ಉಡುಪಿಯ ಮಣ್ಣಿನಲ್ಲಿ ಪಾದಸ್ಪರ್ಶ ಮಾಡಿರುವುದು ನನ್ನ ಪುಣ್ಯ’ : ಕೃಷ್ಣನೂರಿನಲ್ಲಿ ಪ್ರಧಾನಿ ಮೋದಿ ಭಾಷಣ

PM Narendra Modi : ಉಡುಪಿ : ಇದು ಹೊಸ ಭಾರತ, ನಾವು ಯಾರಿಗೂ ಜಗ್ಗಲ್ಲ, ಯಾರಿಗೂ ಬಗ್ಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಯಲ್ಲಿ ಗುಡುಗಿದ್ದಾರೆ. ಇಂದು ಉಡುಪಿಗೆ ಆಗಮಿಸಿ ಶ್ರೀಕೃಷ್ಣ ಮಠದ ಲಕ್ಷಕಂಠಗೀತಾ ಭಗವದ್ಗೀತಾ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ವಿರೋಧಿ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭಾಷಣದ ವೇಳೆ ಉಡುಪಿಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ, ಮಧ್ವಾಚಾರ್ಯರ ಈ ಭೂಮಿಗೆ ಬಂದಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು. ಗುರುಗಳು ಮತ್ತು ಯತಿಗಳ ಜೊತೆ ಇರೋದು ಅಸಂಖ್ಯಾ ಪುಣ್ಯ ಸಂಪಾದಿಸಿದಂತಾಗಿದೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನರು ಏಕಕಾಲದಲ್ಲಿ ಭಗವದ್ಗೀತೆ ಪಠಿಸಿದ್ದಾರೆ.
ವೇದಿಕೆಯಲ್ಲಿರೋ ಸುಗುಣೇಂದ್ರ ತೀರ್ಥ ಶ್ರೀಗಳ ಸಹಿತ ಉಡುಪಿಯ ಅಷ್ಟ ಮಠಗಳ ಶ್ರೀ ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೊಂದು ನನಗೆ ವಿಭಿನ್ನ ಅನುಭೂತಿ, ಉಡುಪಿಗೆ ಕಾಲಿಡೋದೇ ನನಗೆ ಸಂತಸದ ವಿಚಾರ ಎಂದು ಹೇಳಿದ್ದಾರೆ.
ನನ್ನ ಜನನವಾಗಿದ್ದು ಗುಜರಾತ್ನಲ್ಲಿ. ಉಡುಪಿ ಹಾಗೂ ಗುಜರಾತ್ ನಡುವೆ ಅವಿನಾಭಾವ ಸಂಬಂಧವಿದೆ. ಶ್ರೀಕೃಷ್ಣನ ದರ್ಶನ ಆತ್ಮೀಯ ಆಧ್ಯಾತ್ಮಿಕ ಆನಂದ ನೀಡಿದೆ. ಉಡುಪಿ ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿಯಾಗಿದೆ.
ಜನ ಸಂಘದಲ್ಲಿ 1968ರಲ್ಲೇ ವಿ.ಎಸ್.ಆಚಾರ್ಯರನ್ನ ಆಯ್ಕೆ ಮಾಡಿ ಕೊಟ್ಟಿದ್ದು ಉಡುಪಿಯ ಜನತೆ. ಒಂದು ಲಕ್ಷ ಜನರು ಒಂದೇ ಕಂಠದಲ್ಲಿ ಗೀತೆಯಂಥ ಪುಣ್ಯ ಗ್ರಂಥ ಪಠಿಸಿ ಸಾವಿರಾರು ವರ್ಷಗಳ ಭಾರತದ ದಿವ್ಯತೆ ದರ್ಶನ ಆಗಿದೆ.ಇದು ನಮ್ಮ ಮನಸ್ಸು ಮತ್ತು ಮೆದುಳಿಗೆ ಹೊಸ ಶಕ್ತಿ ನೀಡುತ್ತದೆ ಎಂದು ಹೇಳಿದರು.

ಈ ಅಭಿಯಾನ ಸನಾತನ ಪರಂಪರೆಯ ಒಂದು ಸಾಂಸ್ಕೃತಿಕ ಜನಾಂದೋಲನವಾಗಿದೆ.ಭಾರತದಲ್ಲಿ ವೇದ, ಉಪನಿಷತ್, ಶಾಸ್ತ್ರದ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಈ ಕಾರ್ಯಕ್ರಮದ ಕೂಡ ಭಗವದ್ಗೀತೆಯನ್ನು ಮುಂದಿನ ಪೀಳಿಗೆ ಪರಿಚಯಿಸೋ ಭಾಗವಾಗಿದೆ.
ಮೂರು ದಿನಗಳ ಹಿಂದೆ ನಾನು ಅಯೋಧ್ಯೆಯಲ್ಲಿದ್ದೆ, ಅಲ್ಲಿ ಧರ್ಮ ಧ್ವಜದ ಸ್ಥಾಪನೆಯಾಗಿದೆ. ರಾಮಮಂದಿರ ಆಂದೋಲನದಲ್ಲಿ ಉಡುಪಿಯ ಜನರ ಪಾತ್ರ ಇಡೀ ದೇಶಕ್ಕೆ ಗೊತ್ತಿದೆ. ಪರಮಪೂಜ್ಯ ಸ್ವರ್ಗೀಯ ವಿಶ್ವೇಶ ತೀರ್ಥ ಸ್ವಾಮೀಜಿಯನ್ನ ನಾವು ಸ್ಮರಿಸಬೇಕು ಎಂದು ಹೇಳಿದರು.
ಇದೇ ವೇಳೆ ಅಯೋಧ್ಯೆಯ ರಾಮಮಂದಿರಕ್ಕೂ ಉಡುಪಿಯ ನಡುವೆ ಬೆಸೆದಿರುವ ಬಂಧದ ವಿಚಾರವಾಗಿಯೂ ಮಾತನಾಡಿದ ಅವರು, ಹೊಸ ಮಂದಿರದಲ್ಲಿ ಮಧ್ವಾಚಾರ್ಯರ ಹೆಸರಿನ ಒಂದು ದ್ವಾರ ನಿರ್ಮಿಸಿದ್ದೇವೆ. ರಾಮ ಮಂದಿರ ಪರಿಷತ್ ನ ಒಂದು ದ್ವಾರ ಇವರ ಹೆಸರಿನಲ್ಲಿ ಅಗೋದು ಉಡುಪಿಗೆ ಮತ್ತೊಂದು ಹೆಮ್ಮೆಯ ವಿಚಾರ.ಜಗದ್ಗುರು ಮಧ್ವಾಚಾರ್ಯರ ಪರಂಪರೆ ಹರಿದಾಸ ಪರಂಪರೆಗಳಲ್ಲಿ ಒಂದು ಎಂದು ಹೇಳಿದರು.
ಆಪರೇಷನ್ ಸಿಂಧೂರ ವಿಚಾರವನ್ನೂ ಇದೇ ವೇಳೆ ಪ್ರಸ್ತಾಪಿಸಿದ ಅವರು,ಆಪರೇಷನ್ ಸಿಂಧೂರದಲ್ಲಿ ದೇಶ ನಮ್ಮ ಬದ್ಧತೆಯನ್ನ ಕಂಡಿತು. ಪ್ರಸ್ತುತ ಭಾರತ ಯಾರಿಗೂ ಜಗ್ಗಲ್ಲ, ಯಾರೆದುರೂ ಬಗ್ಗಲ್ಲ ಎಂದು ಪ್ರಧಾನಿ ಮೋದಿ ಗುಡುಗಿದರು.
ಸ್ವಚ್ಛತಾ ಅಭಿಯಾನದಲ್ಲಿ ಉಡುಪಿಯ ಪಾತ್ರದ ಬಗ್ಗೆಯೂ ಮಾತನಾಡಿದ ಅವರು, ಸ್ವಚ್ಛತೆ ಅಭಿಯಾನ ನಾವು ಆರಂಭಿಸುವ ಮೊದಲೇ ಉಡುಪಿಯಲ್ಲಿ ಆರಂಭಿಸಲಾಗಿತ್ತು. ಜಲ ಸಂರಕ್ಷಣೆ, ಒಳ ಚರಂಡಿ ವ್ಯವಸ್ಥೆ ಹಲವು ವರ್ಷಗಳ ಹಿಂದೆಯೇ ಉಡುಪಿಯಲ್ಲಿ ಆರಂಭಿಸಲಾಗಿದೆ ಎಂದು ಹೇಳಿದರು.
PM Narendra Modi visit Udupi Sri Krishna Mutt



