ಬ್ರಹ್ಮಾವರ : ಕಳಪೆ ಗುಣಮಟ್ಟದ ಚಿನ್ನಾಭರಣ ಅಡಮಾನವಿಟ್ಟು ವಂಚನೆ

Brahmavara cooperative society cheating : ಕಷ್ಟಕಾಲದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವ ಅನೇಕರು ನಮ್ಮಲ್ಲಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಚಿನ್ನ ಅಡಮಾನವಿಟ್ಟ ವ್ಯಕ್ತಿಯೊಬ್ಬ ಸಾಲ ನೀಡಿದ ಸಹಕಾರಿ ಸಂಘಕ್ಕೆ ಮೋಸ ಮಾಡಿದ್ದಾರೆ.
ಈ ಸಂಬಂಧ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳಪೆ ಗುಣಮಟ್ಟದ ಚಿನ್ನಾಭರಣಗಳನ್ನು ಅಡಮಾನವಿಟ್ಟು ಸಾಲ ಪಡೆಯುವ ಮೂಲಕ ಈ ವ್ಯಕ್ತಿಯು ಸಹಕಾರಿ ಸಂಘಕ್ಕೆ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಕೊಕ್ಕರ್ಣೆ ಶಾಖೆಯ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದಲ್ಲಿ ಈ ಪ್ರಕರಣ ಸಂಭವಿಸಿದೆ. ಮೋಸ ಮಾಡಿರುವ ಆರೋಪಿಯನ್ನು ಯಶವಂತ್ಕುಮಾರ್ ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂಧ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕಿ ಸುರೇಖಾ ಕುಮಾರಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ..?
ಯಶವಂತ್ ಕುಮಾರ್ 2025ರ ಜುಲೈ 24ರಂದು ಕೊಕ್ಕರ್ಣೆಯ ಸಿಂಡಿಕೇಟ್ ಸೇವಾ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಬಳೆ ಹಾಗೂ ಚಿನ್ನದ ಸರ ಸೇರಿದಂತೆ ಒಟ್ಟೂ 69.40 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಡವಿಟ್ಟು ಸಂಘದಿಂದ ಸಾಲಕ್ಕೆ ಮನವಿ ಮಾಡಿದ್ದ.
ಈ ಸಂದರ್ಭದಲ್ಲಿ ಸಂಘದ ಅಪ್ರೈಸರ್ ಕೆ. ಭಾಸ್ಕರ ಆಚಾರ್ಯ ಆಭರಣಗಳನ್ನು ಪರಿಶೀಲಿಸಿ ₹5,20,500 ರಷ್ಟು ಸಾಲ ನೀಡಬಹುದೆಂದು ದೃಢೀಕರಿಸಿದ್ದರು. ಅದರ ಆಧಾರದ ಮೇಲೆ ₹4,60,000 ಸಾಲವನ್ನು ಯಶವಂತ್ಗೆ ನೀಡಲಾಗಿತ್ತು.
ಕೆಲವು ದಿನಗಳ ಬಳಿಕ ಸಂಘದ ಅಪ್ರೈಸರ್ ಕೆ. ಭಾಸ್ಕರ ಆಚಾರ್ಯ ಚಿನ್ನದ ಗುಣಮಟ್ಟವನ್ನು ಮರುಪರಿಶೀಲನೆ ಮಾಡಿದ ಸಂದರ್ಭದಲ್ಲಿ ಆಭರಣಗಳಲ್ಲಿ ಚಿನ್ನದ ಗುಣಮಟ್ಟ ಕಡಿಮೆಯಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಾಹಿತಿ ನೀಡಲು ಸಂಘದಿಂದ ಯಶವಂತ್ಗೆ ಕರೆ ಮಾಡಿದರೆ ಅವರು ಸಂಘದ ಸಂಪರ್ಕಕ್ಕೆ ಸಿಗದೇ ವಂಚಿಸಿದ್ದಾರೆ ಎನ್ನಲಾಗಿದೆ. ಸಾಕಷ್ಟು ಪ್ರಯತ್ನದ ಬಳಿಕವೂ ಯಶವಂತ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಿಂಡಿಕೇಟ್ ರೈತರ ಸಹಕಾರಿ ಸಂಘದ ವತಿಯಿಂದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಈ ದೂರಿನಲ್ಲಿ ಉಮಾನಾಥ ಶೆಟ್ಟಿ ಎಂಬವರ ಮೇಲೂ ಗುಮಾನಿ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಾವರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
brahmavara cooperative society cheating gold loan



