ಸರ್ಪ ದೋಷ, ಮಾಟ, ಗುರುಗಳ ಪೂಜೆ : ಮಹಿಳೆಯಿಂದ ಬರೋಬ್ಬರಿ 30 ಲಕ್ಷ ವಂಚನೆ

ಕಾರ್ಕಳ : ನಿನ್ನ ಮನೆಯಲ್ಲಿ ನಾಗದೋಷವಿದೆ, ಹುಡುಗಿ ದೋಷವಿದೆ, ಯಾರೋ ಮಾಟ ಮಾಡಿಸಿದ್ದಾರೆ. ಅದನ್ನು ಪರಿಹಾರ ಮಾಡಲು ನೀನು ಗುರುಗಳ ಪೂಜೆಯನ್ನು ಮಾಡಿಸು ಎಂದು ನಂಬಿಸಿದ ಮಹಿಳೆ ವ್ಯಕ್ತಿಯೋರ್ವರಿಂದ ಬರೋಬ್ಬರಿ 30 ಲಕ್ಷ ರೂಪಾಯಿ ಪಡೆದು ವಂಚಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಸುನಿತಾ ಮೆಂಡೋನ್ಸಾ ಎಂಬವರೇ ವಂಚಿಸಿದ ಆರೋಪ ಹೊತ್ತಿರುವ ಮಹಿಳೆ. ಲೋಯ್ ಮಚಾದೋ ಅವರನ್ನು ತನ್ನ ಮನೆಗೆ ಊಟಕ್ಕೆ ಕರೆಯಿಸಿಕೊಂಡಿದ್ದ ಸುನಿತಾ ಮೆಂಡೋನ್ಸಾ ತನ್ನ ಅನಾರೋಗ್ಯ ಗುರುಗಳ ಪೂಜೆಯಿಂದ ಗುಣವಾಗಿದೆ. ಅದಕ್ಕೆ ಸುಮಾರು 25 ಸಾವಿರ ರೂಪಾಯಿ ಖರ್ಚಾಗಿತ್ತು. ನಿನಗೂ ಮನೆಯಲ್ಲಿ ದೋಷವಿದೆ. ಅದನ್ನು ಪರಿಹಾರ ಮಾಡಿಕೋ ಎಂದು ಹೇಳಿದ್ದಾರೆ. 2015ರಲ್ಲಿ ದೂರುದಾರರಿಗೆ ಮದುವೆಯಾಗಿದ್ದು, ಮರು ದಿನ ಆರೋಪಿ ಸುನಿತಾ ಕರೆ ಮಾಡಿ ನಿನ್ನ ತಮ್ಮನ ಪತ್ನಿ ನಿಗೆ ಮಾಟ ಮಾಡಿಸಿ, ಮದ್ದು ಹಾಕಿದ್ದಾಳೆ. ನಿಮ್ಮಿಬ್ಬರ ಜೀವ ಅಪಾಯದಲ್ಲಿದೆ. ನಿನ್ನ ಮನೆಯವರು ಸಾಯುತ್ತಾರೆ. ನಿನ್ನ ಕುಟುಂಬ ಸರ್ವನಾಶವಾಗುತ್ತದೆ. ಪ್ರಾರ್ಥನೆ ಮಾಡಲು ಗುರುಗಳಿಗೆ ಹಣಕೊಡಬೇಕೆಂದು ಸುನಿತಾ ಹಣವನ್ನು ಪಡೆದಿದ್ದಳು.

ನಂತರದ ಲೋಯ್ ಮಚಾದೋ ಕೆಲಸ ಕಳೆದುಕೊಂಡಿದ್ದು, ಇನ್ನು ಹಣ ನೀಡಲು ಸಾಧ್ಯವಿಲ್ಲ ಎಂದಾಗ ನಿನಗೆ ನಿನ್ನ ಹೆಂಡತಿಯಿಂದಲೇ ಸಮಸ್ಯೆ ಉಲ್ಬಣಗೊಂಡಿದೆ. ಅವಳನ್ನು ಕೊಂದು ಬಿಡು ಎಂದು ಹೇಳಿದ್ದಾಳೆ. ಮಹಿಳೆಯ ಮಾತು ನಂಬಿದ್ದ ವ್ಯಕ್ತಿ, ತನ್ನ ಪತ್ನಿಯ ಮಾಂಗಲ್ಯ ಸರ ಸೇರಿ ಎಲ್ಲವನ್ನೂ ಮಾರಿ ಹತ್ತು ಲಕ್ಷ, 80 ಸಾವಿರ, 1 ಲಕ್ಷ 5 ಸಾವಿರ, 50 ಸಾವಿರ, 1 ಲಕ್ಷ ಹೀಗೆ ಹೆಂಡತಿ ತಂದೆಯಿಂದ, ಸಹೋದರನಿಂದ, ಸ್ನೇಹಿತರಿಂದ, ಹೀಗೆ ಪಡೆದು ಒಟ್ಟು 30 ಲಕ್ಷ ರೂ. ಹಣವನ್ನು ಆಪಾದಿತೆ ಮಹಿಳೆ ಸುನೀತಾ ಮೆಂಡೋನ್ಸಾ ಎಂಬವರಿಗೆ ನೀಡಿದ್ದಾರೆ. ಆಕೆಯ ಹಣ ಪಡೆದು ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸುನೀತಾ ಮೆಂಡೋನ್ಸ ವಿರುದ್ದ ಐಪಿಸಿ ಸೆಕ್ಷನ್ 406, 420 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.