ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ನಿನ್ನೆಯಷ್ಟೇ ಸಂಸದ ಸುರೇಶ್ ಅಂಗಡಿಯವರು ಕೊರೊನಾ ಸೋಂಕಿಗೆ ಬಲಿಯಾದ ಬೆನ್ನಲ್ಲೇ ಇದೀಗ ಬಸವಕಲ್ಯಾಣ ಕ್ಷೇತ್ರದ ಶಾಸಕ ನಾರಾಯಣ ರಾವ್ (65 ವರ್ಷ) ಸಾವನ್ನಪ್ಪಿ ದ್ದಾರೆ.
ಆಗಸ್ಟ್ 31 ರಂದು ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ನಾರಾಯಣ ರಾವ್ ಅವರನ್ನು ದಾಖಲು ಮಾಡಲಾಗಿತ್ತು. ನಿನ್ನೆ ರಾತ್ರಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 3.55 ನಿಮಿಷಕ್ಕೆ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಶ್ವಾಸಕೋಶಕ್ಕೆ ಸೋಂಕು, ನ್ಯೂಮೋನಿಯಾ, ಅಧಿಕ ರಕ್ತದೊತ್ತಡ ಹಾಗೂ ಶುಗರ್ ನಿಂದಾಗಿ ಆರಂಭದಲ್ಲಿಯೇ ಅವರ ಆರೋಗ್ಯ ಬಿಗಡಾಯಿಸಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾದ ಎರಡನೇ ದಿನವೇ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ 3.55ಕ್ಕೆ ಮೃತಪಟ್ಟಿದ್ದಾರೆ.