ಹಣವಸೂಲಿ ಆರೋಪ : ಪಿಎಸ್ಐ ಸೇರಿ 7 ಪೊಲೀಸ್ ಸಿಬ್ಬಂದಿ ಅಮಾನತು

ಚಿಕ್ಕಮಗಳೂರು : ಸಾರ್ವಜನಿಕರಿಂದ ಹಣ ವಸೂಲಿ ಮಾಡಿ, ಕರ್ತವ್ಯ ಲೋಪವೆಸಗಿರುವ ಆರೋಪದಡಿ ಓರ್ವ ಪಿಎಸ್ ಐ ಹಾಗೂ 7 ಮಂದಿ ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ ಪಿ ಅಕ್ಷಯ್ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಸುಖೇತ್ ಸೇರಿದಂತೆ ಯುವರಾಜ್, ಲಕ್ಷ್ಮಣ್, ಪ್ರದೀಪ್ ಎಂಬ ಮೂವರು ಪೇದೆಗಳನ್ನ ಅಮಾನತು ಮಾಡಲಾಗಿದೆ. ಅಲ್ಲದೇ ಮತ್ತೊಂದು ಆಲ್ದೂರು ಪೊಲೀಸ್ ಠಾಣೆಯ ಪೇದೆಗಳಾದ ಶಶಿಧರ್, ಸ್ವಾಮಿ, ಅರುಣ್ ಕುಮಾರ್, ನವೀನ್ ಅವರನ್ನು ಅಮಾನತು ಮಾಡಲಾಗಿದೆ.

ಅಮಾನತುಗೊಂಡ ಬಸವನಹಳ್ಳಿ ಪೊಲೀಸರು ಗಾಂಜಾ ಕೇಸ್‍ನಲ್ಲಿ ಫಿಕ್ಸ್ ಮಾಡುವುದಾಗಿ ಬೆದರಿಸಿ ಸ್ಥಳೀಯರಿಬ್ಬರಿಂದ 3.40 ಲಕ್ಷ ರೂ. ಪಡೆದಿದ್ದರು ಎಂದು ಹೇಳಲಾಗಿದೆ. ಇನ್ನು ಆಲ್ದೂರು ಠಾಣೆಯ ಪೊಲೀಸರು ಸಹ ಹೋಮ್ ಸ್ಟೇ ಮಾಲೀಕನಿಗೆ ಬೆದರಿಸಿ ಲಂಚ ಪಡೆದಿದ್ದರು ಎನ್ನಲಾಗಿದೆ.

ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಓರ್ವ ಪಿಎಸ್‍ಐ ಹಾಗೂ ಏಳು ಸಿಬ್ಬಂದಿಯನ್ನು ಅಮಾನತು ಮಾಡಿದ್ದು, ಅಮಾನತಾದ ಎಲ್ಲರೂ ಇಲಾಖಾ ತನಿಖೆ ಎದುರಿಸಬೇಕಿದೆ.

Comments are closed.