ಮಹಾಮಳೆಗೆ ಮುಳುಗಿದ ಬೆಂಗಳೂರು : ಮುಳುಗಿದ ಮನೆಯಲ್ಲಿದ್ದ 5 ತಿಂಗಳ ಮಗುವನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ – ವಿಡಿಯೋ ವೈರಲ್
ಬೆಂಗಳೂರು : ಸಿಲಲಿಕಾನ್ ಸಿಟಿ ಬೆಂಗಳೂರು ಮಹಾಮಳೆಗೆ ಬೆಚ್ಚಿ ಬಿದ್ದಿದೆ. ದಕ್ಷಿಣ ಬೆಂಗಳೂರಿನ ಹಲವು ಪ್ರದೇಶಗಳು ಮಳೆಯ ಅಬ್ಬರಕ್ಕೆ ಮುಳುಗಡೆಯಾಗಿದೆ. ಮುಳುಗಡೆಯಾಗಿದ್ದ ಮನೆಯೊಳಗಿ ನಿಂದ 5 ತಿಂಗಳ ಮಗುವೊಂದನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ರಾಜಧಾನಿ ಬೆಂಗಳೂರಲ್ಲಿ ಹಿಂದೆಂದೂ ಕಂಡರಿಯದಂತಹ ಮಳೆ ಸುರಿದಿದೆ. 3 ಗಂಟೆಗಳ ಕಾಲ ಆರ್ಭಟಿಸಿ ಮಳೆಯಿಂದಾಗಿ ರಾಜಕಾಲುವೆಗಳು ಉಕ್ಕಿ ಹರಿದಿವೆ. ಮೂರು ತಾಸು ಆರ್ಭಟಿಸಿದ ಮಳೆಗೆ ನೂರಾರು ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳಲ್ಲಿನ ಬಡಾವಣೆಗಳು ಸಂಪೂರ್ಣ ವಾಗಿ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಹೊಸಕೆರೆಹಳ್ಳಿಯ ದತ್ತಾತ್ರೇಯ ಲೇಔಟ್ನಲ್ಲಿ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ 300 ಮನೆ ಗಳಿಗೆ ನೀರು ನುಗ್ಗಿತು. ಏಕಾಏಕಿ ನೀರು ನುಗ್ಗಿದ್ದರಿಂದ ಜನರು ಭಯಭೀತರಾಗಿ ಮಹಡಿಗಳಲ್ಲಿ ಆಶ್ರಯ ಪಡೆದರು. ವಯೋವೃದ್ಧರು, ಮಹಿಳೆಯರು, ಮಕ್ಕಳು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈ ವೇಳೆಯಲ್ಲಿ ಮನೆಯೊಳಗೆ ಇದ್ದ 5 ತಿಂಗಳ ಮಗುವೊಂದನ್ನು ಯುವಕನೋರ್ವ ಪ್ರಾಣದ ಹಂಗು ತೊರೆದು ರಕ್ಷಣೆಯನ್ನು ಮಾಡಿದ್ದಾನೆ. ನಂತರ ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ ಮತ್ತು ಎಸ್ಡಿಆರ್ಎಫ್ ತಂಡವು ಹಲವರನ್ನು ರಕ್ಷಿಸಿದೆ.
ಬೆಂಗಳೂರು ದಕ್ಷಿಣ ಭಾಗದ ಬಸವನಗುಡಿ, ವಿಲ್ಸನ್ಗಾರ್ಡನ್, ಚಿಕ್ಕಪೇಟೆ, ಹೊಸಕೆರೆಹಳ್ಳಿ, ಕೋರಮಂಗಲ, ಬನಶಂಕರಿ, ಜೆ.ಪಿ.ನಗರ, ಕೆಂಗೇರಿ, ರಾಜರಾಜೇಶ್ವರಿನಗರ, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ಹಲವು ಪ್ರದೇಶಗಳು ಭಾರಿ ಮಳೆಯಿಂದಾಗಿ ದ್ವೀಪಗಳಾಗಿ ಮಾರ್ಪಟ್ಟಿದ್ದವು. ರಸ್ತೆಗಳು ಹೊಳೆ ರೂಪ ತಾಳಿದ್ದರಿಂದ ಕಾರು, ದ್ವಿಚಕ್ರ ವಾಹನಗಳು ತೇಲಿ ಹೋದವು.
ಕೋರಮಂಗಲದ 3, 4 ಮತ್ತು 6ನೇ ಬ್ಲಾಕ್, ಬನಶಂಕರಿ ಎರಡನೇ ಹಂತದ 23ನೇ ಮುಖ್ಯರಸ್ತೆ, ಕತ್ರಿಗುಪ್ಪೆ, ಡಾಲರ್ಸ್ ಕಾಲೊನಿ, ಜೆಪಿ ನಗರ 7ನೇ ಹಂತದ ನವೋದಯನಗರ, ಶ್ರೇಯಸ್ ಕಾಲೊನಿ, ಯಲಚೇನಹಳ್ಳಿಯ ಚಂದ್ರಾನಗರ, ವಸಂತಪುರ, ಬಿಳೇಕಹಳ್ಳಿ ಸಮೀಪದ ಡಿಯೋ ಎನ್ಕ್ಲೇವ್, ವಿಜಯಾ ಬ್ಯಾಂಕ್ ಕಾಲೊನಿ, ಹೊಂಗಸಂದ್ರ, ಎಲ್ಐಸಿ ಕಾಲೋನಿ 1ನೇ ಕ್ರಾಸ್, ವಿದ್ಯಾಪೀಠ ವಾರ್ಡ್ನ ಐಟಿಐ ಲೇಔಟ್, ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಭಾಸ್ಕರ್ರಾವ್ ಪಾರ್ಕ್, ಶ್ರೀಕಂಠೇಶ್ವರ ಪಾರ್ಕ್ ಸುತ್ತಲಿನ ಬಡಾವಣೆಗಳು.
ಸಿಂಡಿಕೇಟ್ ಲೇಔಟ್, ರಾಜರಾಜೇಶ್ವರಿನಗರದ ಕಾಫಿ ಕಟ್ಟೆ, ಬೆಮೆಲ್ ಲೇಔಟ್, ಐಡಿಯಲ್ ಹೋಮ್ಸ್, ಪ್ರಮೋದ್ ಲೇಔಟ್, ಸಿದ್ಧಾಪುರ ವಾರ್ಡ್ನ ಅರೆಕೆಂಪನಹಳ್ಳಿ, ಚಿಕ್ಕಪೇಟೆ, ಮಾಮೂಲ್ ಪೇಟೆ, ತರಗುಪೇಟೆ, ಸುಲ್ತಾನ್ಪೇಟೆ ಸೇರಿದಂತೆ ಹಲವು ಪ್ರದೇಶಗಳು ಜಲದಿಗ್ಭಂಧನಕ್ಕೆ ಒಳಗಾಘಿದ್ದವು.
ಸಿಲಿಕಾನ್ ಸಿಟಿ ಬೆಂಗಳೂರಿನ ಕೆಂಗೇರಿಯಲ್ಲಿ 103 ಮಿ.ಮೀ, ಆರ್ಆರ್ ನಗರ 102 ಮಿ.ಮೀ, ವಿದ್ಯಾಪೀಠ 95 ಮಿ.ಮೀ, ಉತ್ತರಹಳ್ಳಿ 87 ಮಿ.ಮೀ, ಕೋಣಕುಂಟೆ 83 ಮಿ.ಮೀ, ಬಸವನಗುಡಿ 81 ಮಿ.ಮೀ, ಕುಮಾರಸ್ವಾಮಿ ಲೇಔಟ್ 79 ಮಿ.ಮೀ, ವಿವಿ ಪುರ 71 ಮಿ.ಮೀ ಮಳೆ ಸುರಿದಿದೆ. ಬೆಂಗಳೂರಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.
Comments are closed.