ಬಿಜೆಪಿಯಲ್ಲಿ ಭುಗಿಲೆದ್ದ ಅಸಮಧಾನ…! ನನಗೆ ಮಂತ್ರಿಗಿರಿ ತಪ್ಪಿಸಿದ್ದೇ ಬೊಮ್ಮಾಯಿ ಎಂದ ಶಾಸಕ…!!

ಬೆಂಗಳೂರು : ಮೂರು ದಿನಗಳ ಸರ್ಕಸ್ ಬಳಿಕ ರಚನೆಯಾದ ರಾಜ್ಯ ಸಚಿವ ಸಂಪುಟ ಕಮಲ ಪಾಳಯದಲ್ಲಿ ಅಸಮಧಾನ ಹುಟ್ಟುಹಾಕಿದ್ದು, ನನಗೆ ಸಚಿವ ಸ್ಥಾನ ತಪ್ಪಿಸಿದ್ದೇ ಸಿಎಂ ಬೊಮ್ಮಾಯಿ ಎನ್ನುವ ಮೂಲಕ ಬಿಜೆಪಿ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದಾರೆ.

ಸಿಎಂ ತವರು ಜಿಲ್ಲೆ ಹಾವೇರಿಯ ಶಾಸಕ ನೆಹರು ಒಲೇಕಾರ್ ಬೊಮ್ಮಾಯಿ ವಿರುದ್ಧ ಬಹಿರಂಗ ಅಸಮಧಾನ ತೋಡಿಕೊಂಡಿದ್ದು, ನನಗೆ ಹೈಕಮಾಂಡ್ ಸಚಿವ ಸ್ಥಾನ ನೀಡಲು ಒಪ್ಪಿಕೊಂಡಿತ್ತು. ಆದರೆ ಬೊಮ್ಮಾಯಿಯವರೇ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬೊಮ್ಮಾಯಿಯವರ ದ್ವೇಷ ರಾಜಕಾರಣದಿಂದ ನನಗೆ ಸಚಿವ ಸ್ಥಾನ ತಪ್ಪಿದೆ. ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ರವಾನಿಸಿದ್ದಾರೆ. ಇದಕ್ಕೂ ಮುನ್ನ ನಿನ್ನೆಯೇ ನೆಹರು ಒಲೆಕಾರ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದ ಬೆಂಬಲಿಗರ ಪೈಕಿ ಇಬ್ಬರೂ ನೀರಿನ ಟ್ಯಾಂಕ್‌ನಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದರು.

ಲಕ್ಷ್ಮಣ ಸವದಿ, ಶೆಟ್ಟರ್, ನೆಹರು ಒಲೆಕಾರ್, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಹಲವು ಉತ್ತರ ಕರ್ನಾಟಕದ ಭಾಗದ ಶಾಸಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದು ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದೆ.

Comments are closed.