ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಪೀಪಲ್ಸ್ ಪದ್ಮ ಅಭಿಯಾನದಡಿಯಲ್ಲಿ ಸ್ಯಾಂಡಲ್ ವುಡ್ ನ ಎವ್ವರ್ ಗ್ರೀನ್ ನಟ ಅನಂತ ನಾಗ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಆಗ್ರಹ ಕನ್ನಡಿಗರಿಂದ ಆರಂಭವಾಗಿದ್ದು, ಇದಕ್ಕೆ ಸ್ಯಾಂಡಲ್ ವುಡ್ ನಟರು ಬಲ ತುಂಬಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ನಾಲ್ಕೂವರೆ ದಶಕದಿಂದ ಕಲಾಸೇವೆ ಸಲ್ಲಿಸುತ್ತಿರುವ ಬಹುಭಾಷಾ ನಟ ಅನಂತ್ ನಾಗ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಕೂಗು ಜೋರಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್ ಅನಂತ ನಾಗ್ ಫಾರ್ ಪದ್ಮಾ ಅವಾರ್ಡ್ ಅಭಿಯಾನ ಆರಂಭವಾಗಿದೆ. #ananthnagforpadmaaward

ಈ ಅಭಿಯಾನಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬೆಂಬಲ ನೀಡಿದ ಬೆನ್ನಲ್ಲೇ ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ತಮ್ಮ ಬೆಂಬಲ ಸೂಚಿಸಿದ್ದಾರೆ. ನನ್ನ ನೆಚ್ಚಿನ ನಟರಲ್ಲಿ ಒಬ್ಬರಾದ ಶ್ರೀಯುತ ಅನಂತ ನಾಗ್ ಸರ್ ಗೆ ಪದ್ಮ ಪ್ರಶಸ್ತಿ ನೀಡಬೇಕೆಂಬುದು ನಮ್ಮೆಲ್ಲರ ಆಶಯ. ನಾನು ಅವರ ದೊಡ್ಡ ಅಭಿಮಾನಿ. ಸಿನಿಮಾ ರಂಗಕ್ಕೆ ಅನಂತನಾಗ್ ಕೊಡುಗೆ ಅಪಾರ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಈ ಅಭಿಯಾನಕ್ಕೆ ಹಾಸ್ಯನಾಯಕ ನಟ ಶರಣ್ ಕೂಡ ಬೆಂಬಲ ಸೂಚಿಸಿದ್ದು, ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಅನಂತ ನಾಗ್ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಳಿಯಲಾರದಷ್ಟು. ಕನ್ನಡದಕ್ಕೆ ಸೀಮಿತವಾಗದೇ ಅವರ ಪ್ರತಿಭೆ ಜಾಗತಿಕ ಮಟ್ಟದ್ದು ಎಂದರೇ ತಪ್ಪಾಗಲಾರದು. ಇಂತಹ ಒಬ್ಬ ಅಪ್ರತಿಮ ಕಲಾವಿದನಿಗೆ ಭಾರತದ ಅತ್ಯುನ್ನತ ಗೌರವ ಸಿಗಲು ಅಭಿಯಾನ ಆರಂಭಿಸುವವರೆಗೂ ಕಾಯಬೇಕಿತ್ತೆ ಎಂದಿದ್ದಾರೆ.

ಇನ್ನು ಅನಂತ ನಾಗ್ ಪರ ಆರಂಭವಾಗಿರುವಅಭಿಯಾನವನ್ನು ಬೆಂಬಲಿಸಿರುವ ನಿರ್ದೇಶಕ ಹೇಮಂತ್ ಎಂ.ರಾವ್, ಜನರ ಪ್ರೀತಿಯೇ ನನಗೆ ಸಿಗುವ ಅತ್ಯುನ್ನತ ಗೌರವ ಎಂದು ಅನಂತನಾಗ್ ಒಮ್ಮೆ ಹೇಳಿದ್ದರು. ಈಗ ಆಪ್ರೀತಿ ತೋರುವ ಕಾಲ ಬಂದಿದೆ. ಎಲ್ಲರೂ ಅಭಿಯಾನ ಆರಂಭಿಸಿ ಎಂದಿದ್ದಾರೆ.