ಕೆಎಸ್ಆರ್ಟಿಸಿ ಚಾಲಕರಿಗೆ ಗುಡ್ ನ್ಯೂಸ್: ದುಪ್ಪಟ್ಟಾಯ್ತು ಮಾಸಿಕ ಭತ್ಯೆ ಹಾಗೂ ಪುರಸ್ಕಾರ ದರ
KSRTC Drivers: ಅಪಘಾತ ರಹಿತ ಹಾಗೂ ಅಪರಾಧ ರಹಿತ ಸೇವೆ ಸಲ್ಲಿಸುವ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗದಿಂದ ಸಿಹಿ ಸುದ್ದಿ ದೊರಕಿದೆ. ಅಪಘಾತ ರಹಿತ ಚಾಲನೆ ಮಾಡುವ ಚಾಲಕರ ಮಾಸಿಕ ಭತ್ಯೆ ಹಾಗೂ ನಗದು ಪುರಸ್ಕಾರ ದರವನ್ನು ದುಪ್ಪಟ್ಟು ಮಾಡಲಾಗಿದೆ. ಪರಿಷ್ಕರಣೆಯಾದ ಮೊತ್ತದ ಬಗ್ಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಚಾಲಕರಿಗೆ 5000 ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿತ್ತು. ಆದರೆ ಈ ಮೊತ್ತವನ್ನು ಇದೀಗ 10 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರ ಜೊತೆಯಲ್ಲಿ ಮಾಸಿಕ ಭತ್ಯೆಯನ್ನು 500 ರೂಪಾಯಿಗಳಿಂದ 1000 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಹೀಗೆ ಮಾಡಿದವರ ಮನೆ ಒಡೆಯಲಿದೆ ಕರ್ನಾಟಕ ಸರ್ಕಾರ; ಬುಲ್ಲೋಜರ್ ಕಾರ್ಯಾಚರಣೆಯ ಎಚ್ಚರಿಕೆ
ಅದೇ ರೀತಿ ಬೆಳ್ಳಿ ಪದಕಕ್ಕೆ ಅರ್ಹರಾಗುವ ಚಾಲಕರ ಮಾಸಿಕ ಭತ್ಯೆ ಹಾಗೂ ನಗದು ಪುರಸ್ಕಾರ ದುಪ್ಪಟ್ಟಾಗಿದೆ. ಈ ಹಿಂದೆ ಸಿಗುತ್ತಿದ್ದ 2500 ರೂಪಾಯಿ ನಗದು ಪುರಸ್ಕಾರವನ್ನು 5000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಹಾಗೂ ಮಾಸಿಕ ಭತ್ಯೆಯನ್ನು 250 ರೂಪಾಯಿಗಳಿಂದ 500 ರೂಪಾಯಿಗೆ ಏರಿಸಲಾಗಿದೆ. ಮುಂದಿನ ವರ್ಷ ಜನವರಿ ತಿಂಗಳಿನಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದ್ದು ಕೆಎಸ್ಆರ್ಟಿಸಿ ಸಿಬ್ಬಂದಿ ಫುಲ್ ಸಂತಸ ವ್ಯಕ್ತಪಡಿಸುತ್ತಿದ್ದಾರೆ.



