ಬೆಂಗಳೂರು : ಕೊರೊನಾ ವೈರಸ್ ಸೋಂಕು ಆರಂಭವಾದ ದಿನದಿಂದಲೂ ರಾಜ್ಯ ಸರಕಾರ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡುತ್ತಲೇ ಬಂದಿದೆ. ಇದೀಗ ರಾಜ್ಯ ಸರಕಾರ ಮತ್ತೊಂದು ಎಡವಟ್ಟು ಮಾಡಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಕೊರೊನಾ ಸೋಂಕಿಗೆ ತುತ್ತಾಗುವ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಹೈಫೈ ಸೌಲಭ್ಯ ನೀಡಲು ಮುಂದಾಗಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಈಗಾಗಲೇ 10,000ದ ಗಡಿದಾಟಿರುವ ಹೆಮ್ಮಾರಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರತೆಯನ್ನು ತೋರಿಸಲಿದೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರಿಗೆ ರಾಜ್ಯ ಸರಕಾರ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ.

ಕೊರೊನಾ ಸೋಂಕಿಗೆ ತುತ್ತಾದವರಿಗೆ ಕನಿಷ್ಠ ಸೌಲಭ್ಯಗಳನ್ನೂ ರಾಜ್ಯ ಸರಕಾರ ಒದಗಿಸಿಲ್ಲ. ಸಾಲದಕ್ಕೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯಿಂದಾಗಿ ಕೊರೊನಾ ಸೋಂಕಿತರನ್ನು ಮನೆಯಲ್ಲಿಯೇ ಇರಿಸಿ ಚಿಕಿತ್ಸೆ ನೀಡುವುದಾಗಿ ರಾಜ್ಯ ಸರಕಾರ ಹೇಳುತ್ತಿದೆ. ಇನ್ನು ಹೊರ ರಾಜ್ಯಗಳಿಂದ ಬಂದವರನ್ನೂ ಹೋಮ್ ಕ್ವಾರಂಟೈನ್ ಮಾಡಿದೆ. ಆದರೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹೈಫೈ ಸೌಲಭ್ಯಗಳನ್ನು ನೀಡಲು ರಾಜ್ಯ ಸರಕಾರ ಮುಂದಾಗಿದೆ.

ಶಾಸಕರು, ಅಧಿಕಾರಿಗಳು ಕೊರೊನಾಗೆ ತುತ್ತಾದರೆ ಕುಮಾರಕೃಪಾ ಗೆಸ್ಟ್ ಹೌಸ್ ಚಿಕಿತ್ಸೆ ನೀಡಲು ಸಿದ್ಧತೆ ನಡೆಸಿದೆ. ಅಲ್ಲದೇ ಹೋಟೆಲ್ ನ 100 ಕೊಠಡಿಗಳನ್ನು ಬುಕ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಡವರಿಗೊಂದು, ರಾಜಕಾರಣಿಗಳಿಗೊಂದು ಚಿಕಿತ್ಸೆ ನೀಡಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.