ಈಗಾಗಲೇ ಕೊರೋನಾ ಎರಡನೇ ಅಲೆಯಿಂದ ಸಂಕಷ್ಟಕ್ಕೊಳಗಾದವರ ಸಹಾಯಕ್ಕೆ ಧಾವಿಸಿರುವ ನಟ ಸುದೀಪ್ ಮತ್ತಷ್ಟು ಸಹಾಯಕ್ಕೆ ಮುಂದಾಗಿದ್ದಾರೆ. ಚಾಮರಾಜನಗರದ ವಿಶೇಷ ಚೇತನರ ಶಾಲೆಯೊಂದರ ಸಮಸ್ಯೆಗೆ ಸುದೀಪ್ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿರುವ ಪ್ರಥ್ವಿ ವಸತಿ ಶಾಲೆ ಮಳೆಯಿಂದ ಸೋರುತ್ತಿತ್ತು. ಅಲ್ಲದೇ ಲಾಕ್ ಡೌನ್ ಸೇರಿದಂತೆ ವಿವಿಧ ಸಮಸ್ಯೆಯಿಂದಾಗಿ ಮಕ್ಕಳು ಊಟಕ್ಕೂ ಪರದಾಡುವ ಸ್ಥಿತಿ ಇತ್ತು. ಈ ವಿಷ್ಯ ತಿಳಿದ ಸುದೀಪ್ ತಮ್ಮ ಕಿಚ್ಚ ಸುದೀಪ್ ಚ್ಯಾರಿಟೇಬಲ್ ಫೌಂಡೇಶನ್ ವತಿಯಿಂದ ಸಹಾಯಕ್ಕೆ ಮುಂದಾಗಿದ್ದಾರೆ.
ಅಂದಾಜು 40 ಕ್ಕೂ ಹೆಚ್ಚು ಮಕ್ಕಳಿರುವ ಈ ಶಾಲೆಯ ಸಮಸ್ಯೆಗೆ ಸುದೀಪ್ ಚ್ಯಾರಿಟೇಬಲ್ ಫೌಂಡೆಶನ್ ನೆರವಾಗಿದ್ದು, ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ, ಆಹಾರದ ಕಿಟ್ ಒದಗಿಸಿದೆ. ಅಲ್ಲದೇ ಶಾಲೆಯ ಕಟ್ಟಡ ದುರಸ್ಥಿ ಹಾಗೂ ಅಗತ್ಯ ಬಿದ್ದರೇ ಸ್ಥಳಾಂತರಕ್ಕೂ ನೆರವಾಗುವುದಾಗಿ ಹೇಳಿದೆ.
ಪ್ರಸ್ತುತ ಶಾಲೆ ಬಾಡಿಗೆ ಕಟ್ಟಡದಲ್ಲಿದ್ದು, ಅವಕಾಶವಿದ್ದರೇ ಕಟ್ಟಡ ದುರಸ್ಥಿ. ಇಲ್ಲವಾದರೇ ಕಟ್ಟಡವನ್ನು ಸ್ಥಳಾಂತರಿಸಲು ಸಹಾಯ ಮಾಡುವುದಾಗಿ ಟ್ರಸ್ಟ್ ರಾಜ್ಯಾಧ್ಯಕ್ಷ ರಮೇಶ್ ಕಿಟ್ಟಿ ಹೇಳಿದ್ದಾರೆ.
ಇತ್ತೀಚಿಗಷ್ಟೇ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದ ಸುದೀಪ್, ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗುವ ಭರವಸೆ ನೀಡಿದ್ದರು. ಅಲ್ಲದೇ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರಿಗೂ ಕಿಚ್ಚ ಸುದೀಪ್ ನೆರವು ನೀಡಿದ್ದರು.
ಮಂಗಳಮುಖಿಯರು ಸೇರಿದಂತೆ ಕೊರೋನಾ ಸಂಕಷ್ಟದಿಂದ ಸಮಸ್ಯೆಗೊಳಗಾದ ಹಲವರಿಗೆ ನಟ ಸುದೀಪ್ ಸಹಾಯ ಹಸ್ತ ಚಾಚಿದ್ದು, ಆ ಮೂಲಕ ರಿಯಲ್ ಲೈಫ್ ನಲ್ಲೂ ತಾವು ಹೀರೋ ಎಂಬುದನ್ನು ಸಾಬೀತು ಮಾಡಿದ್ದಾರೆ.
Comments are closed.