Ravi Channannavar :ಖಾಕಿ ಬಿಟ್ಟು ಖಾದಿ ತೊಡ್ತಾರಾ ಖಡಕ್ ಐಪಿಎಸ್ ಆಫೀಸರ್….!? ರವಿ ಚನ್ನಣ್ಣನವರ್ ಸುತ್ತ ಎಲ್ಲರ ಚಿತ್ತ…!!

ವರ್ಷದ ಹಿಂದೆಯಷ್ಟೇ ಕರ್ನಾಟಕದ ಸಿಂಗಂ ಖ್ಯಾತಿಯ ಖಡಕ್ ಐಪಿಎಸ್ ಆಫೀಸರ್ ಅಣ್ಣಾಮಲೈ ಖಾಕಿ ತೊರೆದು ಖಾದಿ ತೊಟ್ಟು ಅಚ್ಚರಿ ಮೂಡಿಸಿದ್ದರು. ಅದ್ಯಾಕೋ ಇದೇ ಹಾದಿಯಲ್ಲಿ ಕರ್ನಾಟಕದ ಸ್ಟಾರ್ ಪೊಲೀಸ್ ಆಫೀಸರ್ ರವಿ ಚೆನ್ನಣ್ಣನವರ್ ಕೂಡ  ಸಾಗುತ್ತಾರೆ ಅನ್ನೋ ಅನುಮಾನ ಹುಟ್ಟಿಕೊಂಡಿದೆ.

ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲದ ರವಿ ಚೆನ್ನಣ್ಣನವರ್ ತಳಮಟ್ಟದಿಂದ  ಐಪಿಎಸ್ ವರೆಗಿನ ಹಾದಿ ಯುವಕರಿಗೆ ಮಾದರಿ. ಛಲದಂಕ ಮಲ್ಲನಂತೆ ತನ್ನ ಕನಸು ಈಡೇರಿಸಿಕೊಂಡ ರವಿ ಚೆನ್ನಣ್ಣನವರ್ ಸಿನಿಮಾ ಸ್ಟಾರ್ ಗೂ ಕಮ್ಮಿಯಿಲ್ಲದಷ್ಟು ಅಭಿಮಾನಿಗಳಿದ್ದಾರೆ.

ಈ ಅಭಿಮಾನವನ್ನು ಮತವಾಗಿ ಪರಿವರ್ತಿಸಿಕೊಂಡು  ವಿಧಾನಸಭೆ ಪ್ರವೇಶಕ್ಕೆ ರವಿ ಸಿದ್ಧತೆ ನಡೆಸಿದ್ದಾರಾ? ಹೌದು ಎನ್ನುತ್ತಿದೆ ಅವರ ಇತ್ತೀಚಿನ ಚಟುವಟಿಕೆಗಳು. ಕೊರೋನಾದಂತಹ ಸಂದಿಗ್ಧದ ಕಾಲದಲ್ಲೂ ರವಿ ಚೆನ್ನಣ್ಣನವರ್ ರಾಜ್ಯದ ಪ್ರಮುಖ ಮಠಾಧೀಶರ ದರ್ಶನದಲ್ಲಿ ಬ್ಯುಸಿಯಾಗಿದ್ದು, ಇದು ಚುನಾವಣೆಯ ಸಿದ್ಧತೆ ಎಂಬ ಸುದ್ದಿ ಹುಟ್ಟುಹಾಕಿದೆ.

ಇತ್ತೀಚಿಗಷ್ಟೇ ಚಿತ್ರದುರ್ಗದ ಬಸವಮಾಚಿ ಮಹಾಸ್ವಾಮಿಗಳನ್ನು ಭೇಟಿ ಮಾಡಿದ ರವಿ ಚೆನ್ನಣ್ಣವರ್ ಅವರೊಂದಿಗೆ ಅರ್ಧಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದು, ಆಶೀರ್ವಾದ ಪಡೆದು ವಾಪಸ್ಸಾಗಿದ್ದಾರೆ. ಇದಲ್ಲದೇ, ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದವನ್ನು ಪಡೆದಿದ್ದಾರೆ.

ಇದರೊಂದಿಗೆ ಹರಿಹರ ಪೀಠದ ವಚನಾನಂದಶ್ರೀಗಳು, ಬೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯನ್ನು ಭೇಟಿ ಮಾಡಿದ ರವಿ ಚೆನ್ನಣ್ಣನವರ್ ಸುಧೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರವಿ ಚೆನ್ನಣ್ಣವರ್ ದೊಡ್ಡಬಳ್ಳಾಪುರ ಅಥವಾ ನೆಲಮಂಗಲ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂಧಾಗಲಿದ್ದಾರೆ ಎನ್ನಲಾಗುತ್ತಿದೆ.

Comments are closed.