ಮೈಸೂರಿನಲ್ಲಿ ‘ಮಾರ್ಕ್’ ಮ್ಯಾಜಿಕ್: 15 ಸಾವಿರ ಅಭಿಮಾನಿಗಳಿಂದ ಒಟ್ಟಿಗೆ ಸಂಭ್ರಮ!

Kiccha Sudeepa Mark Film Collection: ಬೆಂಗಳೂರು/ಮೈಸೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ‘ಮಾರ್ಕ್’ (MARK) ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಿಡುಗಡೆಯಾಗಿ ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ. ಈ ಯಶಸ್ಸಿನ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಕಿಚ್ಚ ಸುದೀಪ್ ಅವರು ಥಿಯೇಟರ್ ವಿಸಿಟ್ ಆರಂಭಿಸಿದ್ದು, ಮೈಸೂರಿನಲ್ಲಿ ಅಭಿಮಾನಿಗಳ ಪ್ರೀತಿ ಮಿತಿಮೀರಿದೆ.

ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಮೈಸೂರಿಗೆ ಭೇಟಿ ನೀಡಿದ ಸುದೀಪ್, ಮೊದಲು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮೈಸೂರಿನ ಪ್ರಸಿದ್ಧ ಸಂಗಮ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಲು ನಿರ್ಧರಿಸಿದ್ದರು.

ಆದರೆ, ಸುದೀಪ್ ಅವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಥಿಯೇಟರ್ ಮುಂದೆ ಜನಸಾಗರವೇ ಹರಿದು ಬಂದಿತ್ತು. ಸುಮಾರು 15 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಜಮಾಯಿಸಿದ್ದರು. ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ, ಜನದಟ್ಟಣೆಯನ್ನು ನಿಯಂತ್ರಿಸುವುದು ಪೊಲೀಸರಿಗೂ ಹರಸಾಹಸವಾಗಿತ್ತು. ಅಭಿಮಾನಿಗಳ ಸುರಕ್ಷತೆಯ ದೃಷ್ಟಿಯಿಂದ ಸುದೀಪ್ ಅವರು ಚಿತ್ರಮಂದಿರದ ಒಳಗೆ ಪ್ರವೇಶಿಸದೆ, ಹೊರಗಿನಿಂದಲೇ ಅಭಿಮಾನಿಗಳಿಗೆ ಕೈಬೀಸಿ ಅಲ್ಲಿಂದ ವಾಪಸ್ ತೆರಳಬೇಕಾಯಿತು.

ಬೆಂಗಳೂರಿನಲ್ಲಿ ‘ಸಂತೋಷ’ದ ಕ್ಷಣ:
ಮೈಸೂರಿಗೂ ಮುನ್ನ ಸುದೀಪ್ ಬೆಂಗಳೂರಿನ ಐತಿಹಾಸಿಕ ಸಂತೋಷ್ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಸಾಮಾನ್ಯ ಪ್ರೇಕ್ಷಕರಂತೆ ಗಾಂಧಿನಗರದ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ ಅವರು, ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾದರು. ಚಿತ್ರಮಂದಿರದ ಒಳಗೆ ಅಭಿಮಾನಿಗಳು ಕಿಚ್ಚನ ಎಂಟ್ರಿಗೆ ಸಿಳ್ಳೆ-ಚಪ್ಪಾಳೆಗಳ ಮೂಲಕ ಅದ್ಧೂರಿ ಸ್ವಾಗತ ಕೋರಿದ್ದರು.

ಮ್ಯಾಕ್ಸ್ ನಂತರದ ಯಶಸ್ಸು: ‘ಮ್ಯಾಕ್ಸ್’ ಸಿನಿಮಾದ ಭರ್ಜರಿ ಸಕ್ಸಸ್ ನಂತರ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಜೋಡಿ ‘ಮಾರ್ಕ್’ ಮೂಲಕ ಸತತ ಎರಡನೇ ಬಾರಿಗೆ ಬಾಕ್ಸಾಫೀಸ್ ಮ್ಯಾಜಿಕ್ ಮಾಡಿದೆ.

ಇಸ್ಲಾಮಿಕ್ ‘ಸುಲ್ತಾನರ’ ನಡುವೆ ಬಿರುಕು: ಸೌದಿ ಅರೇಬಿಯಾ vs ಯುಎಇ ಮಹಾಯುದ್ಧ

ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ‘ಮಾರ್ಕ್’
ಹೈ-ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌ಗಳು ಮತ್ತು ಸುದೀಪ್ ಅವರ ಖಡಕ್ ಮ್ಯಾನರಿಸಂಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ವೀಕೆಂಡ್‌ನಲ್ಲಿ ಶೋಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿನಿಮಾ ಲಾಂಗ್ ರನ್ ಕಾಣುವ ಮುನ್ಸೂಚನೆ ನೀಡಿದೆ. ಸದ್ಯಕ್ಕೆ ಚಿತ್ರತಂಡ ಉತ್ತರ ಕರ್ನಾಟಕದ ಪ್ರಮುಖ ನಗರಗಳಿಗೂ ಭೇಟಿ ನೀಡಿ ಸಕ್ಸಸ್ ಟೂರ್ ಮುಂದುವರಿಸಲು ಪ್ಲಾನ್ ಮಾಡಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories