Ranji Trophy Karnataka: ಸರ್ವಿಸಸ್ ವಿರುದ್ಧದ ಪಂದ್ಯ ಡ್ರಾ, 3 ಅಂಕಕ್ಕೆ ತೃಪ್ತಿ ಪಟ್ಟ ಕರ್ನಾಟಕ

ಬೆಂಗಳೂರು: ಆತಿಥೇಯ ಕರ್ನಾಟಕ ಹಾಗೂ ಸರ್ವಿಸಸ್ ತಂಡಗಳ ನಡುವಿನ ರಣಜಿ ಟ್ರೋಫಿ (Ranji Trophy 2022-23) ಎಲೈಟ್ ‘ಸಿ’ ಗುಂಪಿನ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ 3 ಅಂಕಗಳಿಗೆ ತೃಪ್ತಿ ಪಟ್ಟಿದೆ. ಪ್ರಥಮ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಕರ್ನಾಟಕ ( Ranji Trophy Karnataka ) 3 ಅಂಕ ಗಳಿಸಿದ್ರೆ, ಸರ್ವಿಸಸ್ ಕೇವಲ ಒಂದು ಅಂಕ ಪಡೆಯಿತು.

ವಿಕೆಟ್ ನಷ್ಟವಿಲ್ಲದೆ 90 ರನ್’ಗಳಿಂದ 4ನೇ ಹಾಗೂ ಅಂತಿಮ ದಿನದಾಟ ಮುಂದುವರಿಸಿದ ಕರ್ನಾಟಕ ತನ್ನ 2ನೇ ಇನ್ನಿಂಗ್ಸ್’ನಲ್ಲಿ 4 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಉಪನಾಯಕ ಆರ್.ಸಮರ್ಥ್ (119) ಪ್ರಥಮದರ್ಜೆ ಕ್ರಿಕೆಟ್’ನಲ್ಲಿ 11ನೇ ಶತಕ ಬಾರಿಸಿದ್ರೆ, ನಾಯಕ ಮಯಾಂಕ್ ಅಗರ್ವಾಲ್ 73 ರನ್’ಗಳಿಗೆ ಔಟಾಗುವ ಮೂಲಕ ಶತಕ ವಂಚಿತರಾದರು. ಮಧ್ಯಮ ಕ್ರಮಾಂಕದಲ್ಲಿ ಮಾಜಿ ನಾಯಕ ಮನೀಶ್ ಪಾಂಡೆ 23 ರನ್ನಿಗೆ ವಿಕೆಟ್ ಒಪ್ಪಿಸಿ 2ನೇ ಇನ್ನಿಂಗ್ಸ್’ನಲ್ಲೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ನಂತರ 297 ರನ್’ಗಳ ಗುರಿ ಬೆನ್ನಟ್ಟಿದ ಸರ್ವಿಸಸ್ ತಂಡ 39 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಲಾಯಿತು. ಕರ್ನಾಟಕದ ಪ್ರಥಮ ಇನ್ನಿಂಗ್ಸ್’ನಲ್ಲಿ 86 ರನ್ನಿಗೆ 5 ವಿಕೆಟ್ ಪಡೆದಿದ್ದ ಸರ್ವಿಸಸ್’ನ ಮಧ್ಯಮ ವೇಗಿ ದಿವೇಶ್ ಪಥಾನಿಯಾ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪ್ರಥಮ ಇನ್ನಿಂಗ್ಸ್’ನಲ್ಲಿ ಕರ್ನಾಟಕ ತಂಡ 304 ರನ್ ಕಲೆ ಹಾಕಿದ್ರೆ, ಇದಕ್ಕೆ ಪ್ರತಿಯಾಗಿ ಸರ್ವಿಸಸ್ ತಂಡ 261 ರನ್ ಗಳಿಸಿತ್ತು. ಈ ಮೂಲಕ ಮಯಾಂಕ್ ಅಗರ್ವಾಲ್ ಬಳಗ 43 ರನ್’ಗಳ ಅತ್ಯಮೂಲ್ಯ ಇನ್ನಿಂಗ್ಸ್ ಮುನ್ನಡೆ ಸಂಪಾದಿಸಿತ್ತು. ಕರ್ನಾಟಕ ತಂಡ ಡಿಸೆಂಬರ್ 20ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆರಂಭವಾಗಲಿರುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಪಾಂಡಿಚೇರಿ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Exclusive: Mayank Agarwal RCB: ಮಯಾಂಕ್ ಅಗರ್ವಾಲ್’ಗೆ RCB ಗಾಳ.. ಮತ್ತೆ ಬೆಂಗಳೂರು ಪರ ಆಡ್ತಾರಾ ಕನ್ನಡಿಗ?

ಇದನ್ನೂ ಓದಿ : KL Rahul Athiya Shetty wedding : “ಮಗಳ ಮದುವೆಯ ದಿನಾಂಕ ಫಿಕ್ಸ್ ಆದ್ರೆ ಹೇಳಿ, ನಾನೂ ಬರುವೆ ” ಹೀಗಂದರೇಕೆ ಸುನೀಲ್ ಶೆಟ್ಟಿ ?

English : News Next English

Karnataka vs Services Match Draw Karnataka satisfied with 3 points Ranji Trophy Karnataka

Comments are closed.