ಕನ್ನಡಿಗರ ಕೊರೋನಾ ಸಂಕಷ್ಟಕ್ಕೆ ಮಿಡಿದ ಕರಾವಳಿ ವೀರ…! ಆಮ್ಲಜನಕ ಯಂತ್ರ ಒದಗಿಸಲು ಮುಂದಾದ ಸುನೀಲ್ ಶೆಟ್ಟಿ …!!

ಕೊರೋನಾ ಎರಡನೇ ಅಲೆಗೆ ಆರೋಗ್ಯ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದು, ಜನರು ಆಸ್ಪತ್ರೆಗಳಲ್ಲಿ ಆಮ್ಲಜನಕ,ಇಂಜಕ್ಷನ್ ಸೇರಿದಂತೆ ಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸಿನಿಮಾರಂಗವೂ ಮಿಡಿದಿದ್ದು, ಕರಾವಳಿಯ ನಟ ಸುನೀಲ್ ಶೆಟ್ಟಿ ಕನ್ನಡಿಗರಿಗಾಗಿ ನೆರವಿನ ಹಸ್ತ ಚಾಚಿದ್ದಾರೆ.

ಕೊರೋನಾ ಸೋಂಕಿತರಿಗೆ ತೀವ್ರವಾಗಿ  ಆಮ್ಲಜನಕದ ಕೊರತೆ ಉಂಟಾಗಿರುವುದನ್ನು  ಮನಗಂಡ ಸುನೀಲ್ ಶೆಟ್ಟಿ ಅಂತಹ ರೋಗಿಗಳಿಗಾಗಿ ಆಕ್ಸಿಜನ್ ಕಾನ್ಸಟ್ರೇಟರ್ ಯಂತ್ರ ಕೊಡುಗೆಯಾಗಿ ನೀಡುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ಬಡತನ ರೇಖೆಗಿಂತ  ಕೆಳಗಿರುವ ರೋಗಿಗಳಿಗಾಗಿ  ಸುನೀಲ್ ಶೆಟ್ಟಿ ಈ ಸೌಲಭ್ಯ ಒದಗಿಸಲು ಮುಂದಾಗಿದ್ದು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.

ಕೆವಿಎನ್ ಪ್ರತಿಷ್ಠಾನದ ಜೊತೆ ಸೇರಿ ಸುನೀಲ್ ಶೆಟ್ಟಿ ಈ ಪ್ರಯತ್ನಕ್ಕೆ ಮುಂದಾಗಿದ್ದು, ಸಹಾಯದ ಅಗತ್ಯ ಇದ್ದವರೂ ನಮ್ಮನ್ನು ಸಂಪರ್ಕಿಸಿ ಎಂದಿದ್ದಾರೆ. ಅಷ್ಟೇ ಅಲ್ಲ ನಮ್ಮೊಂದಿಗೆ ಜೈಜೋಡಿಸುವ ಮನಸ್ಸಿದ್ದರೂ ಸಂಪರ್ಕಿಸಿ ಎಂದು  ಮನವಿ ಮಾಡಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಬಾಲಿವುಡ್ ಖಳನಾಯಕ ಸೋನು ಸೂದ್ ಕೂಡ ಬೆಂಗಳೂರು ಪೊಲೀಸರಿಗಾಗಿ ಆಕ್ಸಿಜನ್ ಕಾನ್ಸಟ್ರೇಟರ್  ಕೊಡುಗೆ ನೀಡಿದ್ದರು. ಇದೀಗ ಸುನೀಲ್ ಶೆಟ್ಟಿ ಸಹಾಯ ನೀಡಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್ ಕೂಡ ಮುಂಬೈನಲ್ಲಿ ಅಶಕ್ತರಿಗೆ ನೆರವಾಗಲು ಕೋವಿಡ್ ವಾರ್ ರೂಂ ಸಿದ್ಧಪಡಿಸದ್ದಾರಂತೆ.

Comments are closed.