ಸುರತ್ಕಲ್ : ಶಾಲೆಯ ಬೆದರಿಕೆಗೆ ವಿದ್ಯಾರ್ಥಿ ಆತ್ಮಹತ್ಯೆ, ಶಿಕ್ಷಕರ ವಿರುದ್ದದ ಕ್ರಮಕ್ಕೆ ಪೋಷಕರ ಆಗ್ರಹ

ಮಂಗಳೂರು : ಮಾರ್ಕ್ಸ್ ಕಾರ್ಡ್ ಗೆ ಪೋಷಕರ ಸಹಿ ಬದಲು ವಿದ್ಯಾರ್ಥಿಯೇ ಸಹಿ ಹಾಕಿದ್ದಾನೆ ಎನ್ನುವ ಕಾರಣಕ್ಕೆ ಮುಖ್ಯ ಶಿಕ್ಷಕರು ಬೆದರಿಕೆಯೊಡ್ಡಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಕಳೆದೆರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿಕ್ಷಕರ ವಿರುದ್ದ ಕ್ರಮಕೈಗೊಳ್ಳುವಂತೆ ಪೋಷಕರು ಆಗ್ರಹಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಕಾಟಿಪಳ್ಳದ ಎರಡನೇ ಬ್ಲಾಕ್ ನಿವಾಸಿ ಗೋಪಾಲ ಶೆಟ್ಟಿ ಮತ್ತು ಬೇಬಿ ಶೆಟ್ಟಿ ಅವರ ಪುತ್ರ ದರ್ಶನ್ ಕಾಟಿಪಳ್ಳದ ಮೂರನೇ ಬ್ಲಾಕ್ ನಲ್ಲಿರುವ ಇನ್ ಫೆಂಟ್ ಮೇರಿ ಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕೊರೊನಾ ಲಾಕ್ ಡೌನ್ ಬೆನ್ನಲ್ಲೇ ಶಾಲಾರಂಭವಾಗಿದ್ದು, ಶಿಕ್ಷಕರು ಪರೀಕ್ಷೆ ನಡೆಸಿದ್ದಾರೆ. ಆದರೆ ಪರೀಕ್ಷೆಯಲ್ಲಿ ದರ್ಶನ್ ಕೆಲ ವಿಷಯಗಳಲ್ಲಿ ಅನುತೀರ್ಣವಾಗಿದ್ದ.

ಮಾರ್ಕ್ಸ್ ಕಾರ್ಡ್ ಮನೆಯವರಿಗೆ ತೋರಿಸಿದ್ರೆ ಪೋಷಕರು ಬೈಯುತ್ತಾರೆ ಅನ್ನೋ ಕಾರಣಕ್ಕೆ ಪೋಷಕರ ಬದಲು ತಾನೇ ಸಹಿ ಹಾಕಿ ವಾಪಾಸ್ ನೀಡಿದ್ದಾನೆ. ಇಷ್ಟಕ್ಕೆ ಕೆಂಡಾಮಂಡಲವಾದ ಶಾಲಾ ಮುಖ್ಯಶಿಕ್ಷಕರು ನಾಳೆ ಬರುವಾಗ ತಂದೆಯನ್ನು ಶಾಲೆಗೆ ಕರೆದುಕೊಂಡು ಬರುವಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದರಿಂದ ಹೆದರಿದ ವಿದ್ಯಾರ್ಥಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದೀಗ ದರ್ಶನ್ ಸಾವಿನ ಬೆನ್ನಲ್ಲೇ ಪೋಷಕರು ಶಾಲೆ ಹಾಗೂ ಪೋಷಕರ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದಾರೆ. ತನ್ನ ಮಗನ ಸಾವಿಗೆ ಕಾರಣವಾಗಿರುವ ಶಿಕ್ಷಕರ ವಿರುದ್ದ ಕ್ರಮಗೊಂಡು, ತನ್ನ ಮಗನ ಸಾವಿಗೆ ನ್ಯಾಯ ಒದಗಿಸುವಂತೆ ಸುರತ್ಕಲ್ ಪೊಲೀಸ್ ಠಾಣೆಗೆ ಮೃತ ವಿದ್ಯಾರ್ಥಿ ದರ್ಶನ್ ತಂದೆ ಗೋಪಾಲ ಶೆಟ್ಟಿ ದೂರು ನೀಡಿದ್ದಾರೆ.

ಫೀಸ್ ಕಟ್ಟದ ಮಾತ್ರಕ್ಕೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರ ಇನ್ನಿಲ್ಲದಂತೆ ಕಿರುಕುಳ ನೀಡುತ್ತಿರುವ ಖಾಸಗಿ ಶಾಲೆಗಳು ಇದೀಗ ವಿದ್ಯಾರ್ಥಿಗಳ ಸಾವಿಗೆ ಕಾರಣವಾಗುತ್ತಿದೆ. ವಿದ್ಯಾರ್ಥಿಗೆ ಕಡಿಮೆ ಅಂಕ ಬಂದಿರೋ ಕುರಿತು ನೇರವಾಗಿ ಪೋಷಕರ ಗಮನಕ್ಕೆ ತಂದಿದ್ರೆ ಇಂತಹ ಅನಾಹುತ ನಡೆಯೋದಕ್ಕೆ ಸಾಧ್ಯವೇ ಇರಲಿಲ್ಲ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢರನ್ನಾಗಿಸಬೇಕಾದ ಶಾಲೆ ಹಾಗೂ ಶಿಕ್ಷಕರೇ ಈ ರೀತಿಯಾಗಿ ಬೆದರಿಕೆಯೊಡ್ಡುವುದು ಎಷ್ಟು ಸರಿ ಅನ್ನೋದು ಪ್ರಜ್ಞಾವಂತರ ಮಾತು. ಅನಗತ್ಯವಾಗಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ಶಾಲೆಯ ವಿರುದ್ದ ಕ್ರಮಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸುತ್ತಿದ್ದಾರೆ.

Comments are closed.