ಕದ್ರಿಯಲ್ಲಿ ಹರಿಯುತ್ತಿದೆ ಕಾಶಿ ಭಾಗೀರಥಿ ನದಿ ನೀರು : ಇಲ್ಲಿದೆ ಮಂಜುನಾಥನ ಬಗ್ಗೆ ನಿಮಗೆ ತಿಳಿದಿರದ ಸಂಗತಿ

ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನವೂ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದು. ಮಂಗಳೂರಿನ ಕದ್ರಿ ಬೆಟ್ಟಗಳಲ್ಲಿರುವ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಬಹಳ ಸುಂದರವಾಗಿದ್ದು, ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ಮಧ್ಯೆ ಮಂಜುನಾಥಸ್ವಾಮಿ ನೆಲೆಸಿದ್ದಾನೆ. ಇದನ್ನು ಸುಮಾರು ಕ್ರಿ.ಶ. 10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಚರಿತ್ರೆಯಲ್ಲಿ ಹೇಳಲಾಗಿದೆ. ಕದ್ರಿಯಲ್ಲಿ ಹರಿಯುತ್ತಿದೆ ಕಾಶಿಯ ಭಾಗೀರಥಿ ನದಿಯ ನೀರು.

ದಕ್ಷಿಣ ಕನ್ನಡದ ಜಿಲ್ಲಾ ಕೇಂದ್ರ ಮಂಗಳೂರು ನಗರದಲ್ಲಿರುವ ಈ ದೇವಾಲಯವನ್ನು (Kadri Manjunatheshwara Temple )ವಿಜಯನಗರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಹಿಂದೂ ಹಾಗೂ ಬೌದ್ಧ ಧರ್ಮದ ಸಮ್ಮಿಲನವಾಗಿದೆ. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಂಜುನಾಥ ಸ್ವಾಮಿಯ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಪುರಾತನವಾದದ್ದು ಅಂತಾ ಹೇಳಲಾಗುತ್ತದೆ.

ಇದನ್ನೂ ಓದಿ: ಇಲ್ಲಿಗೆ ಬಂದ್ರೆ ಸಂಕಷ್ಟಗಳು ದೂರ : ವರ್ಷಕ್ಕೊಮ್ಮೆ 36 ಗಂಟೆ ದರ್ಶನ ನೀಡುತ್ತಾಳೆ ಚೌಡೇಶ್ವರಿ

ಮಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ ಕೇವಲ 4 ಕಿ.ಮೀ. ದೂರ ಇರುವ ಈ ಕದ್ರಿ ದೇವಸ್ಥಾನಕ್ಕೆ (Kadri Manjunatheshwara Temple) ಸಾಕಷ್ಟು ಪೌರಾಣಿಕ ಹಿನ್ನೆಲೆಯೂ ಇದೆ. ಸಹ್ಯಾದ್ರಿಯಲ್ಲಿ ತಂಗಿದ್ದ ಪರಶುರಾಮನು ಕ್ರೂರ ಕ್ಷತ್ರಿಯರನ್ನು ಕೊಂದು ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದನೆಂದು ನಂಬಲಾಗಿದೆ. ಶಿವನಿಗೆ ವಾಸಿಸಲು ಒಂದು ಸ್ಥಳವನ್ನು ಬೇಡಿಕೊಂಡನು. ಆದರೆ ಸಮುದ್ರ ರಾಜ ಜಾಗ ನೀಡಲು ನಿರಾಕರಿಸಿದನಂತೆ. ಇದರಿಂದ ಕುಪಿತಗೊಂಡ ಪರಶುರಾಮ ತನ್ನ ಅಕ್ಷವನ್ನು ಸಮುದ್ರಕ್ಕೆ ಎಸೆದರಂತೆ.

ಇದಕ್ಕೆ ಹೆದರಿದ ಸಮುದ್ರರಾಜ ಈ ತಾಣವನ್ನು ಪರಶುರಾಮರಿಗೆ ಬಿಟ್ಟುಕೊಟ್ಟನಂತೆ. ಪರಶುರಾಮ ತಪಸ್ಸನ್ನಾಚರಿಸಿದಾಗ ಶಿವನು ಪಾರ್ವತಿ ದೇವಿಯೊಂದಿಗೆ ಪ್ರತ್ಯಕ್ಷನಾಗಿ ಈ ಕ್ಷೇತ್ರದಲ್ಲಿ ನೆಲೆಸಿದನು. ಇಲ್ಲಿ ಈಶ್ವರನು ಮಂಜುನಾಥನ ರೂಪದಲ್ಲಿ ವಿಶ್ವದ ಸುಧಾರಣೆಗಾಗಿ ಕದ್ರಿಯಲ್ಲಿಯೇ ನೆಲೆಸಿದನು ಅಂತಾನೇ ನಂಬಲಾಗಿದೆ. ಮಂಜುನಾಥನ ಅಣತಿಯಂತೆ ಇಲ್ಲಿ ಸಪ್ತಕೋಟಿ ಮಂತ್ರಗಳು ಏಳು ತೀರ್ಥಗಳಾಗಿವೆ.

ದೇವಸ್ಥಾನದ ಹಿಂಭಾಗದಲ್ಲಿ ಒಂದು ಗೋಮುಖದಿಂದ ನಿರಂತರವಾಗಿ ತೀರ್ಥ ಉದ್ಭವವಾಗಿ ಹರಿದು ಬರುತ್ತದೆ. ಕಾಶಿಯಲ್ಲಿರುವ ಭಾಗೀರಥಿ ನದಿಯಿಂದ ನೀರು ಹರಿಯುತ್ತಿದೆ ಎಂಬ ನಂಬಿಕೆಯಿದೆ. ಹರಿದು ಬಂದ ಈ ನೀರು ಒಂಭತ್ತು ಹೊಂಡಗಳಲ್ಲಿ ಶೇಖರಣೆಯಾಗುತ್ತದೆ. ಈ ಹೊಂಡದಲ್ಲಿ ಭಕ್ತರು ಮಿಂದ ನಂತರ ಮಂಜುನಾಥನ ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ: ಸೌತಡ್ಕ : ವಿಘ್ನವಿನಾಶಕನಿಗಿಲ್ಲಿ ಬಯಲೇ ಆಲಯ, ಕಟ್ಟಿದ್ರೆ ಇಷ್ಟಾರ್ಥ ಈಡೇರಿಸುತ್ತಾನೆ ಗಣೇಶ

ಇನ್ನು ಕದ್ರಿ ಗುಡ್ಡದತ್ತ ನಡೆದರೆ ಜೋಗಿ ಮಠ, ಹನುಮಂತನ ಮೂರ್ತಿ, ದುರ್ಗಾದೇವಿ ಮಂದಿರ, ರಾಮ-ಲಕ್ಷ್ಮಣನ ತೀರ್ಥ ಸೇರಿದಂತೆ ಹಲವಾರು ಚಾರಿತ್ರಿಕ ಸ್ಥಳಗಳು ಕಂಡು ಬರುತ್ತದೆ. ದೇವಸ್ಥಾನದಲ್ಲಿ ಮಚ್ಚೇಂದ್ರನಾಥ, ಗೊರಕನಾಥ, ಲೋಕೇಶ್ವರ ಹಾಗೂ ಬುದ್ಧನ ವಿಗ್ರಹಗಳಿವೆ.

ದೇವಸ್ಥಾನದಲ್ಲಿ ವರ್ಷಪೂರ್ತಿ ಹಬ್ಬಗಳು, ಉತ್ಸವಗಳು ನಡೆಯುತ್ತದೆ. ಶಿವರಾತ್ರಿಯಂದು ಮಂಜುನಾಥನಿಗೆ (Kadri Manjunatheshwara Temple) ವಿಶೇಷವಾಗಿ ಅಲಂಕರಿಸಲಾಗು ತ್ತದೆ. ಈ ವೇಳೆ ದೂರದೂರಿನಿಂದ ಬರುವ ಲಕ್ಷಾಂತರ ಭಕ್ತರು ಮಂಜುನಾಥನ ದರ್ಶನ ಪಡೆದು ಪುನೀತರಾಗುತ್ತಾರೆ.

(Kadri Manjunatheshwara Temple in Mangalore)

Comments are closed.