ರಾಜಕಾರಣದಲ್ಲಿ ಕಿಡಿ ಹೊತ್ತಿಸುತ್ತೇನೆ,ಬಿಗ್ ಬಾಸ್ ನಲ್ಲಿ ನಂಗೂ ಒಂದು ಅವಕಾಶ ಕೊಡಿ…! ಹಳ್ಳಿಹಕ್ಕಿ ವಿಶ್ವನಾಥ್ ಬೋಲ್ಡ್ ಟಾಕ್…!!

ಸುಪ್ರೀಂ ಕೋರ್ಟ್ ಆದೇಶದಿಂದ ಬಹುತೇಕ ಸಕ್ರಿಯ ರಾಜಕಾರಣದಿಂದ ಹೊರಗುಳಿಯುವ ಸ್ಥಿತಿಯಲ್ಲಿರುವ ಮಾಜಿ ಸಂಸದ, ಅನರ್ಹ ಶಾಸಕ ಹಾಗೂ ಹಿರಿಯ ರಾಜಕಾರಣಿ ವಿಶ್ವನಾಥ್ ಅಲಿಯಾಸ್ ಹಳ್ಳಿಹಕ್ಕಿ ವಿಶ್ವನಾಥ್ ದೊಡ್ಮನೆ ಸೇರೋ ಆಸೆ ವ್ಯಕ್ತಪಡಿಸಿದ್ದಾರೆ. ನನಗೆ ಬಿಗ್ ಬಾಸ್ ಗೆ ಅವಕಾಶ ಸಿಕ್ಕರೆ ರಾಜಕೀಯದಲ್ಲಿ ಕಿಡಿ ಹೊತ್ತಿಸುತ್ತೇನೆ ಎಂದಿದ್ದಾರೆ.

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಸೇರಿಕೊಳ್ಳೋ ಬಗ್ಗೆ ಮುಕ್ತವಾಗಿ ಮಾತನಾಡಿದ  ವಿಶ್ವನಾಥ್, ನನಗೆ ವಿಶೇಷ ಆಹ್ವಾನಿತರಾಗಿ ಅವಕಾಶ ನೀಡಿದ್ರೇ ಖಂಡಿತ ಬಿಗ್ ಬಾಸ್ ಮನೆಗೆ ಹೋಗಲು ಸಿದ್ಧವಿದ್ದೇನೆ. ಅಷ್ಟೇ ಅಲ್ಲ ಹಲವು ರಾಜಕಾರಣದ ಸ್ಪೋಟಕ್ ಸಂಗತಿ ಬಿಚ್ಚಿಟ್ಟು ಕಿಡಿ ಹೊತ್ತಿಸುತ್ತೇನೆ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸುವ ಮುನ್ಸೂಚನೆ ನೀಡಿದ್ದಾರೆ.

ಬಿಗ್ ಬಾಸ್ ಸೀಸನ್ 6 ರವೇಳೆಗೆ ನನ್ನನ್ನು ಸ್ಪರ್ಧಿಯಾಗಿ ಕರೆದಿದ್ದರು. ಆದರೆ ಆಗ ನನ್ನ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಾಗಿ ನಾನು ಹೋಗಲಿಲ್ಲ. ಈಗ ವಿಶೇಷ ಅತಿಥಿಯಾಗಿ ಕರೆದರೇ ಕೆಲ ದಿನಗಳ ಮಟ್ಟಿಗೆ ಹೋಗಲು ಸಿದ್ಧವಿದ್ದೇನೆ. ಅಲ್ಲಿರುವ ಸ್ಪರ್ಧಿಗಳಿಗೆ ರಾಜಕೀಯ ಶಿಕ್ಷಣನೀಡುತ್ತೇನೆ ಎಂದಿದ್ದಾರೆ.

ಚುನಾವಣೆ ಹಾಗೂ ರಾಜಕೀಯ ಚಟುವಟಿಕೆಗಳಿರೋದರಿಂದ ತುಂಬ ದಿನ ಬಿಗ್ ಬಾಸ್ ಮನೆಯಲ್ಲಿ ಇರೋದು ಸಾಧ್ಯವಿಲ್ಲ. ಸ್ಪೆಶಲ್ ಎಂಟ್ರಿ ಕೊಟ್ಟರೇ ಖಂಡಿತಾ ಹೋಗುತ್ತೇನೆ ಎನ್ನುವ ಮೂಲಕ ತಮ್ಮ ಆಸೆ ತೋಡಿಕೊಂಡಿದ್ದಾರೆ.

ಹೀಗಾಗಿ ಸಧ್ಯದಲ್ಲೇ ಬಿಗ್ ಬಾಸ್ ಮನೆಗೆ ಸ್ಪೆಶಲ್ ಎಂಟ್ರಿಯಲ್ಲಿ ವಿಶ್ವನಾಥ್ ಪಾಲ್ಗೊಳ್ಳೋದು ಬಹುತೇಕ ಖಚಿತ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಹೇಳೋ ರಹಸ್ಯ, ಮಾತುಕತೆ ಹಾಗೂ ಚರ್ಚೆಗಳು ಹೊರಜಗತ್ತಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತವೆ.

ವಿವಾದಗಳು ಹೆಚ್ಚಿದಂತೆ ಕಾರ್ಯಕ್ರಮದ ಟಿಆರ್ಪಿ ಕೂಡ ಹೆಚ್ಚುತ್ತದೆ. ಈ ಕಾರಣಕ್ಕೆ ವಿಶ್ವನಾಥ್ ರಾಜಕೀಯ ಕಿಡಿ ಹೊತ್ತಿಸುವ ಮುನ್ಸೂಚನೆ ನೀಡಿದ ಮೇಲಂತೂ ಪಕ್ಕಾ ದೊಡ್ಮನೆಗೆ ಹಳ್ಳಿಹಕ್ಕಿ ಎಂಟ್ರಿ ಫಿಕ್ಸ್ ಎನ್ನಲಾಗುತ್ತಿದೆ. ಮೂಲಗಳ ಮಾಹಿತಿ ಪ್ರಕಾರ  ಈ ವಾರಾಂತ್ಯಕ್ಕೆ ವಿಶ್ವನಾಥ್ ಒಂಟಿಮನೆ ಆಟಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸದಾಕಾಲ ಎಚ್ಡಿಕೆ, ಸಿದ್ಧರಾಮಯ್ಯ ಸೇರಿದಂತೆ ಎಲ್ಲರನ್ನೂ ಹಿಗ್ಗಾಮುಗ್ಗಾ ಟೀಕಿಸುವ ವಿಶ್ವನಾಥ್ ಒಂದೊಮ್ಮೆ ಬಿಗ್ ಬಾಸ್ ಮನೆ ಸೇರಿದಲ್ಲಿ ರಾಜಕೀಯ ನಾಯಕರ ಎದೆಯಲ್ಲಿ ಸಣ್ಣ ನಡುಕ ಆರಂಭವಾಗೋದಂತು ಗ್ಯಾರಂಟಿ ಎನ್ನಲಾಗುತ್ತಿದೆ.

Comments are closed.