ಬೆಂಗಳೂರು : (Break for Ganeshotsava) ವಿವಾದಿತ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೋರಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಹೊತ್ತಿನಲ್ಲೇ ಹಿಂದೂ ಪರ ಸಂಘಟನೆಗಳ ಆಸೆಗೆ ನಿರಾಸೆ ಎದುರಾಗಿದ್ದು, ಈದ್ಘಾ ಮೈದಾನದ ಮಾಲಿಕತ್ವಕ್ಕಾಗಿ ಹೈಕೋರ್ಟ್ ಗೆ ವಕ್ಫ್ ಮಂಡಳಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಮುಂದಿನ ಆದೇಶದವರೆಗೂ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಘನ ನ್ಯಾಯಾಲಯ ಆದೇಶಿಸಿದೆ.
ವಕ್ಫ್ ಮಂಡಳಿ ಈದ್ಗಾ ಮೈದಾನದ ಮಾಲಿಕತ್ವ ಕುರಿತಂತೆ ಬಿಬಿಎಂಪಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ವಕ್ಫ್ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಮುಂದಿನ ಆದೇಶವರೆಗೂ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ. ಇದುವರೆಗೂ ಇದ್ದಂತೆ ಈದ್ಗಾ ಮೈದಾನದಲ್ಲಿ ರಮಜಾನ್ ಹಾಗೂ ಬಕ್ರಿದ್ ಗೆ ಪ್ರಾರ್ಥನೆ ಸಲ್ಲಿಸಬಹುದು. ಅದನ್ನು ಹೊರತುಪಡಿಸಿ ಶುಕ್ರವಾರದ ಪ್ರಾರ್ಥನೆಗೂ ಮೈದಾನ ಬಳಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಇದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ಈ ಮಧ್ಯಂತರ ಆದೇಶದಲ್ಲಿ ಈದ್ಗಾ ಮೈದಾನವನ್ನು ಆಟದ ಮೈದಾನವಾಗಿ ಬಳಸಲು ಅವಕಾಶವಿದೆ ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೇ ಪ್ರಕರಣದ ವಿಚಾರಣೆಯನ್ನು ಸಪ್ಟೆಂಬರ್ 23 ಕ್ಕೆ ಮುಂದೂಡಿದೆ. ಕೆಲದಿನಗಳ ಹಿಂದೆಯಷ್ಟೇ ಚಾಮರಾಜಪೇಟೆಯ ಆಟದ ಮೈದಾನದ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿತ್ತು. ವಕ್ಫ್ ಬೋರ್ಡ್ ಸೂಕ್ತ ದಾಖಲೆ ಒದಗಿಸದ ಕಾರಣಕ್ಕೆ ಆಟದ ಮೈದಾನದ ಮಾಲಿಕತ್ವ ಕಂದಾಯ ಇಲಾಖೆಗೆ ಒಳಪಟ್ಟಿದೆ ಎಂದಿತ್ತು.
ಈ ಆದೇಶದಿಂದ ಹಿಂದೂಪರ ಸಂಘಟನೆಗಳು ಸಂಭ್ರಮದಿಂದ ಗಣೇಶೋತ್ಸವ ಆಚರಣೆಗೆ ಸಜ್ಜಾಗಿದ್ದವು. ಈದ್ಘಾ ಮೈದಾನ ಈಗ ಕಂದಾಯ ಇಲಾಖೆಯ ಆಸ್ತಿಯಾಗಿರೋದರಿಂದ ಇಲ್ಲಿ ಗಣೇಶೋತ್ಸವ ಆಚರಣೆಗೂ ಅನುಮತಿ ನೀಡಬೇಕೆಂದು ಹಿಂದೂ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಇದಕ್ಕೆ ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಗಣೇಶೋತ್ಸವ ಆಚರಿಸಲು ಅವಕಾಶ ಇಲ್ಲ ಎಂದು ಅಬ್ಬರಿಸಿತ್ತು.ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ಶಾಸಕರು, ಸಂಸದರು, ಸಚಿವರು ಹಿಂದೂ ಸಂಘಟನೆಗಳ ಬೆಂಬಲಕ್ಕೆ ನಿಂತಿದ್ದರು. ಈ ವಿವಾದ ಮತ್ತಷ್ಟು ಉಲ್ಬಣಗೊಳ್ಳುವ ಹೊತ್ತಿನಲ್ಲಿ ವಕ್ಫ್ ಮಂಡಳಿ ಈದ್ಗಾ ಮಾಲೀಕತ್ವಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಸದ್ಯ ಮಧ್ಯಂತರ ಆದೇಶ ಹೊರಡಿಸಿದ್ದು, ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ. ಇದರಿಂದ ಹಿಂದೂಪರ ಸಂಘಟನೆಗಳ ಗಣೇಶೋತ್ಸವದ ಕನಸು ಆರಂಭದಲ್ಲೇ ಕಮರಿದಂತಾಗಿದೆ. ಸರ್ಕಾರ ಮಾತ್ರ ಎದುರಾಗಿದ್ದ ದೊಡ್ಡ ಸಂಕಷ್ಟವೊಂದು ಪರಿಹಾರವಾದ ನೆಮ್ಮದಿಯಲ್ಲಿದೆ.
ಇದನ್ನೂ ಓದಿ : Metro Ticket book Mobile : ಮತ್ತಷ್ಟು ಜನಸ್ನೇಹಿ ಆಗ್ತಿದೆ ನಮ್ಮ ಮೆಟ್ರೋ : ಮೊಬೈಲ್ ನಲ್ಲೇ ಬುಕ್ ಮಾಡಬಹುದು ಟಿಕೇಟ್
Break for Ganeshotsava at disputed Idga Maidan: High Court instructs to maintain status quo