ಕೇರಳ : ಹೆಂಡ್ತಿ ಕಟ್ಕೊಂಡ ಮೇಲೆ ಅಮ್ಮನಿಗೆ ಅನ್ನ ಹಾಕೋಕು ಯೋಚ್ನೇ ಮಾಡೋ ಮಕ್ಕಳು ಇರೋ ಕಾಲದಲ್ಲಿ ಇಲ್ಲೊಬ್ಬ ಮಗ ಅಮ್ಮನ ಜೊತೆ ಭರ್ಜರಿ ಟ್ರಿಪ್ ಮಾಡಿ ತಾಯಿ ಆಸೆ ಈಡೇರಿಸಿ ಸೈ ಎನ್ನಿಸಿಕೊಂಡಿದ್ದಾನೆ.

ಕೆಲದಿನಗಳಿಂದ ಸೋಷಿಯಲ್ ಮೀಡಿಯಾ ದಲ್ಲಿ ಮಗನೊಬ್ಬ ವಯಸ್ಸಾದ ತಾಯಿ ಜೊತೆ ಪ್ರವಾಸಿತಾಣಗಳಲ್ಲಿ ಫುಲ್ ಪೋಸು ಕೊಟ್ಟ ಪೋಟೋಗಳು ವೈರಲ್ ಆಗಿದ್ದವು. ಅಷ್ಟೇ ಅಲ್ಲ ಇದ್ದರೇ ಇರಬೇಕು ಇಂಥ ಮಗ ಎಂಬ ಕಮೆಂಟ್ ಕೂಡ ನೆಟ್ಟಿಗರಿಂದ ಬಂದಿತ್ತು.
ಆ ಪೋಟೋಗಳ ಅಸಲಿಯತ್ತಿನ ಜಾಡು ಹಿಡಿದು ಹೊರಟ್ರೇ ಸಿಕ್ಕಿದ್ದು ಶ್ರವಣ ಕುಮಾರನಂತ ಮಗ. ಹೌದು ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿ ಶರತ್ ಕೃಷ್ಣನ್ ಇಂತಹದೊಂದು ಮಾದರಿ ಹಾಗೂ ಅಪರೂಪದ ಪುತ್ರ.
ಈತನ ತಾಯಿ ಗೀತಾ ರಾಮಚಂದ್ರನ್ ಗಂಗಾನದಿ ತೀರ ಸೇರಿದಂತೆ ಒಂದಿಷ್ಟು ಸ್ಥಳಗಳನ್ನು ನೋಡಬೇಕೆಂದು ಆಸೆ ಪಟ್ಟಿದ್ದರಂತೆ. ಮಗನ ಎದುರು ಹಲವು ಸಲ ಹೇಳಿಕೊಂಡು ಸುಮ್ಮನಾಗಿದ್ದರಂತೆ. ಆದರೇ ಸ್ವಂತ ಬ್ಯುಸಿನೆಸ್ ನಡೆಸೋ ಮಗ ಶರತ್ ಕೃಷ್ಣ ಮನಸ್ಸಿನಲ್ಲಿ ಪ್ಲ್ಯಾನ್ ಅದಾಗಲೇ ರೂಪುಗೊಂಡಿತ್ತು ನೋಡಿ.
ತಾಯಿ ನೋಡಬೇಕು ಎಂದುಕೊಂಡಿರೋ ಪ್ಲೇಸ್ ಗಳ ಲಿಸ್ಟ್ ಮಾಡಿಕೊಂಡ ಶರತ್ ಸ್ನೇಹಿತನ ಟೂರಿಸ್ಟ್ ಪ್ಯಾಕೇಜ್ ನಲ್ಲಿ ಟಿಕೆಟ್ ಬುಕ್ಮಾಡಿಸಿ ಕರೆದೊಯ್ದಿದ್ದಾರೆ. ಕೆಲವೆಡೆ ಪ್ಲೈಟ್ಸ್, ಕೆಲವೆಡೆ ಬಸ್,ಕಾರು ಹೀಗೆ ಎಲ್ಲದರಲ್ಲೂ ಸುತ್ತಾಡಿಸಿ ಅಮ್ಮನ ನೆಚ್ಚಿನ ತಾಣಗಳಲ್ಲಿ ಅಮ್ಮನ ಜೊತೆ ಪೋಟೋಕ್ಕೆ ಪೋಸು ನೀಡಿ ಮನಸೆಳೆದಿದ್ದಾನೆ.

ಇಷ್ಟಕ್ಕೂ ಶರತ್ ಹಾಗೂ ಅವರ ತಾಯಿ ಗೀತಾ ಈ ಪ್ರವಾಸ ಹೋಗಿಬಂದಿದ್ದು 2018 ರಲ್ಲಿ. 11 ದಿನಗಳ ಕಾಲ ಕುಲುಮನಾಲಿ ಸೇರಿದಂತೆ ನೂರಾರು ಜಾಗ ಸುತ್ತಾಡಿಕೊಂಡು ಬಂದಿದ್ದಾರೆ.
ಪ್ರಿಡ್ಜ್ ನಲ್ಲಿರೋ ಐಸ್ ಮಾತ್ರ ನೋಡಿದ್ದ ನನ್ನ ತಾಯಿ ಕುಲುಮನಾಲಿಯಲ್ಲಿ ಐಸ್ ನೋಡಿ 70 ರ ವಯಸ್ಸು ಮರೆತು 18 ರಂತೆ ಕುಣಿದಾಡಿದ್ದನ್ನು ನೋಡಿ ನನ್ನ ಕಣ್ತುಂಬಿ ಬಂತು. ಹೀಗಾಗಿ ಇನ್ಮುಂದೆ ಪ್ರತಿವರ್ಷವೂ ಅಮ್ಮನ ಜೊತೆ ಟ್ರಿಪ್ ಹೋಗಬೇಕೆಂದು ನಿರ್ಧರಿಸಿದ್ದೇನೆ ಎಂದಿದ್ದಾರೆ ಶರತ್.

ಅತ್ಯಂತ ಚಳಿಯ ಪ್ರದೇಶವಾಗಿರುವ ಲೇಹ್ -ಲಡಾಕ್ಗೂ ತಾಯಿಯನ್ನು ಕರೆದುಕೊಂಡು ಹೋಗುವ ಉತ್ಸಾಹ ಶರತ್ ಗೆ ಇತ್ತಂತೆ.ಆದರೇ ಅಲ್ಲಿನ ವ್ಯವಸ್ಥೆ ಹಾಗೂ ತಾಯಿಯ ಮಧುಮೇಹ,ಬೆನ್ನುನೋವಿನ ದೃಷ್ಟಿಯಿಂದ ಕರೆದುಕೊಂಡು ಹೋಗಿಲ್ಲವಂತೆ.
ಇನ್ನು ಶರತ್ ಹೀಗೆ ತಾಯಿ ಜೊತೆ ಓಡಾಡಿಬಂದ ಪೋಟೋ ಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಂತೆ. ಆದರೇ ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಇಷ್ಟರ ಮಟ್ಟಿಗೆ ವೈರಲ್ ಆಗಿ ಸಂಚಲನ ಮೂಡಿಸುತ್ತೆ ಅನ್ನೋದು ಅವರಿಗೂ ಗೊತ್ತಿರಲಿಲ್ಲವಂತೆ.

ಕಳೆದ ಕೆಲದಿನಗಳಿಂದ ವೈರಲ್ ಆಗಿರುವ ಈ ಪೋಟೋಗಳನ್ನು ಲಕ್ಷಾಂತರ ಜನರು ಲೈಕ್ ಮಾಡಿದ್ದರೇ ಸಾವಿರಾರು ಜನರು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಶರತ್ ತಾಯಿ ಮೇಲಿನ ಪ್ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಕೆಲವರು ಶರತ್ ಮತ್ತು ಅವರ ತಾಯಿ ಗಾಗಿ ಟ್ರಿಪ್ ಗಳನ್ನು ಸ್ಪಾನ್ಸರ್ಮಾಡಲು ಸಹ ಉತ್ಸುಕರಾಗಿರೋದಾಗಿ ಹೇಳಿದ್ದಾರಂತೆ.