ನಿದ್ದೆಯ ಇಂಜೆಕ್ಷನ್ ಚುಚ್ಚಿ, ಕತ್ತು ಸೀಳಿ ಹತ್ಯೆ : ಪತ್ನಿಯ ಕೊಲೆ ರಹಸ್ಯ ಬಯಲಾಗುತ್ತಲೇ ಆತ್ಮಹತ್ಯೆ ಮಾಡಿಕೊಂಡ ಡಾಕ್ಟರ್ !

0

ಚಿಕ್ಕಮಗಳೂರು : ಆವತ್ತು ರಾತ್ರಿ 8 ಗಂಟೆಯ ಹೊತ್ತಲ್ಲಿ ಕಾಫಿನಾಡಿನ ಮಂದಿ ಬೆಚ್ಚಿಬಿದ್ದಿದ್ದರು. ಸಂಜೆಯ ಹೊತ್ತಲ್ಲೇ ದಂತ ವೈದ್ಯರ ಪತ್ನಿಯನ್ನು ಬರ್ಬರವಾಗಿ ಕತ್ತು ಸೀಳಿ ಹತ್ಯೆಗೈಯಲಾಗಿತ್ತು. ಮನೆಯ ಲಾಕರ್ ನಲ್ಲಿದ್ದ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ರು. ದರೋಡೆಕೋರರೇ ಆಕೆಯನ್ನು ಕೊಂದು ಚಿನ್ನಾಭರಣ ಲೂಟಿ ಮಾಡಿರಬಹುದು ಅಂತಾನೇ ಬಾವಿಸಿಕೊಂಡಿದ್ರು. ಆದ್ರೀಗ ಡಾಕ್ಟರ್ ಪತ್ನಿ ಕವಿತಾ ಕೊಲೆಗೆ ಬಿಗ್ ಟ್ವೀಸ್ಟ್ ಸಿಕ್ಕಿದ್ದು, ಇದು ದರೋಡೆಕೋರರ ಕೃತ್ಯವಲ್ಲ, ಬದಲಾಗಿ ಆಕೆಯ ಪತಿಯೇ ಪತ್ನಿಯನ್ನು ಹತ್ಯೆಗೈದು, ದರೋಡೆಯ ನಾಟಕವಾಡಿದ್ದಾನೆ ಅನ್ನೋದು ಬಯಲಾಗಿದೆ. ಆದರೆ ಪ್ರಕರಣ ಬಯಲಾಗುತ್ತಲೇ ದಂತ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಲೆಯಾಗಿರುವ ಕವಿತಾ ಹಾಗೂ ಆತ್ಮಹತ್ಯೆಗೆ ಶರಣಾದ ಡಾ.ರೇವಂತ್

ಫೆಬ್ರವರಿ 17ರಂದು ಕಡೂರು ಪಟ್ಟಣದ ಲಕ್ಷ್ಮೀಪುರದಲ್ಲಿ ದಂತ ವೈದ್ಯ ಡಾ.ರೇವಂತ್ ಪತ್ನಿ ಕವಿತಾ ಕೊಲೆಯಾಗಿ ಹೋಗಿದ್ದಳು. ಬೀರೂರಿನ ತನ್ನ ಕ್ಲಿನಿಕ್ ನಿಂದ ರಾತ್ರಿ ಮನೆಗೆ ಬಂದ ರೇವಂತ್ ತನ್ನ ಪತ್ನಿ ಕೊಲೆಯಾಗಿರೋದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಡೆಂಟಲ್ ಡಾಕ್ಟರ್ ಪತ್ನಿ ಕವಿತಾ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕಡೂರು ಠಾಣೆಯ ಪೊಲೀಸರು ಕೊಲೆ ಪ್ರಕರಣದ ಜಾಡು ಹಿಡಿದು ಹೊರಟಿದ್ದರು. ಫೆಬ್ರವರಿ 17ರಂದು ಕೊಲೆ ನಡೆದ ಸ್ಥಳ, ಮನೆಯನ್ನು ಪರೀಕ್ಷಿಸಿದ್ದ ಪೊಲೀಸರಿಗೆ ಮೇಲ್ನೊಟಕ್ಕೆ ಇದೊಂದು ದರೋಡೆಕೋರರ ಕೃತ್ಯ ಅನ್ನೋದು ದೃಢಪಟ್ಟಿತ್ತು. ಆದರೆ ಕವಿತಾ ಕೊಲೆಯಾಗಿರೋ ಜಾಗ, ಅಲ್ಲಿ ಸಿಕ್ಕಿರೋ ಕುರುಹುಗಳು, ಸಿಸಿ ಕ್ಯಾಮರಾ ಸಾಕ್ಷಿಗಳು ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸಣ್ಣದೊಂದು ಅನುಮಾನ ಮೂಡುವಂತೆ ಮಾಡಿತ್ತು. ಇದು ದರೋಡೆಕೋರರ ಕೃತ್ಯವಲ್ಲ ಪರಿಚಿತರೇ ಈ ಕೃತ್ಯವೆಸಗಿರಬಹುದು ಅನ್ನೋ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಶುರುಮಾಡಿದ್ದರು.

ಕವಿತಾ ಕೊಲೆಯಾದ ಮನೆ, ಸ್ಥಳದಲ್ಲಿ ಜಮಾಯಿಸಿದ ಜನರು

ಕೊಲೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಕೇವಲ 5ನೇ ದಿನಕ್ಕೆ ಹತ್ಯೆಯಾಗಿದ್ದ ಕವಿತಾ ಪತಿ ದಂತ ವೈದ್ಯ ಡಾ.ರೇವಂತ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ರೇವಂತ್ ಸಾವಿನ ಸುದ್ದಿ ಕೇಳುತ್ತಲೇ ಅನುಮಾನ ವ್ಯಕ್ತವಾಗಿತ್ತು. ಪತ್ನಿಯ ಕೊಲೆಯ ಬೆನ್ನಲ್ಲೇ ಪತಿ ಕೂಡ ಕೊಲೆಯಾಗಿರೋದು ಜನರಿಗೆ ಆತಂಕವನ್ನು ಮೂಡಿಸಿತ್ತು. ಆದರೆ ರೇವಂತ್ ಕೊಲೆಯಾದ ಕೇಲವೇ ಘಂಟೆಗಳಲ್ಲಿ ಕವಿತಾ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ.

7 ತಿಂಗಳ ಹಸುಗೂಸಿನ ಎದುರಲ್ಲೇ ಪತ್ನಿಯ ಕತ್ತು ಸೀಳಿದ !
ದಿವಂಗತ ಸಂಜೀವ್ ಮತ್ತು ಕೆನರಾ ಬ್ಯಾಂಕ್ ಉದ್ಯೋಗಿಯಾಗಿರುವ ಅಲಮೇಲಮ್ಮ ದಂಪತಿಯ ಮಗನಾಗಿರೋ ದಂತ ವೈದ್ಯ ಡಾ. ರೇವಂತ್ ಬೀರೂರು ಪಟ್ಟಣದಲ್ಲಿ ಖಾಸಗಿ ದಂತ ವೈದ್ಯ ಕ್ಲಿನಿಕ್ ನಡೆಸುತ್ತಿದ್ದ. ಕಳೆದ 7 ವರ್ಷದ ಹಿಂದೆ ಉಡುಪಿ ಮೂಲದ ಎಂ.ಎ, ಪದವೀಧರೆಯಾಗಿರುವ ಕವಿತಾ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾದ ನಂತರದಲ್ಲಿ ಕಡೂರಿನ ಲಕ್ಷ್ಮೀಪುರದಲ್ಲಿರೋ ತನ್ನ ಮನೆಯಲ್ಲಿ ವಾಸವಾಗಿದ್ದ. ಡಾ.ರೇವಂತ್ ಹಾಗೂ ಕವಿತಾ ದಂಪತಿಗಳಿಗೆ 5 ವರ್ಷ ಹಾಗೂ 7 ತಿಂಗಳಿನ ಇಬ್ಬರು ಮಕ್ಕಳಿದ್ದರು.

ಇನ್ನು ರೇವಂತ್ ತಾಯಿ ಕೂಡ ಮಗ ಸೊಸೆಯೊಂದಿಗೆ ವಾಸವಿದ್ರು. ಆವತ್ತು ಮಧ್ಯಾಹ್ನ ಊಟವಾದ ಮೇಲೆ ರೇವಂತ್ ತನ್ನ ಪತ್ನಿಗೆ ಅಮಲು ಬರೋ ಇಂಜೆಕ್ಷನ್ ಕೊಟ್ಟಿದ್ದಾನೆ. ಇಂಜೆಕ್ಷನ್ ಕೊಡುತ್ತಲೇ ಪತ್ನಿ ಕವಿತಾ ಗಾಢ ನಿದ್ದೆಗೆ ಜಾರಿದ್ದಳು. ಇದೇ ವೇಳೆಯಲ್ಲಿ ತನ್ನು 7 ತಿಂಗಳ ಹಸುಗೂಸಿನ ಮುಂದೆಯೇ ರೇವಂತ್ ಪತ್ನಿಯ ಕತ್ತನ್ನು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದ. ನಂತರ ಮನೆಯ ಕವಾಟಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಸುಮಾರು 3 ರಿಂದ 4 ಗಂಟೆಯ ವೇಳೆಗೆ ಮನೆಯ ಬಾಗಿಲು ಹಾಕಿಕೊಂಡು ಬೀರೂರಿನ ಕ್ಲಿನಿಕ್ ಗೆ ಹೋಗಿದ್ದ.

ತನ್ನ ತಾಯಿ ಮಗನನ್ನು ಕ್ಲಿನಿಕ್ ನಲ್ಲಿ ಕೂರಿಸಿಕೊಂಡಿದ್ದ !
ಬ್ಯಾಂಕಿಗೆ ಹೋಗಿದ್ದ ತಾಯಿಯನ್ನು ಒಟ್ಟಿಗೆ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕ್ಲಿನಿಕ್ ಗೆ ಕರೆಯಿಸಿಕೊಂಡಿದ್ದ, ಅಲ್ಲದೇ ದೊಡ್ಡ ಮಗುವನ್ನು ಶಾಲೆಯಿಂದ ತಾನೇ ಕರೆತಂದು ಕ್ಲಿನಿಕ್ ನಲ್ಲಿಯೇ ಕೂರಿಸಿಕೊಂಡಿದ್ದ. ಸಂಜೆ 6 ಗಂಟೆಯ ಸುಮಾರಿಗೆ ಪತ್ನಿಗೆ ಕರೆ ಮಾಡೋ ನಾಟಕವಾಡಿದ್ದಾನೆ.

ಅಲ್ಲದೇ ಆವತ್ತು ಎಂದಿಗಿಂತಲೂ ಅರ್ಧಗಂಟೆ ತಡವಾಗಿ ಮನೆ ಬಂದಿದ್ದ ರೇವಂತ್. ಮನೆಗೆ ಬಂದವನೇ ಬಾಗಿಲು ತೆರೆದು ಏನೂ ಗೊತ್ತೆ ಇಲ್ಲದಂತೆ ತಾಯಿ, ಮಗನೊಂದಿಗೆ ಮನೆಯೊಳಗೆ ಹೋಗಿದ್ದಾನೆ. ಮಗು ತಾಯಿಯನ್ನು ಕೇಳಿದಾಗಲೂ ಒಳಗಡೆ ಇರಬಹುದು ನೋಡು ಅಂತಾನೇ ಹೇಳಿದ್ದ. ಕೊನೆಗೆ ಕವಿತಾ ಕೊಲೆಯಾಗಿರೋದನ್ನು ತಾಯಿ, ಮಗು ನೋಡುತ್ತಲೇ ರೇವಂತ್ ಪೊಲೀಸರಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾನೆ.

ಅನೈತಿಕ ಸಂಬಂಧಕ್ಕೆ ಕೊಲೆಗೈದ ?
ದಂತ ವೈದ್ಯ ಡಾ.ರೇವಂತ್ ಪತ್ನಿ ಕವಿತಾ ಹತ್ಯೆಯ ಹಿಂದೆ ಅನೈತಿಕ ಸಂಬಂಧದ ಆರೋಪ ಕೇಳಿಬರುತ್ತಿದೆ. ಡಾ,ರೇವಂತ್ ಗೆ ಅನ್ಯ ಸ್ಟ್ರೀಯೊಂದಿಗೆ ಅನೈತಿಕ ಸಂಬಂಧವಿತ್ತು. ಇದೇ ವಿಚಾರಕ್ಕೆ ರೇವಂತ್ ಹಾಗೂ ಕವಿತಾ ನಡುವೆ ಆಗಾಗ ಜಗಳವಾಗುತ್ತಿತ್ತಂತೆ. ತನ್ನ ಅನೈತಿಕ ಸಂಬಂಧಕ್ಕೆ ಪತ್ನಿ ಅಡ್ಡಗಾಲಾಗುತ್ತಿದ್ದಾಳೆ ಅಂತಾ ಬಾವಿಸಿದ್ದ ರೇವಂತ್ ಪತ್ನಿಯನ್ನು ಹತ್ಯೆಗೈದಿದ್ದಾನೆ ಅನ್ನೋದು ತಿಳಿದು ಬಂದಿದೆ.

ಕೊಲೆ ರಹಸ್ಯ ಬಯಲಾಗುತ್ತಲೇ ಆತ್ಮಹತ್ಯೆ !
ಪತ್ನಿಯ ಕೊಲೆಯಾಗಿ ನಾಲ್ಕು ದಿನಗಳ ಕಾಲ ರೇವಂತ್ ಸೈಲೆಂಟಾಗಿದ್ದ. ಯಾರಿಗೂ ಅನುಮಾನ ಬಾರದಂತೆ ಜಾಗೃತೆ ವಹಿಸಿದ್ದ. ಆದರೆ ಕವಿತಾ ಕೊಲೆಯಾಗುತ್ತಲೇ ಪತಿ ರೇವಂತ್ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ ಅಂತಾ ಪೊಲೀಸರಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರೇವಂತ್ ನನ್ನು ಸ್ಟೇಷನ್ ಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆಯ ವೇಳೆಯಲ್ಲಿಯೂ ರೇವಂತ್ ತನ್ನ ಮೇಲೆ ಎಲ್ಲೂ ಅನುಮಾನ ಬಾರದಂತೆ ಉತ್ತರ ನೀಡಿದ್ದಾನೆ. ಆದರೆ ಪೊಲೀಸರು ಕವಿತಾ ಕೊಲೆ ರಹಸ್ಯ ಬೇದಿಸುತ್ತಲೇ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ದಂತವೈದ್ಯನ ಅನೈತಿಕ ಪ್ರೇಮಕ್ಕೆ ತನ್ನ ಪತ್ನಿಯನ್ನೂ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮುದ್ದಾದ ಮಕ್ಕಳಿಬ್ಬರೂ ತಂದೆ, ತಾಯಿಯಿಲ್ಲದೇ ಅನಾಥವಾಗಿದ್ದಾರೆ.

Leave A Reply

Your email address will not be published.