ಕೋಟ : DL ಜೆರಾಕ್ಸ್ ಕೊಟ್ಟಿದ್ದಕ್ಕೆ ಪೊಲೀಸರಿಂದ ದೌರ್ಜನ್ಯ : ಪ್ರಶ್ನಿಸಿದ ಮಗ ಜೈಲು ಪಾಲು, ಆಸ್ಪತ್ರೆಯಲ್ಲಿ ತಾಯಿಯ ಕಣ್ಣೀರು ..!
ಕೋಟ : ಬೈಕ್ ನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಮೂಲ ದಾಖಲೆ ನೀಡಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ತಾಯಿ, ಮಗನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದಿದೆ.
ಸಾಮಾನ್ಯವಾಗಿ ವಾಹನ ಚಾಲನೆಯ ವೇಳೆಯಲ್ಲಿ ಬಹುತೇಕರು ಮೂಲಪ್ರತಿಗಳನ್ನು ಇಟ್ಟುಕೊಂಡಿರೋದಿಲ್ಲ. ತಮ್ಮ ಬಳಿಯಲ್ಲಿರುವ ಝರಾಕ್ಸ್ ಪ್ರತಿಯನ್ನೇ ತೋರಿಸಿ ಪ್ರಯಾಣಿಸುತ್ತಾರೆ. ಆದ್ರೆ ಬೈಕ್ ಸವಾರ ಮೂಲ ದಾಖಲೆಯ ಬದಲು ಝೇರಾಕ್ಸ್ ಪ್ರತಿ ನೀಡಿರೋದೆ ಇದೀಗ ಅಪರಾಧವಾಗಿ ಹೋಗಿದೆ. ಬುದ್ಧಿವಂತರ ಜಿಲ್ಲೆಯ ಅದರಲ್ಲೂ ಡಾ. ಕೋಟ ಶಿವರಾಮ ಕಾರಂತರ ಊರಿನ ಪೊಲೀಸರು ಅಕ್ಷರಶಃ ಮನುಷತ್ವ ಮರೆತು ವರ್ತಿಸಿದ ರೀತಿ ಮಾತ್ರ ಇಡೀ ಇಲಾಖೆಯೇ ತಲೆ ತಗ್ಗಿಸುವಂತದ್ದು.
ಸೋಮವಾರದಂದು ಪ್ರಶಾಂತ್ ಎಂಬವರು ತನ್ನ ತಾಯಿಗೆ ಔಷಧ ತರೋದಕ್ಕೆ ಅಂತಾ ಕೋಟಕ್ಕೆ ಬಂದಿದ್ರು. ಔಷಧ ತೆಗೆದುಕೊಂಡು ತನ್ನ ಬೈಕಿನಲ್ಲಿ ತಾಯಿ ಶಾರದಾ ಅವರನ್ನು ಕೂರಿಸಿಕೊಂಡು ಕೋಟ ಮೂರು ಕೈಯಿಂದ ಸಾಯಿಬ್ರಕಟ್ಟೆಯ ಕಡೆಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಕೋಟ ಠಾಣೆಯ ಪೊಲೀಸ್ ಸಬ್ ಇನ್ಸ್ಪೇಕ್ಟರ್ ಸಂತೋಷ್ ಬಿ.ಪಿ. ಮತ್ತು ಸ್ಟೇಶನ್ ಎಸ್ ಬಿ ರಾಜು ಅವರು ಪ್ರಶಾಂತ್ ಅವರ ಬೈಕ್ ಅಡ್ಡಗಟ್ಟಿ ದಾಖಲೆ ನೀಡುವಂತೆ ಕೇಳಿದ್ದಾರೆ.
ಪ್ರಶಾಂತ್ ತನ್ನ ಬಳಿಯಲ್ಲಿದ್ದ ಝರಾಕ್ಸ್ ಪ್ರತಿಗಳನ್ನು ಪೊಲೀಸರಿಗೆ ತೊರಿಸಿದ್ದಾರೆ. ಆದರೆ ಇಷ್ಟಕ್ಕೆ ಸಮಾಧಾನಗೊಳ್ಳದ ಪೊಲೀಸರು ಪ್ರಶಾಂತ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಪ್ರಶಾಂತ್ ಪ್ರಶ್ನಿಸುತ್ತಿದ್ದಂತೆಯೇ ಪೊಲೀಸರು ಮನಸೋ ಇಚ್ಚೆ ಥಳಿಸಿದ್ದಾರೆ. ಅಲ್ಲದೇ ಈ ವೇಳೆಯಲ್ಲಿ ಮಗನ ರಕ್ಷಣೆಗೆ ಬಂದ ನನ್ನ ಮೇಲೆ ಪೊಲೀಸ್ ರಾಜು ಅವರು ಮನಸೋ ಇಚ್ಚೆ ಥಳಿಸಿದ್ದಾರೆ ಎಂದು ಶಾರದಾ ಆರೋಪಿಸುತ್ತಿದ್ದಾರೆ. ಅಲ್ಲದೇ ಮಗನ ವಿರುದ್ದ ಕರ್ತವ್ಯ ಲೋಪ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ ಹೀಗಾಗಿ ತನಗೆ ನ್ಯಾಯಕೊಡಿ ಎಂದು ಪ್ರಶಾಂತ್ ತಾಯಿ ಮನವಿ ಮಾಡುತ್ತಿದ್ದಾರೆ.
ತಪ್ಪದೇ ಓದಿ..
ಪೊಲೀಸರಿಂದ ಥಳಿತಕ್ಕೆ ಒಳಗಾಗಿರುವ ಪ್ರಶಾಂತ್ ತಾಯಿ ಶಾರದಾ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರ ಅಮಾನವೀಯ ಕಾರ್ಯವನ್ನು ಖಂಡಿಸಿದ್ದಾರೆ. ಅಲ್ಲದೇ ಶಾರದಾ ಅವರು ನ್ಯಾಯಕ್ಕಾಗಿ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದಾರೆ. ವಾಹನ ತಪಾಸಣೆಯ ನೆಪದಲ್ಲಿ ಪೊಲೀಸರು ಕಿರಿಕಿರಿಯನ್ನುಂಟು ಮಾಡುತ್ತಿರೋ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳು ಕೇಳಿಬರುತ್ತಿದೆ.
ಕಣ್ಣೇದುರಲ್ಲೇ ಅಕ್ರಮ ನಡೆಯುತ್ತಿದ್ದರೂ ಕೂಡ ಕಣ್ಣು ಮುಚ್ಚಿ ಕುಳಿತಿರುವ ಕೋಟ ಠಾಣೆಯ ಪೊಲೀಸರು ವಾಹನ ತಪಾಸಣೆಯ ನೆಪದಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸಿರೋದು ಮಾತ್ರವಲ್ಲ, ಸುಳ್ಳು ಕೇಸ್ ದಾಖಲಿಸಿರುವ ಪೊಲೀಸರ ಕ್ರಮದ ವಿರುದ್ದ ಸಾರ್ವಜನಿಕ ವಲಯದಲ್ಲಿಯೂ ಆಕ್ರೋಶ ವ್ಯಕ್ತವಾಗುತ್ತಿದ್ದು, ಹಿರಿಯ ಅಧಿಕಾರಿಗಳು ನೊಂದ ತಾಯಿ, ಮಗನಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸುತ್ತಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಇಂತಹ ಪ್ರಕರಣ ನಡೆಯುತ್ತಿರೋದು ಇದೇ ಮೊದಲೇನಲ್ಲಾ. ಈ ಹಿಂದೆಯೂ ಯುವಕನೋರ್ವನನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿ ನಂತರ ಆತನ ವಿರುದ್ದವೇ ಪ್ರಕರಣ ದಾಖಲಿಸಲಾಗಿದೆ. ಪ್ರಶಾಂತ್ ಪ್ರಕರಣದಲ್ಲಿಯೂ ಹಾಗೆಯೇ ಮಾಡಲಾಗಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ :
Comments are closed.