ಮಾಜಿ ಸಚಿವ ಕೆ.ಜೆ ಜಾರ್ಜ್‌ಗೆ ಎದುರಾಯ್ತು ಕಾನೂನಿನ ಸಂಕಷ್ಟ..!

0

ಬೆಂಗಳೂರು : ವಿದೇಶದಲ್ಲಿ ಕಾನೂನುಬಾಹಿರವಾಗಿ ಹಣ ಹೂಡಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಮಾಜಿ ಸಚಿವ ಕೆ.ಜೆ .ಜಾರ್ಜ್ ಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಡಿ. ಕೆ. ಶಿವಕುಮಾರ್ ಬಳಿಕ ಮತ್ತೊಬ್ಬ ಕಾಂಗ್ರೆಸ್ ಪ್ರಭಾವಿ ನಾಯಕರಿಗೆ ಇಡಿ ಸಂಕಷ್ಟ ಎದುರಾಗಿದೆ.
ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣ ರೆಡ್ಡಿ ಅವರು ನೀಡಿದ್ದ ದೂರಿನ ಅನ್ವಯ ಜಾರ್ಜ್ ಹಾಗೂ ಅವರ ಕುಟುಂಬದ ಸದಸ್ಯರು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ( ಇ.ಡಿ) ಸಮನ್ಸ್ ಜಾರಿ ಮಾಡಿದೆ. ಮಂಗಳವಾರ ಜಾರಿ ನಿರ್ದೇಶನಾಲಯ ಕೆ. ಜೆ. ಜಾರ್ಜ್‌ ಮತ್ತು ಕುಟುಂಬ ಸದಸ್ಯರಿಗೆ ಸಮನ್ಸ್ ಜಾರಿಗೊಳಿಸಿದೆ. ಜನವರಿ 16ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಇಡಿ ಕಚೇರಿಯಿಂದ ಡಿಸೆಂಬರ್ 23 ರಂದು ಕೆ.ಜೆ. ಜಾರ್ಜ್, ಪತ್ನಿ ಸುಜಾ, ಪುತ್ರಿ ರೇನಿತಾ ಹಾಗೂ ಪುತ್ರ ರಾಣಾಗೆ ನೋಟಿಸ್ ಬಂದಿದ್ದು ಜನವರಿ 16 ರಿಂದ ಜಾರ್ಜ್ ಮತ್ತು ಕುಟುಂಬ ವಿಚಾರಣೆ ಎದುರಿಸಬೇಕಿದೆ. ಕೆ.ಜೆ. ಜಾರ್ಜ್ ತಮ್ಮ ಮಕ್ಕಳ ಹೆಸರಿನಲ್ಲಿ ವಿದೇಶಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ, ಆದರೆ ಈ ಸಂಬಂಧ ಚುನಾವಣಾ ಆಫಿಡವಿಟ್ ನಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ಜಾರ್ಜ್ ಕೇರಳದಿಂದ‌ ಬರಿಗೈನಲ್ಲಿ ಬಂದು ಸಾವಿರಾರು ಕೋಟಿ ವ್ಯವಹಾರ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಜಾರ್ಜ್ ಆಸ್ತಿ ಇದೆ. ಮಗಳು, ಅಳಿಯನ ಹೆಸರಲ್ಲಿ ಅಮೆರಿಕದ ನ್ಯೂಯಾರ್ಕ್, ಆಸ್ಟ್ರೇಲಿಯಾದಲ್ಲಿ ಆಸ್ತಿ ಸಂಪಾದಿಸಿದ್ದಾರೆ. ಅಕ್ರಮವಾಗಿ ಹಣ ಸಾಗಾಟನೆ, ಮತ್ತು ಅಕ್ರಮ ಹಣ ಸಂಪಾದನೆ ಮಾಡಿದ್ದಾರೆಂದು ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದರು.
ರವಿಕೃಷ್ಣಾ ರೆಡ್ಡಿ ಸಲ್ಲಿಸಿರುವ ದೂರಿನಲ್ಲಿ, ಮಾಜಿ ಸಚಿವ ಕೆಜೆ ಜಾರ್ಜ್ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ಇದರಲ್ಲಿ ಅನೇಕ ಅಕ್ರಮಗಳು ನಡೆದಿದೆ. ಅಮೇರಿಕಾ, ಆಸ್ಟ್ರೇಲಿಯಾದಲ್ಲಿ ಅಪಾರ ಆಸ್ತಿ ಸಂಪಾದನೆ ಮಾಡಿದ್ದಾರೆ. ಹೇಗೆ ಇಷ್ಟೆಲ್ಲಾ ಸಂಪಾದನೆ ಮಾಡಲು ಸಾಧ್ಯವಾಯಿತು. ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಇನ್ನೂ ವಿದೇಶದಲ್ಲಿ ಮಗಳು, ಅಳಿಯನ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಲಾಗಿದೆ. ವಿದೇಶದಲ್ಲಿನ ಆಸ್ತಿ ಸಂಪಾದನೆಯ ಬಗ್ಗೆ ತನಿಖೆ ನಡೆಸಬೇಕು. ಜಾರ್ಜ್ ಆವರು ಅಕ್ರಮವಾಗಿ ಇಂತಹ ಆಸ್ತಿಯನ್ನು ಸಂಪಾದಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತಕ್ಕೆ ಸಲ್ಲಿಸಲಾಗಿದ್ದ ಅಫಿಡವಿಟ್ ಜೊತೆಗೂಡಿ, ಅನೇಕ ದಾಖಲೆಯನ್ನು ದೂರಿನೊಂದಿಗೆ ಇಡಿ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಸಲ್ಲಿಸಿದ್ದಾರೆ.
ಜಾರ್ಜ್ ಕುಟುಂಬಕ್ಕೆ ಕಳುಹಿಸಿರುವ ನೋಟಿಸ್​ನಲ್ಲಿ ಈ ಆರೋಪಗಳನ್ನು ನಮೂದಿಸಿ ಇವುಗಳಿಗೆ ಉತ್ತರಿಸಲು ಹಾಜರಾಗುವಂತೆ ಇಡಿ ಹೇಳಿದೆ. ನವೆಂಬರ್‌ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ಕೆ. ಜೆ. ಜಾರ್ಜ್ ಮತ್ತು ಕುಟುಂಬ ಸದಸ್ಯರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅನ್ವಯ ಇಡಿ ಪ್ರಕರಣ ದಾಖಲು ಮಾಡಿಕೊಂಡಿತ್ತು. ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ಮಾಜಿ ಸಚಿವರ ವಿರುದ್ಧ ದೂರು ನೀಡಿದ್ದರು. ನ್ಯೂಯಾರ್ಕ್‌ನಲ್ಲಿರುವ ಆಸ್ತಿ ವಿವರಗಳನ್ನು ಉಲ್ಲೇಖಿಸಿದ್ದರು. ಕೆ. ಜೆ. ಜಾರ್ಜ್ ಪುತ್ರಿ ರೇನಿತಾ ಅಬ್ರಾಹಂ ಮತ್ತು ಅಳಿಯ ಕೆವಿನ್ ಅಬ್ರಾಹಂ ನ್ಯೂಯಾರ್ಕ್‌ನಲ್ಲಿ ವಾಸವಾಗಿದ್ದಾರೆ ಎಂದು ಹೇಳಿದ್ದರು.
ಕೆ. ಜೆ. ಜಾರ್ಜ್ ಮತ್ತು ಕುಟುಂಬಸ್ಥರ ವಿಚಾರಣೆಗೆ ಮುಂದಾಗಿದ್ದ ಜಾರಿ ನಿರ್ದೇಶನಾಲಯ ಕೆ. ಜೆ. ಜಾರ್ಜ್ 1985 ರಿಂದ 2019ರ ತನಕ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರಗಳನ್ನು ಪಡೆದುಕೊಂಡಿತ್ತು. ಇದನ್ನೇ ಮುಖ್ಯ ಆಧಾರವಾಗಿಟ್ಟುಕೊಂಡು ತನಿಖೆಯನ್ನು ಆರಂಭಿಸಲಾಗಿದೆ. ಇಡಿ ಪ್ರಕರಣ ದಾಖಲು ಮಾಡಿಕೊಂಡಾಗ ಪ್ರತಿಕ್ರಿಯೆ ನೀಡಿದ್ದ ಕೆ. ಜೆ. ಜಾರ್ಜ್, ‘ಚುನಾವಣಾ ಆಯೋಗ ಮತ್ತು ಲೋಕಾಯುಕ್ತದಲ್ಲಿ ನನ್ನ ಆಸ್ತಿಯನ್ನು ಘೋಷಿಸಿಕೊಂಡಿದ್ದೇನೆ. ಇಡಿ ಯಾವ ವಿವರಣೆ ಕೇಳಿದರೂ ಕೊಡುವೆ’ ಎಂದು ಹೇಳಿದ್ದರು.

Leave A Reply

Your email address will not be published.