ಕರ್ನಾಟಕ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಕ್ರಾಂತಿಕಾರಿ ಸ್ಪರ್ಶ! ಉಚಿತ ಇನ್ಸುಲಿನ್ ಪೆನ್, ಹೊಸ ಆಸ್ಪತ್ರೆಗಳು ಮತ್ತು ಡಿಜಿಟಲ್ ಹೆಲ್ತ್ ಕ್ರಾಂತಿ
ಮಧುಮೇಹದಿಂದ ಬಳಲುತ್ತಿರುವ 18 ವರ್ಷದೊಳಗಿನ ಮಕ್ಕಳ ಆರೋಗ್ಯ ಸುಧಾರಿಸಲು ಉಚಿತ ಇನ್ಸುಲಿನ್ ಪೆನ್ಗಳನ್ನು ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ಬೆಂಗಳೂರು : ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಬೃಹತ್ ಕೊಡುಗೆಗಳನ್ನು ನೀಡಿದ್ದಾರೆ. ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವಿಕೆ, ನೇಮಕಾತಿ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಈ ಬಾರಿ ಹೆಚ್ಚಿನ ಒತ್ತು ನೀಡಲಾಗಿದೆ.
ಆರೋಗ್ಯ ಇಲಾಖೆಯ ಹೈಲೈಟ್ಸ್:
1. ಟೈಪ್-1 ಮಧುಮೇಹಿ ಮಕ್ಕಳಿಗೆ ಗುಡ್ ನ್ಯೂಸ್:
ಟೈಪ್-1 ಮಧುಮೇಹದಿಂದ ಬಳಲುತ್ತಿರುವ 18 ವರ್ಷದೊಳಗಿನ ಮಕ್ಕಳ ಆರೋಗ್ಯ ಸುಧಾರಿಸಲು ಉಚಿತ ಇನ್ಸುಲಿನ್ ಪೆನ್ಗಳನ್ನು ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
2. ತಾಯಂದಿರ ಮರಣ ಪ್ರಮಾಣದಲ್ಲಿ ಇಳಿಕೆ:
ಸರ್ಕಾರದ ನಿರಂತರ ಅಭಿಯಾನದ ಫಲವಾಗಿ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು ಶೇ.24ರಷ್ಟು ಇಳಿಕೆಯಾಗಿದೆ. ಇದನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಹೆರಿಗೆ ಆಸ್ಪತ್ರೆಗಳಿಗೆ ಆಧುನಿಕ ಉಪಕರಣ ಮತ್ತು ಹೆಚ್ಚಿನ ಮಾನವ ಸಂಪನ್ಮೂಲ ಒದಗಿಸಲಾಗುತ್ತಿದೆ.
3. ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶ:
ಅನೀಮಿಯಾ ಮುಕ್ತ ಕರ್ನಾಟಕ: 52 ಲಕ್ಷ ಮಕ್ಕಳ ತಪಾಸಣೆ ನಡೆಸಿ, ರಕ್ತಹೀನತೆ ಇರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
ಪೌಷ್ಟಿಕ ಪುನಃಶ್ಚೇತನ ಕೇಂದ್ರ (NRC): ತೀವ್ರ ಅಪೌಷ್ಟಿಕತೆ ಇರುವ ಮಕ್ಕಳಿಗಾಗಿ ಉಳಿದ 63 ತಾಲ್ಲೂಕುಗಳಲ್ಲಿ ಹೊಸ ಎನ್ಆರ್ಸಿ ಕೇಂದ್ರಗಳನ್ನು ಸ್ಥಾಪಿಸಲು 6 ಕೋಟಿ ರೂ. ಮೀಸಲಿಡಲಾಗಿದೆ.
4. ಆಯುಷ್ಮಾನ್ ಭಾರತ್ ದರ ಪರಿಷ್ಕರಣೆ:
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಚಿಕಿತ್ಸಾ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಹೆಚ್ಚುವರಿಯಾಗಿ 400 ಕೋಟಿ ರೂ. ಒದಗಿಸಲಾಗಿದೆ.
5. ಡಿಜಿಟಲ್ ಆರೋಗ್ಯ ಮತ್ತು ನೇಮಕಾತಿ:
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಗಣಕೀಕೃತ ನೋಂದಣಿ ಮತ್ತು UPI ಆಧಾರಿತ ಶುಲ್ಕ ಪಾವತಿ ವ್ಯವಸ್ಥೆ ಜಾರಿ.
ಸ್ಕ್ಯಾನಿಂಗ್ಗಾಗಿ ಟೆಲಿ-ರೇಡಿಯಾಲಜಿ ಮತ್ತು ಸ್ಮಾರ್ಟ್ ಲೇಬರ್ ರೂಮ್ಗಳ ಅಳವಡಿಕೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಮುಖ ಘೋಷಣೆಗಳು:
1. ಹೊಸ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು:
ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ 100 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ.
ವಿಜಯಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಡಿಪಿಆರ್ ಸಿದ್ಧಪಡಿಸಲಾಗುವುದು.
ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಮತ್ತು ಬಾಗಲಕೋಟೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಘಟಕ ಕಾಲೇಜು ಸ್ಥಾಪನೆಗೆ ಕ್ರಮ.
2. ಜಯದೇವ ಹೃದ್ರೋಗ ಆಸ್ಪತ್ರೆ ವಿಸ್ತರಣೆ:
ಮೈಸೂರಿನ ಜಯದೇವ ಆಸ್ಪತ್ರೆಯನ್ನು 600 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗುವುದು.
ಬೆಂಗಳೂರಿನ ಗೋವಿಂದರಾಜನಗರದ ಬಿಬಿಎಂಪಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆ.
3. ಕ್ಯಾನ್ಸರ್ ಮತ್ತು ಐವಿಎಫ್ ಕೇಂದ್ರಗಳು:
ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಜನರಿಗಾಗಿ ಮುನಿರಾಬಾದ್ನಲ್ಲಿ ಹೊಸ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ.
ಬೆಂಗಳೂರಿನ ವಾಣಿ ವಿಲಾಸ್ ಮತ್ತು ಕಲಬುರಗಿಯ ಜಿಮ್ಸ್ನಲ್ಲಿ ಐವಿಎಫ್ (IVF) ಕೇಂದ್ರಗಳ ಸ್ಥಾಪನೆ.
4. ವಿಕ್ಟೋರಿಯಾ ಆಸ್ಪತ್ರೆ ಮರುನಾಮಕರಣ:
ಬೆಂಗಳೂರಿನ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯನ್ನು ಇನ್ಮುಂದೆ ʻಶಾಂತವೇರಿ ಗೋಪಾಲಗೌಡ ಆಸ್ಪತ್ರೆʼ ಎಂದು ಮರುನಾಮಕರಣ ಮಾಡಲಾಗುವುದು.



