ಶಾಸಕರ ಐಪಿಎಲ್​ ಟಿಕೆಟ್​ ಗೊಂದಲಕ್ಕೆ ಕೊನೆಗೂ ತೆರೆ​ – ಡಿಕೆಶಿ ನೇತೃತ್ವದಲ್ಲಿ ಕೆಎಸ್​ಸಿಎ ಪದಾಧಿಕಾರಿಗಳೊಂದಿಗೆ ಸಭೆ​ – 3 IPL, 2 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಉಚಿತ ಪ್ರವೇಶ

ಈ ಮೊದಲು ಕೇವಲ 2 ಟಿಕೆಟ್​ಗಳನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಸೋಮವಾರ ನಡೆದ ಸಭೆಯಲ್ಲಿ 3 ಟಿಕೆಟ್​ಗಳನ್ನು ನೀಡಲು ಸಮ್ಮತಿ ನೀಡಲಾಗಿದೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ರಾಜಕೀಯ ತಿರುವು ಪಡೆದುಕೊಂಡಿದ್ದ ಐಪಿಎಲ್​ ಟಿಕೆಟ್​ (IPL Tickets 2026) ಹಣಾಹಣಿಗೆ ಕೊನೆಗೂ ತೆರೆ ಬಿದ್ದಿದೆ. ಈ ಸಂಬಂಧ ಕೆಎಸ್​ಸಿಎ ಹಾಗೂ ಆರ್​ಸಿಬಿ ಮ್ಯಾನೇಜ್​ಮೆಂಟ್​ಗಳ ಜೊತೆ ಸಭೆ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್​, ಶಾಸಕರಿಗೆ ಉಚಿತ ಟಿಕೆಟ್​ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಜೆಟ್​ ಅಧಿವೇಶನದ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್​ ಐಪಿಎಲ್​ ಟಿಕೆಟ್​ ವಿಚಾರವಾಗಿ ಧ್ವನಿ ಎತ್ತಿದ್ದರು. ಇದಕ್ಕೆ ವಿಪಕ್ಷ ನಾಯಕ ಆರ್​.ಅಶೋಕ್​ ಕೂಡ ಸಾಥ್​ ನೀಡಿದ್ದರು. ಇದು ಭಾರೀ ದೊಡ್ಡ ವಿವಾದವನ್ನೇ ಸೃಷ್ಠಿಸಿತ್ತು. ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಐಪಿಎಲ್​ ಟಿಕೆಟ್​ ಬೇಕೆಂದು ಚರ್ಚೆ ಮಾಡುತ್ತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕಳೆದ ಕೆಲವು ದಿನಗಳಿಂದ ಪರ ವಿರೋಧದ ಚರ್ಚೆ ನಡೆಯುತ್ತಲೇ ಇತ್ತು.

ಈ ಎಲ್ಲದರ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್​, ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ , ಡಿಎನ್​ಎ ಹಾಗೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್​ಮೆಂಟ್​ ಜೊತೆ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮೀಟಿಂಗ್​ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಸಭೆಯಲ್ಲಿ ಓರ್ವ ಶಾಸಕನಿಗೆ ಒಂದು ಮ್ಯಾಚ್​ನಲ್ಲಿ 3 ಟಿಕೆಟ್​ಗಳನ್ನು ನೀಡಲು ಸಮ್ಮತಿ ನೀಡಲಾಗಿದೆ.

ಈ ಮೊದಲು ಕೇವಲ 2 ಟಿಕೆಟ್​ಗಳನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಸೋಮವಾರ ನಡೆದ ಸಭೆಯಲ್ಲಿ 3 ಟಿಕೆಟ್​ಗಳನ್ನು ನೀಡಲು ಸಮ್ಮತಿ ನೀಡಲಾಗಿದೆ. ಆದರೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಒಂದು ಪಂದ್ಯದಲ್ಲಿ ಓರ್ವ ಶಾಸಕನಿಗೆ 2 ಟಿಕೆಟ್​ಗಳು ಉಚಿತವಾಗಿ ಸಿಗಲಿದೆ. ಮಿಕ್ಕ ಟಿಕೆಟ್​ಗಳನ್ನು ಶಾಸಕರು ಕಾಸು ಕೊಟ್ಟು ಖರೀದಿಸಬೇಕಿದೆ. ಒಂದು ಪಂದ್ಯದಲ್ಲಿ ಕೇವಲ ಒಬ್ಬ ಶಾಸಕನಿಗೆ ಮಾತ್ರ ಈ ಉಚಿತ ಟಿಕೆಟ್​ ಭಾಗ್ಯ ದೊರೆಯಲಿದೆ.

ಇದನ್ನೂ ಓದಿ: ವಿರಾಟ್ ಕಿಂಗ್.. ಪಡಿಕ್ಕಲ್ ಸಿಂಹ ! IPL ಉದ್ಘಾಟನಾ ಪಂದ್ಯದಲ್ಲೇ ದಾಖಲೆಗಳ ಪುಡಿಪುಡಿ ಮಾಡಿದ RCB

ಇನ್ನು ಕೆಎಸ್​ಸಿಎ ಅಧ್ಯಕ್ಷ ವೆಂಕಟೇಶ್​ ಪ್ರಸಾದ್​ ಜೊತೆ ಸಭೆಯಲ್ಲಿ ಹಾಜರಾಗಿದ್ದ ಆರ್​ಸಿಬಿ ಸಿಇಓ, ಡಿಸಿಎಂ ಡಿ.ಕೆ ಶಿವಕುಮಾರ್​ಗೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇನ್ನು ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​ ,ಬೆಂಗಳೂರಿನಲ್ಲಿ ಪ್ರತಿ ಐಪಿಎಲ್​ ಮ್ಯಾಚ್​ನಲ್ಲಿ ಒಬ್ಬ ಶಾಸಕನಿಗೆ ಉಚಿತ 3 ಟಿಕೆಟ್​ಗಳು ದೊರೆಯಲಿವೆ. ಅಂತಾರಾಷ್ಟ್ರೀಯ ಪಂದ್ಯಗಳಿರುವಾಗ 2 ಟಿಕೆಟ್​ಗಳು ದೊರೆಯಲಿವೆ. ಇದಕ್ಕಿಂತ ಹೆಚ್ಚು ಟಿಕೆಟ್​ ಅವಶ್ಯವಿದ್ದರೆ ಅವರು ಹಣ ಕೊಟ್ಟು ಖರೀದಿಸಬೇಕು ಎಂದು ಮಾಹಿತಿ ನೀಡಿದರು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories