ಬೆಂಗಳೂರು: ಸ್ಪೋರ್ಟ್ಸ್ ಹರ್ನಿಯಾ ಗಾಯಕ್ಕೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕರ್ನಾಟಕದ ಸ್ಟಾರ್ ಬ್ಯಾಟರ್ ಕೆ.ಎಲ್ ರಾಹುಲ್ ಅಭ್ಯಾಸ (KL Rahul back to practice) ಆರಂಭಿಸಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಾಹುಲ್ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದು, ಟೀಮ್ ಇಂಡಿಯಾ ಕಂಬ್ಯಾಕ್ ಮೇಲೆ ಕಣ್ಣಿಟ್ಟಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಇದೇ ತಿಂಗಳು 29ರಿಂದ ಆರಂಭವಾಗಲಿರುವ 4 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿರುವ ಟೀಮ್ ಇಂಡಿಯಾದಲ್ಲಿ ರಾಹುಲ್ ಸ್ಥಾನ ಪಡೆದಿದ್ದು, ಅದಕ್ಕೂ ಮುಂಚೆ ಫಿಟ್ನೆಸ್ ಸಾಬೀತು ಪಡಿಸಬೇಕಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ.
ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ರಾಹುಲ್ ಟೀಮ್ ಇಂಡಿಯಾ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಸರಣಿ ಆರಂಭಕ್ಕೂ ಮೊದಲೇ ತೊಡೆ ಸಂಧು (Groin Injury) ಗಾಯಕ್ಕೊಳಗಾಗಿ ಸರಣಿಯಿಂದ ಹೊರ ಬಿದ್ದಿದ್ದರು. ಬಳಿಕ ನಡೆದ ಇಂಗ್ಲೆಂಡ್ ಪ್ರವಾಸದ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿಗೂ ರಾಹುಲ್ ಅಲಭ್ಯರಾಗಿದ್ದರು.
ಸ್ಪೋರ್ಟ್ಸ್ ಹರ್ನಿಯಾ ಗಾಯಕ್ಕೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಬಂದಿರುವ ಕೆ.ಎಲ್ ರಾಹುಲ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy NCA) ಪುನಶ್ಚೇತನ ಶಿಬಿರಕ್ಕೆ (Rehabilitation Camp) ಹಾಜರಾಗಿದ್ದು, ಅತೀ ಶೀಘ್ರದಲ್ಲಿ ಟೀಮ್ ಇಂಡಿಯಾಗೆ ಮರಳುವ ವಿಶ್ವಾಸದಲ್ಲಿದ್ದಾರೆ.
ಕೈಗೆ “ಗೂಬೆ” ಚಿತ್ರವನ್ನು ಹಚ್ಚೆ ಹಾಕಿಸಿಕೊಂಡು ಅಚ್ಚರಿ ಮೂಡಿಸಿದ ರಾಹುಲ್, ಗೂಬೆಯ ಮಹತ್ವ ಏನ್ ಗೊತ್ತಾ..?
ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ ಸದಾ ಒಂದಿಲ್ಲೊಂದು ವಿಚಾರಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಸದ್ಯ ಸ್ಪೋರ್ಟ್ಸ್ ಹರ್ನಿಯಾ ಗಾಯದ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ರಾಹುಲ್, ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಕೆಯ ಹಾದಿಯಲ್ಲಿದ್ದಾರೆ. 30 ವರ್ಷದ ಸ್ಟೈಲಿಷ್ ಸ್ಟಾರ್ ರಾಹುಲ್ ಟ್ಯಾಟೂ (KL Rahul Tattoo) ಪ್ರಿಯನೂ ಹೌದು, ಮೈತುಂಬಾ ಟ್ಯಾಟೂ ಹಾಕಿಸಿಕೊಂಡಿರುವ ರಾಹುಲ್ ಈಗ ಮತ್ತೊಂದು ಇಂಟ್ರೆಸ್ಟಿಂಗ್ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಚ್ಚರಿ ಯಾಕಂದ್ರೆ ರಾಹುಲ್ ತಮ್ಮ ಬಲಗೈಗೆ “ಗೂಬೆ”ಯ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.
ಹಾಗಾದ್ರೆ ಎಲ್ಲಾ ಬಿಟ್ಟು ಗೂಬೆಯ ಚಿತ್ರವನ್ನು ರಾಹುಲ್ ತಮ್ಮ ಬಲಗೈ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದು ಯಾಕೆ..? ಇದ್ರ ಹಿಂದೆ ಇಂಟ್ರೆಸ್ಟಿಂಗ್ ಕಥೆಯೊಂದಿದೆ. ಗೂಬೆ ನೋಡಲು ಸಾಮಾನ್ಯ ಪಕ್ಷಿಯಾದರೂ ಅದನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಗೂಬೆ ಲಕ್ಷ್ಮಿ ದೇವಿಯ ಅತ್ಯಂತ ನೆಚ್ಚಿನ ಪಕ್ಷಿ. ಗೂಬೆಯ ದುಂಡಗಿನ ದೊಡ್ಡ ಕಣ್ಣುಗಳನ್ನು ಅಚಲ ನಿರ್ಧಾರದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದು ಏಕಾಗ್ರತೆಯನ್ನು, ಜ್ಞಾನವನ್ನು ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಹಲವು ಖ್ಯಾತ ಪ್ರಸಿದ್ಧ ಕಂಪನಿಗಳು ತಮ್ಮ ಲೋಗೋದಲ್ಲಿ ಗೂಬೆಯನ್ನು ಬಳಸುತ್ತವೆ. ಗೂಬೆಯನ್ನು ಅಶುಭವೆಂದು ಕೆಲವರು ಹೇಳಿದರೆ, ಇನ್ನು ಕೆಲವರು ಗೂಬೆಯನ್ನು ಸಂಪತ್ತಿನ ಸಂಕೇತ ವೆಂದು ನಂಬುತ್ತಾರೆ. ಹೀಗೆ ಗೂಬೆಯನ್ನು ಅದೃಷ್ಟದ ಸಂಕೇತವಾಗಿತ ತಮ್ಮ ಕೈಗೆ ರಾಹುಲ್ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹಾಗ್ ನೋಡಿದ್ರೆ ರಾಹುಲ್ ಅವರಿಗೆ ಕ್ರಿಕೆಟ್ ವೃತ್ತಿಜೀವನಲ್ಲಿ ಅದೃಷ್ಟ ಪದೇ ಪದೇ ಕೈಕೊಡುತ್ತಿದೆ. ಕಳೆದ ತಿಂಗಳು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ರಾಹುಲ್, ಸರಣಿ ಆರಂಭಕ್ಕೆ 24 ಗಂಟೆಗಳಿರುವಾಗ ಗಾಯಗೊಂಡು ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದರು.
ತೊಡೆ ಸಂಧು (Groin Injury) ಗಾಯದಿಂದ ಬಳಲುತ್ತಿದ್ದ ರಾಹುಲ್ ಇಂಗ್ಲೆಂಡ್ ಪ್ರವಾಸಕ್ಕೂ ಅಲಭ್ಯರಾಗಿದ್ದರು. ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಲ್ಲಿ ರಾಹುಲ್ ಅವರಿಗೆ ಉಪನಾಯಕನ ಪಟ್ಟ ಕಟ್ಟಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ರೆ, ಆ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಭಾರತ ತಂಡವನ್ನು ಮುನ್ನಡೆಸಬೇಕಿತ್ತು. ಯಾಕಂದ್ರೆ ನಾಯಕ ರೋಹಿತ್ ಶರ್ಮಾ ಕೋವಿಡ್ ಕಾರಣದಿಂದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಅತ್ತ ರಾಹುಲ್ ಕೂಡ ತಂಡದಲ್ಲಿರದ ಕಾರಣ ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನೇತೃತ್ವ ವಹಿಸಿದ್ದರು. ಆ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್ 7 ವಿಕೆಟ್”ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಸ್ಪೋರ್ಟ್ಸ್ ಹರ್ನಿಯಾ ಗಾಯಕ್ಕೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಾಹುಲ್, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲು 6ರಿಂದ 8 ವಾರಗಳು ಹಿಡಿಯಲಿರುವ ಹಿನ್ನೆಲೆಯಲ್ಲಿ ವೆಸ್ಟ್ ಪ್ರವಾಸದ 5 ಪಂದ್ಯಗಳ ಟಿ20 ಸರಣಿಗೂ ರಾಹುಲ್ ಅಲಭ್ಯರಾಗಲಿದ್ದಾರೆ. ಆಗಸ್ಟ್ 27ರಿಂದ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಯ ಹೊತ್ತಿಗೆ ರಾಹುಲ್ ಟೀಮ್ ಇಂಡಿಯಾಗೆ ಮರಳುವ ಸಾಧ್ಯತೆಯಿದೆ.
ಇದನ್ನೂ ಓದಿ : Pakistan Captain Babar Backs Kohli : “ಧೈರ್ಯವಾಗಿರು ಗೆಳೆಯ” ಪಾಕ್ ನಾಯಕನಿಂದ ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ !
ಇದನ್ನೂ ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ
Team India Player KL Rahul back to practice