ಗೆಜ್ಜೆಗಿರಿ ವಿವಾದ: ಸಮಿತಿಗೆ ತಡೆ ನೀಡದ ನ್ಯಾಯಾಲಯ, ಸಮಿತಿಯ ಆಡಳಿತದಲ್ಲೇ ನಡೆಯುತ್ತೆ ಪ್ರಥಮ ಜಾತ್ರೋತ್ಸವ

ಪುತ್ತೂರು : ನಾಡಿನ ಗಮನ ಸೆಳೆದ ಗೆಜ್ಜೆಗಿರಿ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಮಿತಿಗೆ ತಡೆ ನೀಡಿಲ್ಲ. ಹೀಗಾಗಿ ಸಮಿತಿಯ ಆಡಳಿತದಲ್ಲಿಯೇ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ ಅದ್ದೂರಿಯಾಗಿಯೇ ನಡೆಯಲಿದೆ.

ತುಳುನಾಡ ವೀರ ಪುರುಷರಾಗಿರು ಕೋಟಿ ಚೆನ್ನಯ್ಯ ದೇಯಿ ಬೈದಿತಿಯರ ಮೂಲ ಕ್ಷೇತ್ರವಾಗಿರುವ ಗೆಜ್ಜೆಗಿರಿ ಸದ್ಯ ವಿವಾದ ಕೇಂದ್ರ. ಕರಾವಳಿಯ ಪುಣ್ಯ ಕ್ಷೇತ್ರದಲ್ಲಿ ಆಸ್ತಿಗಾಗಿ ಹುಟ್ಟಿಕೊಂಡ ವಿವಾದ ಇದೀಗ ನ್ಯಾಯಾಲಯದ ಅಂಗಳದಲ್ಲಿದೆ. ಗೆಜ್ಜೆಗಿರಿಯ ಜಾಗದ ಮಾಲೀಕರಾಗಿರುವ ಶ್ರೀಧರ ಪೂಜಾರಿ ಅವರು ನ್ಯಾಯಾಲಯದಲ್ಲಿ ಹೂಡಿದ ದಾವೆಯ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯ ಆಡಳಿತ ಸಮಿತಿಯ ಆಡಳಿತಕ್ಕೆ ತಡೆ ನೀಡಿಲ್ಲ. ಅಲ್ಲದೇ ವಿಚಾರಣೆಯನ್ನು ಮಾರ್ಚ್ 1ಕ್ಕೆ ಮುಂದೂಡಿಕೆ ಮಾಡಿದೆ.

ಜಾಗದ ಮಾಲೀಕರಾಗಿರುವ ಶ್ರೀಧರ್ ಪೂಜಾರಿಯವರು ನ್ಯಾಯಾಲಯದಲ್ಲಿ ದಾವೆ ದೂಡಿ ಕ್ಷೇತ್ರದ ಆಡಳಿತ ಸಮಿತಿಯನ್ನು ಕ್ಷೇತ್ರದ ಆಡಳಿತ ಹಾಗೂ ಜಾತ್ರೋತ್ಸವದ ಆಡಳಿತಕ್ಕೆ ನಿರ್ಬಂಧಿಸ ಬೇಕೆಂದು ಕೋರಿದ್ದರು. ಆರಂಭದಲ್ಲಿ ತಡೆ ನೀಡದ ನ್ಯಾಯಾಲಯ ಕ್ಷೇತ್ರ ಆಡಳಿತ ಸಮಿತಿಯ ವಾದವನ್ನು ಆಲಿಸಿದೆ. ನ್ಯಾಯಾಲದಲ್ಲಿ ಇದುವರೆಗೆ ವಾದ-ವಿವಾದ ಕೊನೆಗೊಂಡಿಲ್ಲ. ಇದರಿಂದಾಗಿ ಕ್ಷೇತ್ರದ ಸಮಿತಿಯನ್ನು ಜಾತ್ರೋತ್ಸವ ಆಡಳಿತದಿಂದ ನಿರ್ಬಂಧಿಸುವ ಶ್ರೀಧರ ಪೂಜಾರಿಯವರ ಪ್ರಯತ್ನ ಸಫಲವಾಗಿಲ್ಲ.

ಈ ಮೂಲಕ ಕ್ಷೇತ್ರ ಆಡಳಿತ ಸಮಿತಿ ಪ್ರಪ್ರಥಮ ಬಾರಿಗೆ ತನ್ನ ಸಂಪೂರ್ಣ ಆಡಳಿತದಿಂದ ಜಾತ್ರೋತ್ಸವ ಆರಂಭ ಮಾಡಿದೆ. ಕ್ಷೇತ್ರದ ಸಮಿತಿಯ ಕಾನೂನು ನಡೆ ಕ್ಷೇತ್ರದ ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.

ಈ ಮೊದಲು ಕ್ಷೇತ್ರದ ಆಡಳಿತ ಸಮಿತಿಗೆ ಆಡಳಿತದಲ್ಲಿ ಹಕ್ಕಿಲ್ಲ ಎಂದು ಭಾವಿಸಿದ್ದರು ಎನ್ನುತ್ತಾರೆ ಓರ್ವ ಭಕ್ತರು. ಎಲ್ಲರ ಲೆಕ್ಕಾಚಾರಗಳು ತಲೆ ಕೆಳೆಗಾಗಿದ್ದು ಆಡಳಿತ ಸಮಿತಿಯ ಕಾನೂನು ನಡೆ ಜಾತ್ರೋತ್ಸವದ ಆಡಳಿತವನ್ನು ತನ್ನ ಸುಪರ್ದಿಗೆ ತಂದಿದ್ದು, ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

Comments are closed.