ಗೆಲುವಿಗಾಗಿ ಸ್ಟಾರ್ಸ್ ಮೊರೆ ಹೋದ ಮುನಿರತ್ನ…! ಆರ್ ಆರ್ ನಗರದಲ್ಲೂ ಮೋಡಿ ಮಾಡ್ತಾರಾ ಜೋಡೆತ್ತುಗಳು !?

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರೋ ಬೈ ಎಲೆಕ್ಷನ್ ಪೈಕಿ ಆರ್.ಆರ್ ನಗರ ಕಣ ಹೈಟೆನ್ಸನ್ ಅಖಾಡವಾಗಿದೆ. ಶತಾಯ ಗತಾಯ ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಮುನಿರತ್ನ, ತಮ್ಮ ಪರ ಪ್ರಚಾರದ ಕಣಕ್ಕಿಳಿಯಲು ಈಗ ಜೋಡೆತ್ತುಗಳ ಮೊರೆ ಹೋಗಿದ್ದಾರೆ.

ಚುನಾವಣೆ ಅಖಾಡದಲ್ಲಿ ಸ್ಯಾಂಡಲ್ ವುಡ್ ನ ಜೋಡೆತ್ತುಗಳು ಎಂದೇ ಕರೆಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಮೋಡಿ ರಾಜ್ಯದ ಜನತೆಯ ಮುಂದಿದೆ. ನಟಿ ಹಾಗೂ ಸಂಸದೆ ಸುಮಲತಾ ಗೆಲುವಿಗೆ ಈ ಜೋಡೆತ್ತುಗಳ ಪರಿಶ್ರಮವೂ ಕಾರಣ ಅನ್ನೋದರಲ್ಲಿ ಎರಡು ಮಾತಿಲ್ಲ.

ಹೀಗಾಗಿ ಇದೇ ಗೆಲುವಿಗಾಗಿ ಪರಿತಪಿಸುತ್ತಿರುವ ನಿರ್ಮಾಪಕ ಹಾಗೂ ಮಾಜಿ ಶಾಸಕ ಮುನಿರತ್ನ ಜೋಡಿ ಎತ್ತುಗಳ ಮೊರೆ ಹೋಗಿದ್ದು ತಮ್ಮ ಪರ ಪ್ರಚಾರಕ್ಕೆ ಆಗಮಿಸುವಂತೆ ಯಶ್ ಹಾಗೂ ದರ್ಶನ್ ರನ್ನು ಕೋರಿದ್ದಾರೆ ಎನ್ನಲಾಗ್ತಿದೆ.

ಆರ್.ಆರ್.ನಗರ ಮುನಿರತ್ನ ಅವರ ಪ್ರಾಬಲ್ಯ ಇರುವ ಕ್ಷೇತ್ರವಾದರೂ ಬದಲಾದ ರಾಜಕೀಯ ಪರಿಸ್ಥಿತಿ ಹಾಗೂ ಲೆಕ್ಕಾಚಾರದಿಂದ ಮುನಿರತ್ನ ಕೊಂಚ ವಿಚಲಿತರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ದಿ.ಡಿ.ಕೆ.ರವಿ ಪತ್ನಿ ಕಣಕ್ಕಿಳಿದಿರೋದು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವತಃ ಆಕೆಯ ಬೆಂಬಲಕ್ಕೆ ನಿಂತಿರೋದು ಕೂಡ ಮುನಿರತ್ನ ಆತಂಕಕ್ಕೆ ಕಾರಣವಾಗಿದೆ.

ಹೀಗಾಗಿ ಗೆಲುವಿಗಾಗಿ ಗಂಭೀರ ಪ್ರಯತ್ನ ಆರಂಭಿಸಿರುವ ಮುನಿರತ್ನ ದರ್ಶನ್ ಹಾಗೂ ಯಶ್ ಮೊರೆ ಹೋಗಿದ್ದಾರೆ. ಮಂಡ್ಯ ಏಲೆಕ್ಷನ್ ನಲ್ಲಿ ನಿಂತಂತೆ ಇಲ್ಲಿ ತಮ್ಮ ಪರ ನಿಂತು ಪ್ರಚಾರ ನಡೆಸುವಂತೆ ಮುನಿರತ್ನ ಕೋರಿದ್ದಾರೆ ಎನ್ನಲಾಗಿದೆ. ಆದರೆ ಇಬ್ಬರೂ ಸ್ಟಾರ್ ನಟರು ಈ ಬಗ್ಗೆ ಇನ್ನು ಯಾವುದೇ ಉತ್ತರ ನೀಡಿಲ್ಲವಂತೆ.

ಪ್ರಸ್ತುತ ದರ್ಶನ್ ರಾಬರ್ಟ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿರೋ ದರ್ಶನ್ ಹಾಗೂ ತಮ್ಮ ಬಹುನೀರಿಕ್ಷಿತ ಚಿತ್ರ ಕೆಜಿಎಫ್ -೨ ದಲ್ಲಿ ಬ್ಯುಸಿಯಾಗಿರೋ ಯಶ್ ಆರ್ ಆರ್ ನಗರದ ಚುನಾವಣೆ ಪ್ರಚಾರಕ್ಕೆ ಬರೋದು ಅನುಮಾನ ಎನ್ನಲಾಗ್ತಿದೆ. ಆದರೆ ಮುನಿರತ್ನ ಕನ್ನಡ ಚಿತ್ರರಂಗದ ಪ್ರಬಲ ಚಿತ್ರ ನಿರ್ಮಾಪಕರು. ದರ್ಶನ್ ಸೇರಿದಂತೆ ಹಲವು ಸ್ಟಾರ್ ನಟರಿಗಾಗಿ ಮುನಿರತ್ನ ಬಂಡವಾಳ ಹೂಡಿದ್ದಾರೆ. ಹೀಗಾಗಿ ಏಕಾಏಕಿ ಮುನಿರತ್ನ ಆಹ್ವಾನವನ್ನು ತಿರಸ್ಕರಿಸೋದು ಸಾಧ್ಯವಿಲ್ಲ.

ಹೀಗಾಗಿ ಜೋಡೆತ್ತುಗಳ ನಡೆ ಕುತೂಹಲ ಮೂಡಿಸಿದೆ. ಒಂದೊಮ್ಮೆ ಜೋಡೆತ್ತುಗಳು ಮುನಿರತ್ನ ಪರ ಕಣಕ್ಕಿಳಿದರೇ ಅದು ಕಾಂಗ್ರೆಸ್ ಗೆ ತಕ್ಕಮಟ್ಟಿಗೆ ಹಿನ್ನಡೆ ತರಲಿದೆ ಅನ್ನೋದು ಸುಳ್ಳಲ್ಲ. ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಜೋಡೆತ್ತುಗಳು ರಾಜಕೀಯ ಮುನ್ನಲೆಯಲ್ಲಿ ಸ್ಥಾನಪಡೆದುಕೊಂಡಿವೆ.

Comments are closed.