ನಟಿಮಣಿಯರ ಜಾಮೀನಿಗೆ ಒತ್ತಾಯಿಸಿ ಬೆದರಿಕೆ ಪತ್ರ…! ಲೆಟರ್ ಜೊತೆ ಇತ್ತು ಸ್ಪೋಟಕವಸ್ತು…!!

ಬೆಂಗಳೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಾಟೆ ಪ್ರಕರಣ ಹಾಗೂ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವಂತೆ ಬೆದರಿಕೆ ಪತ್ರ ಬರೆಯಲಾಗಿದೆ. ಅಷ್ಟೇ ಅಲ್ಲ ನಟಿಮಣಿಯರಾದ ರಾಗಿಣಿ ಮತ್ತು ಸಂಜನಾಗೆ ಬೇಲ್ ನಿರಾಕರಿಸಿದರೇ ಬಾಂಬ್ ಇಟ್ಟು ಸ್ಪೋಟಿಸುವುದಾಗಿಯೂ ಬೆದರಿಕೆ ಒಡ್ಡಲಾಗಿದ್ದು, ಆರೋಪಿಗಳನ್ನು  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ಎರಡು ಪ್ರಕರಣಗಳ ತನಿಖೆ ಈಗಾಗಲೇ ಚುರುಕುಗೊಂಡಿದ್ದು, ಹಲವು ಖ್ಯಾತನಾಮರ ಹೆಸರು ಈ ಎರಡು ಪ್ರಕರಣದಲ್ಲಿ ಕೇಳಿಬಂದಿದೆ. ಹೀಗಿರುವಾಗಲೇ , ಸೋಮವಾರ ಸಂಜೆ ವೇಳೆ ಸಿಸಿಎಚ್ ಕೋರ್ಟ್ 36 ಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಪತ್ರ ಬಂದಿದೆ. ತಕ್ಷಣ ಪರಿಶೀಲನೆ ನಡೆಸಿದ ಶ್ವಾನದಳಕ್ಕೆ ಬೆದರಿಕೆ ಪತ್ರ ಹಾಗೂ ಬಂಡೆ ಒಡೆಯಲು ಬಳಸುವ ಸ್ಪೋಟಕ್ ಸಿಕ್ಕಿದೆ.

ಬೆದರಿಕೆ ಪತ್ರದಲ್ಲಿ ನಟಿ ಸಂಜನಾ ಮತ್ತು ರಾಗಿಣಿಗೆ ಜಾಮೀನು ನೀಡದಿದ್ದರೇ ಜಡ್ಜ್ ಎಂ.ಸೀನಪ್ಪನವರ ಕಾರ್ ನ್ನು ಬ್ಲಾಸ್ಟ್ ಮಾಡಲಾಗುವುದು ಎಂದು ಬೆದರಿಸಲಾಗಿದೆ. ಈ ಪತ್ರ ತುಮಕೂರಿನಿಂದ ಬಂದಿದ್ದು, ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಗುಬ್ಬಿ ತಾಲೂಕು ಚೇಳೂರಿನ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಡಿ.ಜೆಹಳ್ಳಿ ಹಾಗೂ ಕೆಜಿಹಳ್ಳಿ ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವಂತೆ ಸಿಸಿಬಿ ಡಿಸಿಪಿಯವರನ್ನು ಬೆದರಿಸಲಾಗಿದ್ದು, ಹಿಂದೆ ಸರಿಯದೇ ಇದ್ದಲ್ಲಿ ಕಮೀಷನರ್ ಕಚೇರಿ ಉಡಾಯಿಸುವುದಾಗಿಯೂ ಪತ್ರ ಬಂದಿದೆ.

ಈ ಬಗ್ಗೆ ವಿವರಣೆ ನೀಡಿರುವ ನಗರ ಪೊಲೀಸ್ ಆಯುಕ್ತ ಕಮಲ ಪಂಥ್, ಪತ್ರ ಬಂದಿರೋದು ನಿಜ. ಪತ್ರದ ಜೊತೆಗೆ ಸಣ್ಣ ಪ್ಯಾಕೇಟ್ ಇತ್ತು. ಸಿಸಿಬಿ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ತನಿಖೆಗೆ ಮೂರು ತಂಡ ರಚಿಸಲಾಗಿದೆ. ಕೋರ್ಟ್ ಗೆ ಬಿಗಿಭದ್ರತೆ ಒದಗಿಸಲಾಗಿದೆ ಎಂದಿದ್ದಾರೆ.  

Comments are closed.