ಸೂಪರ್ ಸ್ಟಾರ್ ರಾಜಕೀಯ ಎಂಟ್ರಿಗೆ ಭರ್ಜರಿ ಸಿದ್ಧತೆ…! ಬಹಿರಂಗವಾಯ್ತು ಪಕ್ಷದ ಹೆಸರು, ಚಿಹ್ನೆ…!!

ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆ ಸ್ಟಾರ್ ಮಯವಾಗೋ ಎಲ್ಲ ಸಾಧ್ಯತೆ ಇದೆ. ಸೂಪರ್ ಸ್ಟಾರ್ ರಜನಿಕಾಂತ್ ಡಿಸೆಂಬರ್ 31 ರಂದು ಅಧಿಕೃತವಾಗಿ ಪಕ್ಷ ಘೋಷಣೆಯೊಂದಿಗೆ ರಾಜಕೀಯಕ್ಕೆ ಧುಮುಕಲಿದ್ದು, ರಜನಿಕಾಂತ್ ಘೋಷಣೆಗೂ ಮುನ್ನವೇ ಇದೀಗ ಪಕ್ಷದ ಹೆಸರು ಹಾಗೂ ಚಿಹ್ನೆ ಬಹಿರಂಗಗೊಂಡಿದೆ.

ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಡಿಸೆಂಬರದ 31 ರಂದು ಹೊಸ ರಾಜಕೀಯ ಪಕ್ಷ ಘೋಷಿಸುವುದಾಗಿ ಹಾಗೂ ಹೊಸ ವರ್ಷದಿಂದ ಪೂರ್ಣ ಪ್ರಮಾಣದ ರಾಜಕೀಯ ಚಟುವಟಿಕೆ ಆರಂಭಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ ಅವರು ಘೋಷಿಸುವ ಮುನ್ನವೇ ಪಕ್ಷದ ಹೆಸರು ಬಹಿರಂಗವಾಗಿದೆ.

ಮಕ್ಕಳ್ ಸೇವೈ ಕಚ್ಚಿ ಎಂಬುದು ರಜನಿಕಾಂತ್ ಪಕ್ಷದ ಹೆಸರಾಗಿದ್ದು, ಮಕ್ಕಳ್ ಸೇವೈ ಕಚ್ಚಿ ಎಂದರೇ, ಜನರಿಗೆ ಸೇವೆ ಮಾಡುವ ಪಕ್ಷ ಎಂದರ್ಥ. ಇನ್ನು ಪಕ್ಷದ ಚಿಹ್ನೆಯಾಗಿ ಮಧ್ಯಮವರ್ಗದ ಜನರ ಓಡಾಟದ ಆಧಾರವಾದ ಅಟೋ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಜನಿಕಾಂತ್ ಚುನಾವಣಾ ಆಯೋಗಕ್ಕೆ  ಪಕ್ಷದ ನೋಂದಣಿಗೆ ನೀಡಿರುವ ಮನವಿ ಹಾಗೂ ಚುನಾವಣಾ ಆಯೋಗ ನೀಡಿರುವ ಚಿಹ್ನೆಯ ಮಾಹಿತಿ ಆಧರಿಸಿ ರಜನಿಕಾಂತ್ ಪಕ್ಷ ಘೋಷಿಸುವ ಮುನ್ನವೇ ತಮಿಳು ಮಾಧ್ಯಮಗಳು ಈ ಸುದ್ದಿ ಪ್ರಸಾರ ಮಾಡುತ್ತಿವೆ.

ರಜನಿಕಾಂತ್ ಪಕ್ಷದ ಹೆಸರು ಆಯ್ಕೆ ಮಾಡುವ ಸಂದರ್ಭದಲ್ಲಿ ಬಹುಭಾಷಾ ನಟ ಹಾಗೂ ಸ್ನೇಹಿತ ಕಮಲ್ ಹಾಸನ್ ಜೊತೆ ಈ ಬಗ್ಗೆ ಚರ್ಚಿಸಿ ನಿರ್ಧರಿಸಿದ್ದಾರಂತೆ. ಮೊದಲು ಪಕ್ಷದ ಹೆಸರನ್ನು ಮಕ್ಕಳ್ ಶಕ್ತಿ ಕಳಗಂ ಎಂದು ಇಡಲು ನಿರ್ಧರಿಸಿದ್ದರಂತೆ. ಬಳಿಕ  ಹೆಸರನ್ನು ಆಯ್ಕೆ ಮಾಡಲಾಗಿದೆ.

ನಟ ಕಮಲ್ ಹಾಸನ ಕೂಡ ಈಗಾಗಲೇ ಮಕ್ಕಳ ನಿಧಿ ಮಯಂ ಎಂಬ ಪಕ್ಷ ಸ್ಥಾಪಿಸಿದ್ದು, ಈಗಾಗಲೇ ಚುನಾವಣೆಯ ಸಿದ್ಧತೆ ಆರಂಭಿಸಿದ್ದು, ಇತ್ತೀಚಿಗಷ್ಟೇ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಗಮನ ಸೆಳೆದಿದ್ದರು.

ಇನ್ನು ರಜನಿಕಾಂತ್ ಹಾಗೂ ಕಮಲಹಾಸನ್ ಇಬ್ಬರೂ ತಮ್ಮ ರಾಜಕೀಯ ಪಕ್ಷಗಳ ಜೊತೆಗೆ  ಈ ಬಾರಿ ತಮಿಳುನಾಡಿನ  ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಸ್ಥಿತ್ಯಂತರಕ್ಕೆ ಸಾಕ್ಷಿಯಾಗುವ ಸಾಧ್ಯತೆ ದಟ್ಟವಾಗಿದೆ.

Comments are closed.