ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಪ್ರಭಾವ ತೀವ್ರವಾಗಿದ್ದರೂ ಸೋಂಕಿತರ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ನಲ್ಲಿ ಕೆಲವು ರಿಯಾಯತಿ ಘೋಷಿಸಿದ್ದು, ಜೂನ್ 3 ರಿಂದ ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಸಿಎಂ ಬಿಎಸ್ವೈ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಈ ತೀರ್ಮಾನ ಘೋಷಿಸಿದ್ದು, ರಫ್ತು ವ್ಯವಹಾರಕ್ಕೆ ಬುಧವಾರದಿಂದಲೇ ಅವಕಾಶ ನೀಡಲಾಗಿದೆ. ಇದಲ್ಲದೇ ಗಾರ್ಮೆಂಟ್ಸ್ ಸೇರಿದಂತೆ ಹಲವು ಉದ್ಯಮಕ್ಕೆ ಶೇಕಡಾ ಅರ್ಧದಷ್ಟು ಕಾರ್ಮಿಕರ ಜೊತೆ ಕಾರ್ಯಾರಂಭ ಮಾಡಲು ಅನುಮತಿ ನೀಡಲಾಗಿದೆ.

ಕೃಷಿ ಉತ್ಪನ್ನಗಳು, ಟ್ರ್ಕ್ಯಾಕ್ಟರ್ ಉತ್ಪಾದನ, ಸಿದ್ಧಉಡುಪು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಅಟೋಮೊಬೈಲ್ ಉದ್ಯಮಕ್ಕೆ ಅವಕಾಶ ನೀಡಲಾಗಿದೆ. ಆದರೆ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಆದೇಶಿಸಲಾಗಿದೆ.

ಆದರೆ ಇನ್ನೂ ಜೂನ್ 7 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಲಾಕ್ ಡೌನ್ ಮುಂದುವರಿಸಬೇಕಾ ಬೇಡವಾ ಎಂಬುದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಮ್ಮತ ಮೂಡಿಲ್ಲ.

ಹೀಗಾಗಿ ಶನಿವಾರ ಮತ್ತೊಮ್ಮೆ ಸಿಎಂ ಬಿಎಸ್ವೈ ಸಭೆ ನಡೆಸಲಿದ್ದು, ಆ ಬಳಿಕ ಲಾಕ್ ಡೌನ್ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದರೂ ಹಳ್ಳಿಗಳ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ.

ಕೊವೀಡ್ ತಾಂತ್ರಿಕ ಸಮಿತಿ ಈ ಅಂಶ ಆಧರಿಸಿ ಇನ್ನು ಕನಿಷ್ಠ 7 ರಿಂದ 14 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡುವ ಅಗತ್ಯವಿದೆ ಎಂದು ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಸರ್ಕಾರ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆಗಳು ಕಡಿಮೆಯಾಗಿದ್ದು, ಸೋಂಕಿನ ಇಳಿಕೆ ಆಧರಿಸಿ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸೋ ಸಾಧ್ಯತೆ ಇದೆ.