ಇಂಜಿನಿಯರಿಂಗ್ ಪದವೀಧರರಿಗೂ ಶಿಕ್ಷಕರ ಹುದ್ದೆ : ರಾಜ್ಯ ಸಚಿವ ಸಂಪುಟದಿಂದ ಮಹತ್ವದ ನಿರ್ಧಾರ

ಬೆಂಗಳೂರು : ರಾಜ್ಯದಲ್ಲಿ 6 ರಿಂದ 8 ನೇ ತರಗತಿ ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ‌ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇಂಜಿನಿಯರಿಂಗ್ ಪದವೀಧರರು ಕೂಡ ಶಿಕ್ಷಕರಾಗಲು ಅವಕಾಶ ಕಲ್ಪಿಸಲಾಗಿದೆ.

ವಿಜ್ಞಾನ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಎಂಜಿನಿಯರಿಂಗ್ ಪದವಿಧರರು ಸೇರಿದಂತೆ ನಾನಾ ಪದವೀಧರರಿಗೆ ಅವಕಾಶ ನೀಡಬೇಕೆಂಬ ತಜ್ಞರ ಸಮಿತಿ ಅಭಿಪ್ರಾಯದಂತೆ ತಿದ್ದುಪಡಿ ಮಾಡಲಾಗಿದೆ. 6 ರಿಂದ 8 ನೇ ತರಗತಿ ಪ್ರಾಥಮಿಕ ಶಾಲೆ ವಿಜ್ಞಾನ ಮತ್ತು ಗಣಿತ ಶಿಕ್ಷಕರ ಹುದ್ದೆಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳಿಗೆ ಮಾತ್ರ ಅವಕಾಶವಿದ್ದು, ಭೌತಶಾಸ್ತ್ರ ಗಣಿತ ಶಾಸ್ತ್ರಗಳನ್ನು ಪದವಿಯಲ್ಲಿ ಕಡ್ಡಾಯವಾಗಿ ವ್ಯಾಸಂಗಮಾಡಿ ಮೂರನೇ ವಿಷಯವನ್ನು ರಸಾಯನಶಾಸ್ತ್ರ ಜೊತೆಗೆ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಭೂಗೋಳಶಾಸ್ತ್ರ, ಗೃಹವಿಜ್ಞಾನ ವಿಷಯ ಓದಿದವರಿಗೂ ಅವಕಾಶ ನೀಡಲಾಗುವುದು.

ಈ ಅಭ್ಯರ್ಥಿಗಳು ಬಿಎಡ್, ಟಿಇಟಿ ಅರ್ಹತೆಯನ್ನು ಹೊಂದಿರಬೇಕು. 4 ವರ್ಷಗಳ ಅವಧಿಯ ಇಂಜಿನಿಯರಿಂಗ್, ಬಿಟೆಕ್ ಪದವಿ ಪಡೆದ ಅಭ್ಯರ್ಥಿಗಳನ್ನು ಕೂಡ ಈ ಹುದ್ದೆಗಳಿಗೆ ಪರಿಗಣಿಸಬಹುದು. ಪ್ರಸ್ತುತ ಸಿಬಿಝಡ್ ವಿಷಯಗಳ ಅಭ್ಯರ್ಥಿಗಳಿಗೆ ಅವಕಾಶವಿರಲಿಲ್ಲ. ಇದನ್ನು ಗಮನಿಸಿ ತಿದ್ದುಪಡಿ ತರಲಾಗಿದೆ.

ಪದವಿಯಲ್ಲಿ ಕಡ್ಡಾಯವಾಗಿ 3 ವರ್ಷ ರಸಾಯನಶಾಸ್ತ್ರ ಓದಿರುವ, ಉಳಿದಂತೆ ಪ್ರಾಣಿಶಾಸ್ತ್ರ, ರೇಷ್ಮೆ ಶಾಸ್ತ್ರ, ಸಸ್ಯಶಾಸ್ತ್ರ, ಪರಿಸರ ಶಾಸ್ತ್ರ, ಜೈವಿಕ ವಿಜ್ಞಾನ ವಿಷಯಗಳಲ್ಲಿ ಯಾವುದಾದರೂ ಎರಡು ವಿಷಯವನ್ನು ಕಡ್ಡಾಯವಾಗಿ ಎಲ್ಲ 3 ವರ್ಷಗಳಲ್ಲಿ ಓದಿರುವ ಅಭ್ಯರ್ಥಿಗಳನ್ನು ಕೂಡ ಶಿಕ್ಷಕ ಹುದ್ದೆಗೆ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.

2017 ರ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅಸ್ತಿತ್ವಕ್ಕೆ ಬಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8 ನೇ ತರಗತಿ ಹುದ್ದೆಗಳ ನೇಮಕಾತಿಗೆ ಕ್ರಮಕೈಗೊಂಡಿದ್ದು, 2018, 19 ರ ನೇಮಕಾತಿ ಅಧಿಸೂಚನೆ ಅನ್ವಯ ಅಗತ್ಯ ಸಂಖ್ಯೆಯ ಅಭ್ಯರ್ಥಿಗಳ ಕೊರತೆಯಾಗಿ ಹೆಚ್ಚಿನ ಸ್ಥಾನಗಳು ಖಾಲಿ ಉಳಿದಿವೆ. ಈ ಕಾರಣದಿಂದ ವೃಂದ ನಿಯಮಗಳಿಗೆ ತಿದ್ದುಪಡಿ ತರಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಇದಕ್ಕೆ ಸಂಪುಟ ಅನುಮೋದನೆ ದೊರೆತಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.




Comments are closed.