದಿತ್ಯ ಮರದ ಪೊಟರೆಯಲ್ಲಿ ಮುಚ್ಚಿಹೋದ ನಾರದರು ಸ್ಥಾಪಿಸಿದ ಯೋಗ ಮುದ್ರೆಯ ನರಸಿಂಹನನ್ನು ಮತ್ತೆ ಸ್ಥಾಪಿಸಿದನು.

ಹಾಗೂ ದೇವರ ಪೂಜೆಗಾಗಿ ಸುತ್ತಲಿನ 12 ಗ್ರಾಮಗಳನ್ನು ಬ್ರಾಹ್ಮಣರಿಗೆ ನೀಡಿದ. ಅಂದು ಇಲ್ಲಿ ಬಂದು ನೆಲೆಸಿದ ಬ್ರಾಹ್ಮಣರನ್ನು ಕೋಟಾ ಬ್ರಾಹ್ಮಣರು ಎಂದು ಕರೆಯುತ್ತಾರೆ. ಅವರ ಪಾಲಿಗೆ ಈ ನರಸಿಂಹ ದೇವರೇ ಗುರು ಹಾಗೂ ಮನೆ ದೇವರು ಕೂಡಾ ಆಗಿದ್ದಾರೆ. ಇಲ್ಲಿನ ವಿಸ್ಮಯದ ವಿಚಾರಕ್ಕೆ ಬರೋದಾದ್ರೆ ಈ ನರಸಿಂಹನ ದೇವರ ವಿಗ್ರಹವನ್ನು ಮೊದಲು ಪೂರ್ವಕ್ಕೆ ಮುಖ ಮಾಡಿ ಸ್ಥಾಪಿಸಲಾಗಿತ್ತು .

ಆದರೆ ಆಗ ಅಲ್ಲಿ ನರಸಿಂಹನ ಉಗ್ರ ಸ್ವರೂಪದ ಶಾಖಕ್ಕೆ ಸುತ್ತಲಿನ ಗದ್ದೆಗಳು ಬೆಂಕಿಗೆ ಆಹುತಿಯಾಗಲು ಆರಂಭಿಸಿದವು. ಮುಂದೆ ನರಸಿಂಹ ದೇವರನ್ನು ಪಶ್ಷಿಮಾಭಿಮುಖವಾಗಿ ಸ್ಥಾಪನೆ ಮಾಡಲಾಯಿತು. ಈ ಭಾಗದ ಬೆಳೆ ಹಾನಿಯನ್ನು ತಪ್ಪಿಸಲು ಎದುರು ಭಾಗದಲ್ಲಿ ಅಂದ್ರೆ ಈಗ ರಾಷ್ಟ್ರೀಯ ಹೆದ್ದಾರಿಯ ಮತ್ತೊಂದು ಭಾಗದಲ್ಲಿ ಆಂಜನೇಯನ ದೇವಾಲಯವನ್ನು ಸ್ಥಾಪಿಸಲಾಯಿತು.
ಇದನ್ನೂ ಓದಿ : ಇದು ಶೃಂಗೇರಿ ಶಾರದೆ ಮೂಲ ಕ್ಷೇತ್ರ – ನಿಂತ ಭಂಗಿಯಲ್ಲೇ ಪೂಜಿಸಲ್ಪಡುತ್ತಾಳೆ ತಾಯಿ
ಇನ್ನು ನರಸಿಂಹ ದೇವರ ಶಾಖದ ಉರಿಯನ್ನು ತಾಳಲು ಆಂಜನೇಯನಿಗೆ ನಿತ್ಯ ಸಿಂದೂರ ಮತ್ತು ಬೆಣ್ಣೆಯ ಲೇಪವನ್ನು ಲೇಪಿಸಲಾಗುತ್ತೆ. ಇನ್ನು ನರಸಿಂಹ ಭಕ್ತರ ಪಾಲಿಗಂತು ಕರುಣಾಮಯಿ ಅಂತಾನೆ ಹೇಳಬಹುದು. ಇಲ್ಲಿ ಯಾರಾದ್ರು ಬಂದು ಬೇಡಿಕೊಂಡ್ರೆ ಕಷ್ಟ ಪರಿಹಾರ ವಾಗುತ್ತೆ ಅನ್ನೋ ನಂಬಿಕೆ ಇದೆ. ಇಲ್ಲಿ ಶಂಖ, ಚಕ್ರ ತೀರ್ಥ ಪುಷ್ಕರಣಿಯಲ್ಲಿ ಮಿಂದ್ರೆ ಎಲ್ಲಾ ಪಾಪಗಳೂ ಕಳೆದು ಬೇಡಿದ್ದು ಈಡೇರುತ್ತೆ ಅನ್ನೋ ನಂಬಿಕೆ ಇದೆ.

ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ದೇವಾಲಯವಿರೋದ್ರಿಂದ ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ಎಲ್ಲಾ ಬಸ್ ಗಳೂ ಇಲ್ಲಿಗೆ ಹೋಗುತ್ತವೆ. ಹೀಗಾಗಿ ನೀವು ಸುಲಭವಾಗಿ ಇಲ್ಲಿಗೆ ಹೋಗ ಬಹುದು .
ಇದನ್ನೂ ಓದಿ : ಇದು ಹನುಮನ ಮೊದಲ ದೇವಾಲಯ – ಇಲ್ಲಿ ತೀರ್ಥ ಸೇವಿಸಿದ್ರೆ ಸರ್ಪದೋಷ ಪರಿಹಾರ
Karnataka first Guru Narasimha Temple Saligrama : This guru is worshiped by Narada himself