ಕನ್ನಡದ ಖ್ಯಾತ ನಟನ ಮಗನಾಗಿದ್ದರೂ ಲೈಟ್ ಬಾಯ್ ಆಗಿ ಚಂದನವನಕ್ಕೆ ಕಾಲಿಟ್ಟ ನಟ ದರ್ಶನ್ ತಂದೆಯ ಲೂನಾದಿಂದ ತಮ್ಮ ಲಾಂಬೋರ್ಗಿನಿಯವರೆಗೆ ಬೆಳೆಯಲು ಬೆವರು ಸುರಿಸಿ ದುಡಿದಿದ್ದಾರೆ. 1997 ರಲ್ಲಿ ಮಹಾಭಾರತ ಸಿನಿಮಾದಲ್ಲಿ ಖಳನಾಯಕನಾಗಿ ಜರ್ನಿ ಆರಂಭಿಸಿದ ದರ್ಶನ್ ಸ್ಯಾಂಡಲ್ ವುಡ್ ಸಿನಿ ಜರ್ನಿಗೆ ಈಗ 24 ಸಂಭ್ರಮ.

ವಿನೋಧ ರಾಜ್ ನಟನೆಯ ಮಹಾಭಾರತ ಸಿನಿಮಾ 1997 ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ವಿಲನ್ ರೋಲ್ ನಲ್ಲಿ ದರ್ಶನ್ ಮಿಂಚಿದ್ದರು. ಬಳಿಕ ದೇವರಮಗ ಸಿನಿಮಾದಲ್ಲೂ ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ದರ್ಶನ್, ಬಳಿಕವೂ ಹಲವು ಕನ್ನಡ ಸಿನಿಮಾದಲ್ಲಿ ವಿಲನ್ ರೋಲ್ ನಲ್ಲಿ ನಟಿಸಿದ್ದಾರೆ.

2002 ರಲ್ಲಿ ತೆರೆ ಕಂಡ ಮೆಜೆಸ್ಟಿಕ್ ಸಿನಿಮಾದಲ್ಲಿ ನಾಯಕನಾಗಿ ತೆರೆಗೆ ಬಂದ ದರ್ಶನ್ ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ. ಬಳಿಕ ಹಲವಾರು ಚಿತ್ರದಲ್ಲಿ ನಟಿಸಿದ ದರ್ಶನ್ ಗೆ ಪ್ರೇಮ್ ನಿರ್ದೇಶನದ ಕರಿಯ ಸಿನಿಮಾ ದೊಡ್ಡ ಸಕ್ಸಸ್ ತಂದುಕೊಟ್ಟಿತು.

ಕರಿಯಾ ಬಳಿಕ ಧರ್ಮ,ಅಣ್ಣಾವ್ರು,ದರ್ಶನ್,ಭಗವಾನ್ ಹೀಗೆ ಸಾಲು ಸಾಲು ಚಿತ್ರಗಳು ಸೋತವು. ಆದರೂ ಧೃತಿ ಗೆಡದೇ ಮುನ್ನಡೆದ ದರ್ಶನ್, ಕಲಾಸಿಪಾಳ್ಯ ಸಿನಿಮಾದಿಂದ ಮತ್ತೆ ಎದ್ದು ನಿಂತರು. ಅಯ್ಯ,ಶಾಸ್ತ್ರಿ,ಮಂಡ್ಯ,ಸುಂಟರಗಾಳಿ ಹೀಗೆ ಮತ್ತೊಮ್ಮೆ ಮಾಸ್ ಚಿತ್ರಗಳಲ್ಲಿ ನಟಿಸಿದ ದರ್ಶನ್ ಚಾಲೆಂಜಿಂಗ್ ಸ್ಟಾರ್ ಪಟ್ಟದೊಂದಿಗೆ ಗಲ್ಲಾಪೆಟ್ಟಿಯ ಸುಲ್ತಾನ್ ಎಂದು ಕರೆಯಿಸಿಕೊಂಡರು.

ಸಾರಥಿ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಪಡೆಯಿತು. ಈ ವೇಳೆ ವೈಯಕ್ತಿಕ ಜೀವನಲ್ಲಾದ ಸಮಸ್ಯೆಗಳಿಂದ ದರ್ಶನ್ ಜೈಲು ಸೇರಿ ಹೊರಬಂದರು. ಬಳಿಕ ತೆರೆಗೆ ಬಂದ ಸಂಗೊಳ್ಳಿ ರಾಯಣ್ಣ ಸಿನಿಮಾ ದರ್ಶನ್ ಗೆ ಪ್ರಶಸ್ತಿಯ ಗರಿ ಮೂಡಿಸಿತು.

ಕಳೆದ ಕೆಲ ವರ್ಷಗಳಿಂದ ಸಖತ್ ಹಿಟ್ ಸಿನಿಮಾ ನೀಡುತ್ತಿರುವ ದರ್ಶನ್ ಕುರುಕ್ಷೇತ್ರ, ಯಜಮಾನ, ರಾಬರ್ಟ್ ದಂತಹ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಸದ್ಯ ರಾಜಾವೀರಮದಕರಿ ನಾಯಕ ಸಿನಿಮಾದಲ್ಲಿ ನಟಿಸುತ್ತಿರುವ ದರ್ಶನ್, ಶೈಲಜಾನಾಗ್ ನಿರ್ಮಾಣದ ಮತ್ತೊಂದು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.

ಖ್ಯಾತ ನಟನ ಮಗನಾಗಿಯೂ ಮಣ್ಣಿನಿಂದ ಸ್ಟಾರ್ ಪಟ್ಟಕ್ಕೇರಿದ ದರ್ಶನ್ ಮುಂದಿನ ವರ್ಷ ಸ್ಯಾಂಡಲ್ ವುಡ್ ನಲ್ಲಿ ಬೆಳ್ಳಿಹಬ್ಬದ ಹೊಸ್ತಿಲು ತಲುಪಿಲಿದ್ದು, ಮತ್ತಷ್ಟು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು ಅನ್ನೋದು ನಮ್ಮ ಹಾರೈಕೆ.