ರಕ್ತ ಕುದಿಯುತ್ತಿದೆ ಎಂದು ಇನ್ನೊಬ್ಬರ ಮೇಲೆ ಎರಚಿದ್ರೆ ನಿತ್ರಾಣ ಆಗೋದು ನಾವೆ

0

ಕೆಲವರು ಒಂದು ವಿಚಾರದಲ್ಲಿ ಸೋಶಿಯಲ್ ಮೀಡಿಯಾ ತುಂಬಾ ಸಿಎಂ ಯಡಿಯೂರಪ್ಪರಿಗೆ ಬೈತಾ ಇದ್ದಾರೆ. ಅದರಲ್ಲಿ ಬಹುತೇಕರು ಬಿಜೆಪಿ ಕಾರ್ಯಕರ್ತರು ಅನ್ನೋದು ಗಮನಿಸಬೇಕಾದ ಅಂಶ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಿಗೆ ಹೋಲಿಕೆ ಮಾಡ್ತಾ, ಯೋಗಿ ಯೋಗಿ ತರ ಯಡಿಯೂರಪ್ಪನವರು ಕಠಿಣ ನಿರ್ಧಾರ ತಗೊತ್ತಿಲ್ಲ. ದುರ್ಬಲ ಸಿಎಂ ಹಾಗೆ.. ಹೀಗೆ ಅಂತೆಲ್ಲಾ ಪುಕ್ಕಟೆ ಸಲಹೆಯನ್ನು ಫೇಸ್ ಬುಕ್, ವಾಟ್ಸ್ ಅಪ್ ಮೂಲಕ ಹರಿಬಿಡ್ತಾ ಇದ್ದಾರೆ. ಅಂಥವರ ಕುರಿತಾಗಿ ನಾಲ್ಕು ಅಕ್ಷರ ಬರೆಯಬೇಕು ಅನಿಸಿತು. ಮನಸ್ಸಿದ್ದರೆ ಸಂಪೂರ್ಣವಾಗಿ ಓದಿ.

ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಆಯ್ತು. ಅದು ಸಮರ್ಥನೀಯ ಅಲ್ಲ. ಈ ಬಗ್ಗೆ ಯಡಿಯೂರಪ್ಪರಿಗೆ ಮಾಧ್ಯಮಗಳು ಪ್ರಶ್ನೆ ಮಾಡಿದ್ರು. ಆಗ ಯಡಿಯೂರಪ್ಪನವರು ನೀಡಿದ ಉತ್ತರ ಹಲವರಿಗೆ ಆಶ್ಚರ್ಯ ತಂದರೆ, ಇನ್ನೂ ಹಲವರಿಗೆ ಆಕ್ರೋಶ ತರಿಸಿದ್ದು ನಿಜ. ಆದರೆ ಯಡಿಯೂರಪ್ಪರ ಒಳಮನಸ್ಸು ಅನೇಕರಿಗೆ ಅರ್ಥ ಆಗಿಲ್ಲ ಎನ್ನೋದು ಸ್ಪಷ್ಟ. ಹೌದು, ಒಂದು ಸಮುದಾಯದಿಂದ ತಪ್ಪಾಗಿದೆ ತಪ್ಪಾಗಿದೆ ಎಂದು ಜರಿಯುವ ಕೆಲಸವನ್ನು ಯಡಿಯೂರಪ್ಪನವರು ಮಾಡಲಿಲ್ಲ.

ಅಧಿಕಾರದಲ್ಲಿದ್ದವರು ಹಾಗೆ ಏಕಾ ಏಕಿ ತೀರ್ಮಾನಕ್ಕೆ ಬಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರೆ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆಗುವರೆ ಹೊರತು ಯಡಿಯೂರಪ್ಪ ಆಗಲು ಸಾಧ್ಯವಿಲ್ಲ. ಆದ್ರೆ ಯಡಿಯೂರಪ್ಪ ಯಡಿಯೂರಪ್ಪರಾಗಿಯೆ ಉತ್ತರ ನೀಡಿದ್ರು. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು. ಹೌದ್ರಿ ಇಂತಹ ಸಮಯದಲ್ಲಿ ಏನೋ ಸಣ್ಣಪುಟ್ಟ ಘಟನೆ ಆಗಿರುತ್ತೆ ಎನ್ನುವ ಮೂಲಕ ವಿಷಯ ಬೆಳೆಸಲು ಹೋಗಲಿಲ್ಲ. ಆ ಮೂಲಕ ಒಂದು ಸಮುದಾಯ ಇನ್ನೊಂದು ಸಮುದಾಯದ ನಡುವೆ ನಡೆಯಬಹುದಾದಂತ ಶೀತಲ ಸಮರಕ್ಕೆ ಬ್ರೇಕ್ ಹಾಕುವ ಪ್ರಯತ್ನದ ಭಾಗವಾಗಿತ್ತು ಸಿಎಂ ಯಡಿಯೂರಪ್ಪರ ಉತ್ತರ.

ಯಾರಿಗೋ ಬುದ್ದಿ ಇರಲ್ಲ ಅಂದ ಮಾತ್ರಕ್ಕೆ ಆಳುವವರಿಗೆ ಸಂಯಮ ಇರಬೇಕಾಗುತ್ತದೆ. ಎಲ್ಲರನ್ನೂ ಸಂದಿಗ್ಧ ಪರಿಸ್ಥಿತಿಯಲ್ಲಿ ಜೊತೆಗೆ ಕೊಂಡೊಯ್ಯುವ ನಾಡಿಮಿಡಿತ ಅರಿತರಬೇಕಾಗುತ್ತದೆ. ಅದು ಮುತ್ಸದ್ದಿ ಯಡಿಯೂರಪ್ಪರ ಬಳಿ ಇದೆ. ಯಡಿಯೂರಪ್ಪರು ತೀಕ್ಷ್ಣ ಉತ್ತರ ನೀಡಲಿಲ್ಲ. ಬದಲಾಗಿ ಸಮುದಾಯ ಮುಖಂಡರ ಸಭೆ ಕರೆದರು. ಅವರಿಗೆ ಮನವಿ ಮಾಡಿದ್ರು. ದೆಹಲಿಗೆ ಹೋಗಿ ಬಂದವರು ಪರೀಕ್ಷೆ ಒಳಗಾಗಿ ಎಂದು ಕೈಜೋಡಿಸಿ ವಿನಂತಿ ಮಾಡಿದ್ರು. ಬಿಸಿ ರಕ್ತದವರಿಗೆ ಯಡಿಯೂರಪ್ಪ ಅಸಹಾಯಕ ಅನಿಸಬಹುದು. ಬಿಸಿ ರಕ್ತಕ್ಕೆ ಅಂತರಂಗ ಗೊತ್ತಿರೋದಿಲ್ಲ. ಬಿಸಿ ರಕ್ತಕ್ಕೆ ಆಗಬಹುದಾದ ಅಪಾಯದ ಅರಿವಿರೋದಿಲ್ಲ. ಸುಮ್ನೆ ರೋಷಾವೇಶದಲ್ಲಿ ಅಭಿಪ್ರಾಯ ಶೇರ್ ಮಾಡ್ತಾ ಹೋಗ್ತಾರೆ.

ಆದ್ರೆ ಯಡಿಯೂರಪ್ಪರದು ಬಿಸಿ ರಕ್ತ ಅಲ್ಲ. ಮಾಗಿದ ಮನಸ್ಸು, ಅನುಭವ ಎಲ್ಲವೂ ಅವರ ನಡೆಯಲ್ಲಿ ಎದ್ದು ಕಾಣುತ್ತಿದೆ. ಹೌದು ಸಿಎಂ ಯಡಿಯೂರಪ್ಪ ಒಂದು ವೇಳೆ ಅರೇ ಕ್ಷಣ ಯಾಮಾರಿ ಒಂದು ಉಗ್ರ ಹೇಳಿಕೆ ನೀಡಿದರೆ ಏನಾಗಬಹದು ಎಂದು ಅಂದಾಜಿಸಿದ್ದೀರಾ ?. ಸಮುದಾಯ ಸಮುದಾಯದ ನಡುವೆ ಹುಳಿ ಹಿಂಡುವ ಹೇಳಿಕೆ ನೀಡಿದರೆ ಆಗಬಹುದಾದ ಅನಾಹುತ ಕೋವಿಡ್ -19 ಗಿಂತ ಘೋರವಾದಿತು ಎನ್ನುವ ಸೂಕ್ಷ್ಮಗಳು ಹಲವರಿಗೆ ಅರ್ಥವೇ ಆಗೋದಿಲ್ಲ ಬಿಡಿ. ರೋಗಕ್ಕೆ ಜಾತಿ ಧರ್ಮದ ಅಂಟು ಮೆತ್ತಿದರೆ ಅಪಾಯ. ಕೆಲವರು ಮಾಡಿದ್ದು ಸರಿ ಎನ್ನುವ ಬೆಂಬಲ ನನ್ನದಲ್ಲ. ನಾವು ಯುದ್ಧ ಮಾಡ್ತಾ ಇರೋದು ಕೋವಿಡ್ ವಿರುದ್ಧ ಹೊರತಾಗಿ ಸಮುದಾಯಗಳ ಮಧ್ಯೆ ಅಲ್ಲ. ಈಗ ತಪ್ಪು ಸರಿ ಲೆಕ್ಕ ಹಾಕುವ ಸಮಯವಂತೂ ಅಲ್ಲ. ಅನಾಹುತ ಈಗಾಗಲೇ ಆಗಿದೆ.

ಆ ಅನಾಹುತ ಇನ್ನೊಂದು ರೂಪಕ್ಕೆ ಹೋಗೊದು ಬೇಡ ಎನ್ನುವ ಪ್ರೌಢಿಮೆ ಎಲ್ಲರಲ್ಲೂ ಮೂಡಬೇಕು. ದೆಹಲಿಗೆ ಹೋದವರು ಪರೀಕ್ಷೆ ಮಾಡಿಸಿಕೊಳ್ಳಿ ಎನ್ನುವ ಸಿಎಂ ಮನವಿಗೆ ಸ್ಪಂದಿಸಲಿ ಎನ್ನೋದು ಸಮಾಜದ ಆಶಯ. ಸುಮ್ ಸುಮ್ನೆ ಯಡಿಯೂರಪ್ಪರನ್ನ ಯೋಗಿ ಆದಿತ್ಯನಾಥರನ್ನು ಹೋಲಿಕೆ ಮಾಡಿ ಅಕ್ಷರ ಆಯಾಸ ಮಾಡಿಕೊಳ್ಳದಿರಿ. ಯಡಿಯೂರಪ್ಪರಿಗೆ ಆಗಿರುವ ರಾಜಕೀಯ ಅನುಭವದಷ್ಟು ಯೋಗಿ ಆದಿತ್ಯನಾಥ್ ರಿಗೆ ವಯಸ್ಸು ಆಗಿಲ್ಲ ಆನ್ನೋದು ನೆನಪಿರಲಿ. ಇದು ಯಡಿಯೂರಪ್ಪ ಅಭಿಮಾನಿಯಾಗಿಯೊ ಅಥವಾ ಯೋಗಿ ಆದಿತ್ಯನಾಥರ ವಿರೋಧಿಯಾಗಿಯೊ ಬರೆದಿಲ್ಲ ಎಂದು ನೀವು ಸ್ಪಷ್ಟವಾಗಿ ಅರ್ಥ ಮಾಡಿಕೊಂಡರೆ ಸಾಕು.

ಇನ್ನೊಂದು ವಿಚಾರ ಕೊನೆಯಲ್ಲಿ ಮೋದಿ ಕರೆ ನೀಡಿದ ಏಕತೆಯ ದೀಪದ ಉದ್ದೇಶ ಸಹ ದೇಶದಲ್ಲಿ ಆಗ್ತಾ ಇರೋ ಸಮುದಾಯಗಳ ಮೇಲಿನ ಚರ್ಚೆಯ ವಿಷಯವನ್ನು ಡೈವರ್ಟ್ ಮಾಡುವ ಪ್ರಯತ್ನದ ಭಾಗವೂ ಹೌದು….

  • ರವಿ ಶಿವರಾಮ್
Leave A Reply

Your email address will not be published.