ಬಹುಕೋಟಿ ಐಎಂಎ ಹಗರಣ ಸಂತ್ರಸ್ಥರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ

0

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಯ ಸಾವಿರಾರು ಜನರ ಕಣ್ಣೀರಿಗೆ ಕಾರಣವಾಗಿದ್ದ ಐಎಂಎ ವಂಚನೆ ಪ್ರಕರಣದ ಸಂತ್ರಸ್ಥರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಠೇವಣಿದಾರರ ಭಾಗಶಃ ಹಣವನ್ನು ಮರಳಿಸಲು ಸಿದ್ಧತೆ ನಡೆದಿದೆ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಪೀಠಕ್ಕೆ ಮಾಹಿತಿ ನೀಡಿದೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಠೇವಣಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ವೇಳೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ವಿವರಣೆ ನೀಡಿದ್ದು, ಠೇವಣಿದಾರರ ಆಧಾರ್ ಧೃಢೀಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.  ಆಧಾರ್ ನಂಬರ್ ಧೃಢೀಕರಣಗೊಂಡ ಬಳಿಕ ಠೇವಣಿದಾರರಿಗೆ ಅವರ ಹೂಡಿಕೆಯ ಭಾಗಶಃ ಹಣ ಹಿಂತಿರುಗಿಸಲಾಗುವುದು ಎಂದು ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಪ್ರಕರಣದ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿದ್ದು, ಕೊರೋನಾ ಹಿನ್ನೆಲೆಯಲ್ಲಿ ತನಿಖೆ ವಿಳಂಬವಾಗುತ್ತಿದೆ ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ವಿವರಣೆ ನೀಡಿದರು.

ಸಿಬಿಐ ಪರ ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನ್ಯಾಯಾಲಯ ಜೂನ್ 30 ರಂದು ಐದನೇ ತನಿಖಾ ಪ್ರಗತಿ ವರದಿ ಸಲ್ಲಿಕೆಯಾಗಿದೆ. ಆ ಬಳಿಕ ಮೂರು ತಿಂಗಳಾದ್ರೂ ವರದಿ ಬಂದಿಲ್ಲ. ಹೀಗಾಗಿ ಅಕ್ಟೋಬರ್ 20 ರೊಳಗೆ ಮುಚ್ಚಿದ ಲಕೋಟೆಯಲ್ಲಿ ಆರನೇ ತನಿಖಾ ವರದಿಯನ್ನು ಸಲ್ಲಿಸಬೇಕೆಂದು ಸೂಚಿಸಿದೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 21 ಕ್ಕೆ ಮುಂದೂಡಿದೆ.  ಐಎಂಎ ಹಗರಣ 2019 ರಲ್ಲಿ ಬೆಳಕಿಗೆ ಬಂದಿದ್ದು, ರಾಜ್ಯದ ವಿವಿಧೆಡೆಯ ಸಾವಿರಾರು ಹೂಡಿಕೆದಾರರ 4 ಸಾವಿರ ಕೋಟಿಗೂ ಅಧಿಕ ಮೊತ್ತದ ವಂಚನೆ ಮಾಡಿದ ಆರೋಪ ಕೇಳಿಬಂದಿದ್ದು, ಈ ಹಗರಣದಲ್ಲಿ ರಾಜ್ಯದ ಹಲವು ಸಚಿವ,ಶಾಸಕರು ಹಾಗೂ ಐಪಿಎಸ್ ಅಧಿಕಾರಿಗಳ ಹೆಸರು ಕೇಳಿಬಂದಿತ್ತು.

Leave A Reply

Your email address will not be published.