ಬಾಲಿವುಡ್ ನಲ್ಲಿ ನಿರ್ಮಾಪಕರು ಹಾಗೂ ನಟ-ನಟಿಯರ ನಡುವಿನ ಫೈಟ್ ಇದೇನು ಹೊಸದಲ್ಲ. ಇದೀಗ ಬಾಲಿವುಡ್ ನ ನಂ 1 ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಕರಾವಳಿ ಮೂಲದ ನಟ ಸುನೀಲ್ ಶೆಟ್ಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಹೆಸರನ್ನು ಬಳಸಿಕೊಂಡು ಹಲವರಿಗೆ ವಂಚಿಸಲಾಗುತ್ತಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ.
ಕೆಲದಿನಗಳಿಂದ ಮಾಧ್ಯಮಗಳಲ್ಲಿ ಸುನೀಲ್ ಶೆಟ್ಟಿ ವಿನೀತ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿತ್ತು.ಕೆಲ ಪತ್ರಿಕೆಗಳಲ್ಲೂ ಈ ವರದಿ ಪೋಟೋ ಸಹಿತ ಪ್ರಕಟವಾಗಿತ್ತು. ಈ ಸುದ್ದಿ ಪ್ರಕಟಿಸಿದ ಪತ್ರಿಕೆ ವಿರುದ್ಧ ಸುನೀಲ್ ಶೆಟ್ಟಿ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಷ್ಟೇ ಅಲ್ಲ ಅದೇ ದೂರಿನಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ ಒಡೆತನದ ಸಿನಿಮಾ ನಿರ್ಮಾಣ ಸಂಸ್ಥೆಯೂ ನನ್ನ ಅನುಮತಿ ಇಲ್ಲದೇ ನನ್ನ ಪೋಟೋವನ್ನು ಹಾಗೂ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಸುಳ್ಳು ಸುದ್ದಿಯನ್ನು ಹರಡಿ ಜನರನ್ನು ವಂಚಿಸುತ್ತಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ.
ಏಕ್ತಾ ಕಪೂರ್ ತಾವು ಸುನೀಲ್ ಶೆಟ್ಟಿಯೊಂದಿಗೆ ಚಿತ್ರ ನಿರ್ಮಿಸುತ್ತಿದ್ದು, ಅದಕ್ಕೆ ಹಣದ ಅವಶ್ಯಕತೆ ಇದೆ ಎಂದು ಏಕ್ತಾ ಕಪೂರ್ ಹಲವರಿಂದ ಹಣ ಕೂಡ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಸುನೀಲ್ ಶೆಟ್ಟಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಟಿ ಏಕ್ತಾ ಕಪೂರ್ ಬಾಲಾಜಿ ಟೆಲಿಫಿಲಂ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಹೊಂದಿದ್ದು ಹಲವು ಸೀರಿಯಲ್ ಕೂಡ ನಿರ್ಮಿಸಿದ್ದಾರೆ.
ಇತ್ತೀಚಿಗೆ ವೆಬ್ ಸರಣಿ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಏಕ್ತಾ ಕಪೂರ್ ವಿರುದ್ಧ ಸುನೀಲ್ ಶೆಟ್ಟಿ ಈಗ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
Comments are closed.