Saffron controversy : ಈಶ್ವರಪ್ಪನವರಿಗೇ ಮುಳ್ಳಾಯ್ತಾ ಕೇಸರಿ ಬಾವುಟ : ರಾಜೀನಾಮೆಗೆ ಸೂಚಿಸಿದ ಬಿಜೆಪಿ ಹೈಕಮಾಂಡ್

ಬೆಂಗಳೂರು : ರಾಜ್ಯ ಬಿಜೆಪಿ ಪಾಲಿಗೆ ಸಂಘರ್ಷದ ದಿನಗಳನ್ನು ತಂದಿತ್ತಿದ್ದಾರೆ ಹಿರಿಯ ಸಚಿವ ಈಶ್ವರಪ್ಪ. ಸದಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಪಕ್ಷಕ್ಕೆ ಮುಜುಗರ ತರುವ ಈಶ್ವರಪ್ಪ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದಾರೆ. ಕೆಂಪುಕೋಟೆಯ ಮೇಲೆ ಭಗವಾ ಧ್ವಜ (Saffron controversy) ಹಾರಿಸಬೇಕೆಂಬ ಅವರ ಮಾತು ರಾಜ್ಯದಲ್ಲಿ ವಿವಾದ ಸೃಷ್ಟಿಸಿದೆ. ಈಶ್ವರಪ್ಪ ಮಾತನ್ನೇ ಅಸ್ತ್ರವಾಗಿ ಬಳಸುತ್ತಿರುವ ಕಾಂಗ್ರೆಸ್ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿದ್ದು ಕಳೆದ ನಾಲ್ಕೈದು ದಿನಗಳಿಂದ ಉಭಯ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ‌ಮಧ್ಯೆ ಪಕ್ಷಕ್ಕೆ ಕಾಂಗ್ರೆಸ್ ಪ್ರತಿಭಟನೆಯಿಂದ ಆಗುವ ನಷ್ಟ ತಪ್ಪಿಸಲು ಬಿಜೆಪಿ ಹೈಕಮಾಂಡ್ ಈಶ್ವರಪ್ಪ ರಾಜೀನಾಮೆಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.

ದೇಶದ ಭವ್ಯತೆಯ ಪ್ರತೀಕವಾಗಿರುವ ಕೆಂಪುಕೋಟೆಯ ಮೇಲೆ ಮುಂದೊಂದು ದಿನ ಕೇಸರಿ ಧ್ವಜ ಹಾರಿಸಲಾಗುತ್ತದೆ ಎಂದು ಈಶ್ವರಪ್ಪ ನೀಡಿದ ಹೇಳಿಕೆ ಕಾಂಗ್ರೆಸ್ ಪಾಳಯದ ಹೋರಾಟಕ್ಕೆ ಮುನ್ನುಡಿ ಬರೆದಿದೆ. ಹೀಗಾಗಿ ಇಂಥ ದೇಶದ್ರೋಹಿ ಹೇಳಿಕೆ ನೀಡಿದ ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಅಲ್ಲದೇ ಅವರಿಂದ ರಾಜೀನಾಮೆ ಪಡೆಯಬೇಕೆಂದು ಕಾಂಗ್ರೆಸ್ ನಾಯಕರು ಹೋರಾಟ ಆರಂಭಿಸಿದ್ದಾರೆ.

ಈಶ್ವರಪ್ಪ ರಾಜೀನಾಮೆವರೆಗೂ ನಮ್ಮ ಹೋರಾಟ ಎಂದಿರುವ ಕಾಂಗ್ರೆಸ್ ಉಭಯ ಸದನದಲ್ಲಿ ಅಹೋರಾತ್ರಿ ಪ್ರತಿಭಟನೆಯ ಮೂಲಕ ಬಿಜೆಪಿಗೆ ಮುಜುಗರದ ವಾತಾವರಣ ಸೃಷ್ಟಿಸಿದೆ. ಅಲ್ಲದೇ ಬಿಜೆಪಿ ಈಶ್ವರಪ್ಪ ರಾಜೀನಾಮೆ ಪಡೆಯದೇ ಹೋದಲ್ಲಿ ದೇಶದಾದ್ಯಂತ ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆ ಪ್ರಚಾರ ಮಾಡಿ ಜನರಿಗೆ ಬಿಜೆಪಿ ಅಸಲಿತನ ತೋರಿಸುವುದಾಗಿ ಎಚ್ಚರಿಕೆ ನೀಡಿದೆ.

ಈ‌ ಮಧ್ಯೆ ರಾಜ್ಯ ಕಾಂಗ್ರೆಸ್ ಈಶ್ವರಪ್ಪ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ಹೋರಾಟವನ್ನು ದೇಶ ಮಟ್ಟದಲ್ಲಿ ನಡೆಸುವಂತೆ ಕರೆ ನೀಡಿದೆಯಂತೆ. ಇದರಿಂದ ಕಾಂಗ್ರೆಸ್ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ. ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನ ಈ ಹೋರಾಟ ಬಿಜೆಪಿ ಪಾಳಯಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಷಕ್ಕೆ ಉಂಟಾಗುವ ಮುಜುಗರ ತಪ್ಪಿಸಲು ಈಶ್ವರಪ್ಪ ತಲೆದಂಡಕ್ಕೆ ಸೂಚನೆ ನೀಡಿದ್ದಾರಂತೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಿದ್ದಾಂತ ನಮ್ಮದು ಹೀಗಾಗಿ ಈಶ್ವರಪ್ಪ ರಾಜೀನಾಮೆ ಪಡೆದು ಪ್ರಕರಣವನ್ನು ರಾಜ್ಯ ಮಟ್ಟದಲ್ಲೇ ಕೊನೆಗೊಳಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿದೆ ಎನ್ನಲಾಗುತ್ತಿದೆ.

ಆದರೆ ಈ ಈಶ್ವರಪ್ಪ ರಾಜೀನಾಮೆ‌ ಪಡೆದಲ್ಲಿ ಜನತೆಗೆ ಇದು ಕಾಂಗ್ರೆಸ್ ಗೆಲುವು ಎಂಬ ಸಂದೇಶ ಹೋಗಲಿದೆ ಎಂಬ ಕಾರಣಕ್ಕೆ ರಾಜ್ಯ ಬಿಜೆಪಿ ನಾಯಕರು ಈಶ್ವರಪ್ಪ ತಲೆದಂಡಕ್ಕೆ ಮುಂದಾಗುತ್ತಿಲ್ಲವಂತೆ. ಅಲ್ಲದೇ ಈಶ್ವರಪ್ಪ ನವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದರೇ ಮತ್ತೆ ಜಾತಿ ಹೋರಾಟವೂ ಮುಂದುವರೆಯಬಹುದು ಎಂದ ಆತಂಕವೂ ಬಿಜೆಪಿಗೆ ಕಾಡುತ್ತಿದೆಯಂತೆ. ಹೀಗಾಗಿ ಸದ್ಯ ಈಶ್ವರಪ್ಪ ಭವಿಷ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಹರ್ಷ ಕೊಲೆ ಪ್ರಕರಣ NIA ತನಿಖೆ : ಬಿಜೆಪಿ ನಾಯಕರ ಆಗ್ರಹಕ್ಕೆ ಮಣಿಯುತ್ತಾ ರಾಜ್ಯ ಸರಕಾರ

ಇದನ್ನೂ ಓದಿ : ಮದುವೆಯಿಂದ ಮನೆಗೆ ಹೊರಟವರು ಮಸಣ ಸೇರಿದ್ರು : ವಾಹನ ಕಂದಕಕ್ಕೆ ಉರುಳಿ 14 ದುರ್ಮರಣ

(Saffron controversy sinking to Minister Eshwarappa, BJP High Command NOTE to resignation)

Comments are closed.