ಪಿಎಚ್ಡಿ ಪ್ರದಾನ ಮಾಡದೇ ಸತಾಯಿಸಿದ ಆರೋಪ : ಮನನೊಂದ ವಿದ್ಯಾರ್ಥಿನಿಯಿಂದ ಆತ್ಮಹತ್ಯೆ ಹತ್ಯೆ
Chikodi: ವಿಶ್ವವಿದ್ಯಾಲಯದವರು ಪಿಎಚ್ಡಿ (Phd) ಪದವಿ ನೀಡಲು ಸತಾಯಿಸುತ್ತಿದ್ದಾರೆಂದು ಮನನೊಂದ ವಿದ್ಯಾರ್ಥಿನಿಯೊಬ್ಬರು ಬರೋಬ್ಬರಿ 20ಕ್ಕೂ ಅಧಿಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikodi) ಪಟ್ಟಣದಲ್ಲಿ ಸಂಭವಿಸಿದೆ. ಸುಜಾತಾ ಬೆಂಡೆ (32) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸುಜಾತಾ ಬೆಂಡೆಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಿಎಚ್ಡಿ ಸ್ಕಾಲರ್ ವಿದ್ಯಾರ್ಥಿನಿಯಾಗಿದ್ದ ಸುಜಾತಾ ಬೆಂಡೆ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ಸುಜಾತಾ ಬೆಂಡೆಗೆ ಪಿಎಚ್ಡಿ ಪ್ರದಾನವಾಗಿರಲಿಲ್ಲ. ಇದರಿಂದ ಸುಜಾತಾ ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ.
ಇನ್ನು ರಾಣಿ ಚನ್ನಮ್ಮ ವಿವಿ ಕುಲಪತಿಗಳಾದ ಸಿ.ಎಂ ತ್ಯಾಗರಾಜ್, ರಿಜಿಸ್ಟ್ರಾರ್ ಸಂತೋಷ್ ಕಾಮೇಗೌಡ ಹಾಗೂ ಗೈಡ್ ಕೆ.ಎಲ್.ಎನ್ ಮೂರ್ತಿ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಕೇಳಿಬಂದಿದೆ. ರಾಯಭಾಗ ಪ್ರದೇಶ ಸಮಗ್ರ ಚಾರಿತ್ರಿಕ ವಿಷಯದಲ್ಲಿ ಸುಜಾತಾ ಪಿಎಚ್ಡಿ ಮಂಡಿಸಿದ್ದರು ಎನ್ನಲಾಗಿದೆ. ಆರು ತಿಂಗಳ ಹಿಂದೆಯೇ ಪಿಎಚ್ಡಿ ಮಂಡಿಸಿದ್ದ ಸುಜಾತಾ ಘಟಿಕೋತ್ಸವ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದರು.
ಆದರೆ ವಿಶ್ವವಿದ್ಯಾಲಯದವರು ಬೇಕಂತಲೇ ಟಾರ್ಗೆಟ್ ಮಾಡಿದ್ದಾರೆಂದು ಸುಜಾತಾ ಆರೋಪಿಸಿದ್ದಾರೆ. ಗೈಡ್ ಮೂರ್ತಿ ಕಿರುಕುಳ ನೀಡುತ್ತಿದ್ದಾರೆಂದು ಕುಲಪತಿ ಹಾಗೂ ರಿಜಿಸ್ಟರ್ಗೆ ದೂರು ನೀಡಿದ್ದೆ.ಇದಾದ ಬಳಿಕ ಗೈಡ್ ಸಮಸ್ಯೆ ಬಗೆಹರಿಸಲಾಗಿತ್ತು. ಆದರೆ ಇದೆಲ್ಲ ಸಮಸ್ಯೆ ಬಗೆಹರಿದರೂ ತಮಗೆ ಪಿಎಚ್ಡಿ ಮಾತ್ರ ಪ್ರದಾನ ಮಾಡಿಲ್ಲ. ಇದು ನನ್ನ ಮನಸ್ಸಿಗೆ ಅತೀವ ನೋವು ತಂದಿದೆ ಎಂದು ಸುಜಾತಾ ಆರೋಪಿಸಿದ್ದಾರೆ. ಈ ಪ್ರಕರಣ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಎಚ್ಚರ.. ಎಚ್ಚರ..! ರಾಜ್ಯದಲ್ಲಿ ಹೆಚ್ಚಿದ ಇಲಿಜ್ವರ ಆತಂಕ : ಸೋಂಕಿತರ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ಪ್ರಥಮ



