ದೆಹಲಿಯಲ್ಲಿ ರೈತರ ಪ್ರತಿಭಟನೆ : ಘರ್ಷಣೆಗೆ ಓರ್ವ ಅನ್ನದಾತ ಬಲಿ

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ಹೊರಟಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರೋಧಿಸಿ ಕಳೆದೆರಡು ತಿಂಗಳಿನಿಂದ ನಡೆಯುತ್ತಿರುವ ರೈತ ಶಾಂತಿಯುತ ಪ್ರತಿಭಟನೆ ತಾರಕಕ್ಕೇರಿದ್ದು, ಓರ್ವ ಅನ್ನದಾತನನ್ನ ಪ್ರತಿಭಟನೆ ಬಲಿ ಪಡೆದಿದೆ.

ಗಣರಾಜ್ಯೋತ್ಸವ ಆಚರಣೆಯ ಬೆನ್ನಲ್ಲೇ ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.ದೆಹಲಿಯ ಮುಕಾರ್ಬಾ ಚೌಕ್ ನಲ್ಲಿ ಬ್ಯಾರಿಕೇಡ್ ಗಳನ್ನು ಮುರಿಯಲು ಯತ್ನಿಸಿದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ , ಜೊತೆಗೆ ಅಶ್ರುವಾಯು ಪ್ರಯೋಗಿಸಲಾಗಿದೆ. ಆದರೂ ಜಗ್ಗದ ರೈತರು ದೆಹಲಿಯ ಹೃದಯ ಭಾಗ ತಲುಪಿದ್ದು, ಕೆಂಪು ಕೋಟೆಗೆ ನುಗ್ಗಿ ರೈತ ಧ್ವಜ ಹಾರಿಸಿದ್ದಾರೆ.
ಈ ವೇಳೆಯಲ್ಲಿ ರೈತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ರೈತರ ಮೇಲೆ ಪೊಲೀಸರು ಅಶ್ರುವಾಯು, ಲಾಠಿಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ರೈತ ಮೃತಪಟ್ಟಿದ್ದಾರೆ.

ರೈತರು ಸಿಮೆಂಟೆಡ್ ಬ್ಯಾರಿಕೇಡ್‌ಗಳನ್ನು ಮುರಿದಿದ್ದಾರೆ. ನಂಗ್ಲಾಯ್‌ನಲ್ಲಿರುವ ಅಡೆತಡೆಗಳನ್ನು ಉಲ್ಲಂಘಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ರೈತರು ತಮ್ಮ ಟ್ರಾಕ್ಟರ್ ರ್ಯಾಲಿಯೊಂದಿಗೆ ನಜಫ್‌ಗಡದ ಕಡೆಗೆ ಮುಂದುವರಿಯಬೇಕಿತ್ತು, ಆದರೆ ಒಂದು ನಿರ್ದಿಷ್ಟ ಭಾಗದ ಪ್ರತಿಭಟನಾಕಾರರು ಮಧ್ಯ ದೆಹಲಿಯ ಕಡೆಗೆ ಮೆರವಣಿಗೆ ನಡೆಸಲು ನಿರ್ಧರಿಸಿದರು. ಮೆರವಣಿಗೆಗಾಗಿ ಮಧ್ಯ ದೆಹಲಿಯ ಐತಿಹಾಸಿಕ ರಾಜ್‌ಪಾತ್‌ಗೆ ತಲುಪುವ ಪ್ರಯತ್ನದಲ್ಲಿ ನೂರಾರು ರೈತರು ಕಾಲ್ನಡಿಗೆಯಿಂದ ಮತ್ತು ಟ್ರಾಕ್ಟರುಗಳ ಮೂಲಕ ದೆಹಲಿ ಅಕ್ಷರ್ಧಮ್ ದೇವಸ್ಥಾನವನ್ನು ತಲುಪಿದ್ದಾರೆ.

ಆದರೆ, ಅವರನ್ನು ಪೊಲೀಸರು ತಡೆದಿದ್ದಾರೆ. ಅಲ್ಲದೇ ದೇವಾಲಯ ರಸ್ತೆಯಲ್ಲಿ ರೈತರ ಸಂಖ್ಯೆ ಹೆಚ್ಚುತ್ತಿದ್ದು, ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ ಎಂದು ತಿಳಿದುಬಂದಿದೆ. ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಐಟಿಒ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.

Comments are closed.