ಇನ್ಮುಂದೆ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬರುತ್ತೆ ಹಾಲಿನ ಫೌಡರ್

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಈ ವೇಳೆಯಲ್ಲಿ ಮಕ್ಕಳ ಪೌಷ್ಟಿಕತೆಯ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹಾಲಿನ ಫೌಡರ್ ತಲುಪಿಸಲು ರಾಜ್ಯ ಸರಕಾರ ಮುಂದಾಗಿದೆ.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪೌಷ್ಠಿಕತೆಯ ಮಟ್ಟವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕ್ಷಿರಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಈಗಾಗಲೇ ಪಡಿತರವನ್ನು ತಲುಪಿಸಲಾಗುತ್ತಿದ್ದು, ಇನ್ಮುಂದೆ ಪಡಿತರದ ಜೊತೆಗೆ ಹಾಲಿನ ಪುಡಿ ವಿತರಿಸುವಂತೆ ರಾಜ್ಯಸರ್ಕಾರ ಕೋವಿಡ್-19 ನಿರ್ವಹಣೆಗಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆಗಳಿಗೆ ನಿರ್ದೇಶನ ನೀಡಿದೆ.

ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡಾಗಿನಿಂದಲೂ ಬಹುತೇಕ ಮಂದಿ ಆರ್ಥಿಕವಾಗಿ ಹಿಂದುಳಿದಿರುವ ಸರ್ಕಾರಿ ಮಕ್ಕಳ ಪೌಷ್ಟಿಕ ಮಟ್ಟದ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿದೆ. ಸಾಮಾನ್ಯವಾಗಿ ಕ್ಷೀರ ಭಾಗ್ಯ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೂ 18 ಗ್ರಾಂ ಫೌಡರ್ ನೀಡಲಾಗುತ್ತಿದೆ. ಆದರೆ, ಸಾಂಕ್ರಾಮಿಕ ರೋಗದ ಕಾರಣ ಶಾಲೆ ತೆರೆಯದ ಕಾರಣ ವಿದ್ಯಾರ್ಥಿಗಳಿಗೆ ಹಾಲು ದೊರೆಯುತ್ತಿಲ್ಲ.

ಈ ಹಾಲಿನಲ್ಲಿ ಶೇ.3.5 ರಷ್ಟು ಕೊಬ್ಬಿನಾಂಶ ಇರಲಿದೆ. ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಅರ್ಧ ಕಿಲೋನಂತೆ ಎರಡು ತಿಂಗಳವರೆಗೂ ಹಾಲಿನ ಪೌಡರ್ ವಿತರಿಸಲಿದೆ. ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಂದ ಸುಮಾರು 64 ಲಕ್ಷ ವಿದ್ಯಾರ್ಥಿಗಳನ್ನು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ.

ಆರು ತಿಂಗಳಿನಿಂದ ಆರು ವರ್ಷದೊಳಗಿನ 39.5 ಲಕ್ಷ ಅಂಗನವಾಡಿ ಮಕ್ಕಳಿಗೆ ಕೆಎಂಎಫ್ ಈಗಾಗಲೇ ಹಾಲು ವಿತರಿಸುತ್ತಿದೆ. ಎಲ್ಲಾ ಮಕ್ಕಳಿಗೂ ಪ್ರತಿದಿನ 15 ಗ್ರಾಮ್ ಹಾಲಿನ ಪುಡಿಯನ್ನು ವಿತರಿಸಲಾಗುತ್ತಿದೆ. ಪ್ರತಿದಿನ ಮೂರು ಲಕ್ಷ ಲೀಟರ್ ಹಾಲನ್ನು 35 ಮೆಟ್ರಿಕ್ ಟನ್ ಹಾಲಿನ ಪುಡಿಯನ್ನಾಗಿ ಮಾರ್ಪಡಿಸಿ ಇಂತಹ ಮಕ್ಕಳಿಗೆ ನೀಡಲಾಗುತ್ತಿದೆ.

ಈಗ ಯೋಜನೆಯನ್ನು ಒಂದರಿಂದ 10ನೇ ತರಗತಿಯವರೆಗೂ ನೀಡುತ್ತಿರುವುದರಿಂದ 64 ಲಕ್ಷಕ್ಕೂ ಹೆಚ್ಚು ಯುವಕರು ಕೂಡಾ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.